ಭಾರತದಿಂದ ಕರ್ನಾಟಕವನ್ನು ಪ್ರತ್ಯೇಕಿಸಲು ಕಾಂಗ್ರೆಸ್ ಬಯಸುತ್ತಿದೆ: ಪ್ರಧಾನಿ ಮೋದಿ
ಬೆಂಗಳೂರು, 08: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೊನೆಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಪ್ರಧಾನಿ ಮೋದಿ ಮಾತನಾಡಿದರು. 'ಭಾರತದಿಂದ ಕರ್ನಾಟಕವನ್ನು ಪ್ರತ್ಯೇಕಿಸಲು ಕಾಂಗ್ರೆಸ್ ಪಕ್ಷವು ಬಹಿರಂಗವಾಗಿ ಪ್ರತಿಪಾದಿಸುತ್ತಿದೆ' ಎಂದು ಆರೋಪಿಸಿದರು.
ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಶನಿವಾರ ಹುಬ್ಬಳ್ಳಿಯಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಒಂದು ದಿನದ ನಂತರ ಪ್ರಧಾನಿಯವರು ಈ ಆರೋಪ ಮಾಡಿದ್ದಾರೆ.

'ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಅಥವಾ ಸಮಗ್ರತೆಗೆ ಧಕ್ಕೆ ತರಲು ಕಾಂಗ್ರೆಸ್ ಯಾರಿಗೂ ಅವಕಾಶ ನೀಡುವುದಿಲ್ಲ' ಎಂದು ಸೋನಿಯಾ ಗಾಂಧಿ ಹೇಳಿದ್ದರು.
ಇದನ್ನು ಉಲ್ಲೇಖಿಸಿ ಮಾತನಾಡಿರುವ ಪ್ರಧಾನಿ ಮೋದಿ, 'ತುಕ್ಡೆ-ತುಕ್ಡೆ ಗ್ಯಾಂಗ್' ಕಾಯಿಲೆಯು ಕಾಂಗ್ರೆಸ್ನ ಉನ್ನತ ಹಂತವನ್ನು ತಲುಪಿದೆ ಎಂದು ಆರೋಪಿಸಿದರು.

'ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ಸಿನ ರಾಜಮನೆತನವು ಮುಂಚೂಣಿಯಲ್ಲಿರುತ್ತದೆ. ನಾನು ಇಲ್ಲಿ ಗಂಭೀರವಾದ ವಿಷಯದ ಬಗ್ಗೆ ಮಾತನಾಡಲು ಬಯಸುತ್ತೇನೆ. ನನ್ನ ಹೃದಯದಲ್ಲಿ ಸಾಕಷ್ಟು ನೋವಿನಿಂದ ನಾನು ಅದನ್ನು ಹೇಳಲು ಬಯಸುತ್ತೇನೆ. ಈ ಕುಟುಂಬವು ದೇಶದ ರಾಜಕೀಯದ ಮೇಲೆ ಪ್ರಭಾವ ಬೀರಲು ವಿದೇಶಿ ಶಕ್ತಿಗಳ ಹಸ್ತಕ್ಷೇಪವನ್ನು ಪ್ರೋತ್ಸಾಹಿಸುತ್ತಿದೆ' ಎಂದು ಮೋದಿ ಹೇಳಿದರು.
ಭಾರತವನ್ನು ದ್ವೇಷಿಸುವ ವಿದೇಶಿ ರಾಜತಾಂತ್ರಿಕರನ್ನು ( ಕಾಂಗ್ರೆಸ್ ನಾಯಕರು) ರಹಸ್ಯವಾಗಿ ಭೇಟಿಯಾಗುತ್ತಿದ್ದಾರೆ ಎಂದು ಆರೋಪಿಸಿದರು. ಪದೇ ಪದೇ ರಾಷ್ಟ್ರದ ಸಾರ್ವಭೌಮತೆಗೆ ಅವಮಾನಿಸುವ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಮತ್ತು ಅವರಿಗೆ ನಾಚಿಕೆ ಇಲ್ಲ ಎಂದೂ ಮೋದಿ ಜರಿದರು.

ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ನ ಶಾಹಿ ಪರಿವಾರ (ರಾಜ ಕುಟುಂಬ) ಎಲ್ಲ ಮಿತಿಗಳನ್ನು ಮುರಿದು ದೇಶದ ಭಾವನೆಗಳನ್ನು ಹತ್ತಿಕ್ಕುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಮೋದಿ ಹೇಳಿದರು.
'ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ಸಾರ್ವಭೌಮತ್ವವನ್ನು ರಕ್ಷಿಸಬೇಕೆಂದು ಕಾಂಗ್ರೆಸ್ನ ರಾಜಮನೆತನದವರು ಹೇಳುತ್ತಿದ್ದಾರೆ. ಇದು ಇಡೀ ದೇಶಕ್ಕೆ ನೋವು ತಂದಿದೆ' ಎಂದು ವಾಗ್ದಾಳಿ ನಡೆಸಿದರು.
'ಅವರು ಸಂಸತ್ತಿನಲ್ಲಿ ಇಷ್ಟು ವರ್ಷ ಕುಳಿತು, ಭಾರತದ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಇದನ್ನು ಹೇಳುತ್ತಾರೆ. ಕರ್ನಾಟಕದ ಸಾರ್ವಭೌಮತ್ವ, ಅದರ ಅರ್ಥವೇನು ಗೊತ್ತಾ? ಒಂದು ದೇಶ ಸ್ವತಂತ್ರವಾದಾಗ ಮಾತ್ರ ಆ ದೇಶವನ್ನು ಸಾರ್ವಭೌಮ ಎಂದು ಕರೆಯಲಾಗುತ್ತದೆ. ಕಾಂಗ್ರೆಸ್ ಹೇಳುತ್ತಿರುವುದರ ಅರ್ಥವೇನೆಂದರೆ, ಕರ್ನಾಟಕ ಭಾರತದಿಂದ ಪ್ರತ್ಯೇಕವಾಗಬೇಕಿದೆ. ಇದನ್ನು ಕಾಂಗ್ರೆಸ್ ನಂಬುತ್ತದೆ' ಎಂದು ಅವರು ಹೇಳಿದರು.

ಇದನ್ನು ಅನುಮೋದಿಸುತ್ತೀರಾ ಮತ್ತು ಇಂತಹ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ಗೆ ಶಿಕ್ಷೆ ವಿಧಿಸುತ್ತೀರಾ ಎಂದು ನೆರೆದಿದ್ದ ಜನರಿಗೆ ಪ್ರಧಾನಿ ಮೋದಿ ಪ್ರಶ್ನೆ ಕೇಳಿದರು. ಇದರರ್ಥ ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ 'ಬೇರ್ಪಡಿಸುವ' ಬಗ್ಗೆ ಬಹಿರಂಗವಾಗಿ ಪ್ರತಿಪಾದಿಸುತ್ತಿದೆ ಎಂದು ಹೇಳಿದರು.
'ತುಕ್ಡೆ-ತುಕ್ಡೆ ಗ್ಯಾಂಗ್' ಎಂಬ ರೋಗವು ಕಾಂಗ್ರೆಸ್ನ ಉನ್ನತ ಹಂತವನ್ನು ತಲುಪುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂಬುದಾಗಿಯೂ ಅವರು ಒತ್ತಿ ಹೇಳಿದರು. ಪಕ್ಷವು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡ ಹೋರಾಟಗಾರರನ್ನು ಅವಮಾನಿಸಿದೆ. ಕೋಟ್ಯಂತರ ಕನ್ನಡಿಗರ ದೇಶಪ್ರೇಮಕ್ಕೆ ಅವಮಾನ ಮಾಡಿದೆ ಎಂದು ಆರೋಪಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕ ಭಾರತದ ಅವಿಭಾಜ್ಯ ಅಂಗ ಎಂದು ರಾಜ್ಯ ಗೀತೆಯಲ್ಲಿ ಹೇಳಿದ್ದಾರೆ. 'ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ' ಎಂದು ಘೋಷಿಸಿದ್ದಾರೆ. ಪ್ರತಿಯೊಬ್ಬ ಕನ್ನಡಿಗನಿಗೂ ಕರ್ನಾಟಕ ತಾಯಿ. ಭಾರತಾಂಬೆಯ ಮಗಳು ಎಂದು ತಿಳಿಸಿದ್ದಾರೆ ಎಂದು ಮೋದಿ ಪ್ರತಿಪಾದಿಸಿದರು.
ಕರ್ನಾಟಕದ ಭಾವನೆಗಳನ್ನು ಅವಮಾನಿಸುವುದು ರಾಜ್ಯದ ಸಂಸ್ಕೃತಿ ಮತ್ತು ಹೆಮ್ಮೆಯನ್ನು ಅವಮಾನಿಸಿದಂತೆ ಎಂದು ಅವರು ಹೇಳಿದರು.
ಕಾಂಗ್ರೆಸ್ ರಾಜ್ಯಗಳ ನಡುವೆ ಬಿರುಕು ಮೂಡಿಸುತ್ತಿದೆ ಮತ್ತು ಕೋಮು ಬೆಂಕಿಯನ್ನು ಹರಡುತ್ತಿದೆ ಎಂದು ಆರೋಪಿಸಿದ ಪ್ರಧಾನಿ, ಅವರು ಇಂತಹ ಕೆಲಸಗಳನ್ನು ಮಾಡಿದಾಗಲೆಲ್ಲಾ ಭಾರತದ ಜನರು ಅವರನ್ನು ಸೋಲಿಸಲು ಒಗ್ಗೂಡಿದ್ದಾರೆ ಎಂದೂ ಟೀಕಿಸಿದರು.












Click it and Unblock the Notifications