BJPvsBJP ಕಿತ್ತಾಟವು ಅಶೋಕರನ್ನು ಬಲಿಪಶು ಮಾಡಲಿದೆ: ಟ್ವೀಟ್ ಮೂಲಕ ಕಾರಣ ತಿಳಿಸಿದ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 12: ಬಿಜೆಪಿ ಈಗ ಏಕಕಾಲಕ್ಕೆ ಎಲ್ಲವನ್ನೂ ಎದುರಿಸುತ್ತಿದೆ. ಕಣ್ಣೀರು ಪರ್ವ, ಬಂಡಾಯ ಪರ್ವ, ನಿವೃತ್ತಿ ಪರ್ವ, ಆಕ್ರೋಶ ಪರ್ವ, ರಾಜೀನಾಮೆ ಪರ್ವಕ್ಕೆ ಬಿಜೆಪಿ ಸಾಕ್ಷಿಯಾಗುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ #BJPvsBJP ಈ ಚುನಾವಣೆಯಲ್ಲಿ ಜ್ವಾಲಾಮುಖಿಯಾಗಿ ಸ್ಪೋಟಿಸುವುದು ನಿಶ್ಚಿತ. ನಂಬಿಸಿ ಕತ್ತು ಕುಯ್ಯುವುದು ಎಂಬ ಮಾತಿಗೆ ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

'ಆರ್. ಅಶೋಕ್ ಅವರಿಗೆ ಎರಡು ಟಿಕೆಟ್, ಎನ್. ಆರ್ ರಮೇಶ್ಗೆ ಒಂದೂ ಟಿಕೆಟ್ ಇಲ್ಲ. ಬಿಜೆಪಿಯ ಪ್ರಯೋಗವು ಆರ್. ಅಶೋಕ್ರವರಿಗೆ ಖೆಡ್ಡಾವಾಗಿ ಪರಿಣಮಿಸಲಿದೆ. ಪದ್ಮನಾಭನಗರದಲ್ಲಿ ಬಂಡಾಯವೆದ್ದ ಎನ್.ಆರ್ ರಮೇಶ್ ಬಿಜೆಪಿಗೇ ಮಳುವಾಗುವುದು ನಿಶ್ಚಿತ. #BJPvsBJP ಕಿತ್ತಾಟವು ಅಶೋಕರನ್ನು ಬಲಿಪಶು ಮಾಡಲಿದೆ' ಎಂದು ಕಾಂಗ್ರೆಸ್ ಹೇಳಿದೆ.
'ಬಿಜೆಪಿ ಈಗ ಕಾವಲಿಯಲ್ಲಿ ಕುದಿಯುತ್ತಿರುವ ಬಿಸಿ ಎಣ್ಣೆಯಂತಾಗಿದೆ. ಯಾರಿಗೆ ಸಿಡಿಯುತ್ತದೆಯೋ, ಯಾರನ್ನು ಸುಡುತ್ತದೆಯೋ ಎಂಬುದು ಸ್ವತಃ ಬಿಜೆಪಿಗೇ ಅಂದಾಜು ಸಿಗುತ್ತಿಲ್ಲ. ಈಶ್ವರಪ್ಪರದ್ದು ಸ್ವಯಂ ಪ್ರೇರಣೆಯ ನಿವೃತ್ತಿಯಾಗಿದ್ದರೆ ಬೆಂಬಲಿಗರು ಪಕ್ಷದ ವಿರುದ್ಧ ಸಿಡಿದು ನಿಂತಿದ್ದೇಕೆ' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ಮಾಜಿ ಸಿಎಂ ಶೆಟ್ಟರ್, ಡಿಸಿಎಂ ಸವದಿಯಂತವರನ್ನೇ ಮೂಲೆಗುಂಪು ಮಾಡಲು ಕಾರಣವೇನು ಬಿಜೆಪಿ? ಇವರು ಅಸಮರ್ಥರೇ ಅಥವಾ ಲಿಂಗಾಯತ ನಾಯಕರನ್ನು ತುಳಿಯುವ ಪ್ರಕ್ರಿಯೆಯೇ? ಬಿಜೆಪಿ ನಾಯಕರು ಪಕ್ಷವನ್ನು ತಾಯಿ ಎಂದುಕೊಂಡಿದ್ದಾರೆ, ಆದರೆ ಬಿಜೆಪಿ ವಿಷ ಉಣಿಸುವ "ಪೂತನಿ" ಎಂಬುದು ಸವದಿಗೆ ಅನುಭವವಾಗಿದೆ! ಮುಂದೆ ಉಳಿದವರಿಗೂ ಅನುಭವವಾಗಲಿದೆ' ಎಂದು ಕಾಂಗ್ರೆಸ್ ಟ್ವೀಟಿಸಿದೆ.

'ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಅನಿಲ್ ಬೆನಕೆ ಬೆಂಬಲಿಗರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿ ಇದು. ಬಿಜೆಪಿಯೇ ಕೊಟ್ಟ ಕೇಸರಿ ಧ್ವಜಗಳು ಬಿಜೆಪಿಯನ್ನೇ ಸುಡುತ್ತಿವೆ. ಕಾಂಗ್ರೆಸ್ ಗೆಲುವಿನತ್ತ ಗಮನ ಕೊಡುತ್ತಿದೆ, ಬಿಜೆಪಿಯನ್ನು ಸೊಲಿಸಲು ಬಿಜೆಪಿಗರೇ ಸಾಕು' ಎಂದು ಕೆಪಿಸಿಸಿ ಹೇಳಿದೆ.
'ಕಿತ್ತೂರಿನ ಬಿಜೆಪಿ ಶಾಸಕ ಮಹಾಂತೇಶ್ ದೊಡ್ದನಗೌಡ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಕಾಲ್ಕೀಳುವಂತೆ ಮಾಡಿದ್ದಾರೆ. ಅಭಿವೃದ್ಧಿಯನ್ನು ಮರೆತು ಐದು ವರ್ಷಗಳ ಕಾಲ ಕಮಿಷನ್ ಲೂಟಿಯನ್ನೇ ಕಾಯಕ ಮಾಡಿಕೊಂಡ ಬಿಜೆಪಿ ಶಾಸಕರುಗಳನ್ನು ಜನತೆ ಪೊರಕೆ ಹಿಡಿದು ಓಡಿಸುವ ಕಾಲ ಬಂದಿದೆ. ಈ ಜನಾಕ್ರೋಶಕ್ಕೆ ಬಿಜೆಪಿ ಮುಕ್ತವಾಗುವುದು ನಿಶ್ಚಿತ' ಎಂದು ಕಾಂಗ್ರೆಸ್ ಹೇಳಿದೆ.
ಚುನಾವಣಾ ಅಧಿಕಾರಿಗಳಿಂದ ಅಕ್ರಮ- ಡಿಕೆಶಿ
'ಚುನಾವಣಾಧಿಕಾರಿಗಳು ಹೊಸ ಮತದಾರರ ಸೇರ್ಪಡೆ ಅಭಿಯಾನದ ಹೆಸರಲ್ಲಿ ಈ ಅಕ್ರಮ ಮಾಡಿದ್ದಾರೆ. ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಈ ಅಕ್ರಮ ನಡೆಯುತ್ತಿದೆ. ಈ ವಿಚಾರವಾಗಿ ನಾವೇ ತನಿಖೆ ಮಾಡಿದ್ದೇವೆ. ಯಾರೆಲ್ಲಾ 2 ಮತಗಳನ್ನು ಹೊಂದಿದ್ದಾರೋ, ಅದಕ್ಕೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
'ಮಹದೇವಪುರ ಕ್ಷೇತ್ರದಲ್ಲಿ ಒಂದು ಮತವನ್ನು 2-3 ಕಡೆ ಅಕ್ರಮವಾಗಿ ಸೇರಿಸಲಾಗಿದೆ. ಹೆಸರು, ತಂದೆ ಹೆಸರು ಎಲ್ಲಾ ಒಂದೇ ಆಗಿದ್ದು, ಮತದದಾರರ ಫೋಟೋ ಮಾತ್ರ ಬೇರೆ ಬೇರೆ. ನಮ್ಮ ಬಳಿ 42,222 ಅಕ್ರಮ ಹೆಸರು ಸೇರಿಸಿರುವ ದಾಖಲೆ ಇವೆ' ಎಂದು ತಿಳಿಸಿದ್ದಾರೆ.












Click it and Unblock the Notifications