ಬಿಜೆಪಿಯ ಮೋದಿ ಭಜನೆ ವಿರುದ್ಧ ಕಾಂಗ್ರೆಸ್, ಜೆಡಿಎಸ್ 'ಕನ್ನಡ ಅಸ್ಮಿತೆ' ಅಸ್ತ್ರ
ಬೆಂಗಳೂರು, ಏಪ್ರಿಲ್ 26: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾದಂತೆ ಅನೇಕ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಇದರಲ್ಲಿ ಲಿಂಗಾಯತ ಸಿಎಂ, ಕನ್ನಡ ಭಾಷೆ, ಅಮುಲ್ ನಂದಿನಿ ವಿಚಾರಗಳು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿವೆ. ಇವು ಕನ್ನಡಿಗರಿಗೆ ಚಿಂತನೆಯ ಸನ್ನಿವೇಶ ಸೃಷ್ಟಿಸಿವೆ.
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕನ್ನಡಿಗರಿಗೆ ಮೋದಿ ಆಶೀರ್ವಾದ ಬೇಕಿದ್ದರೆ ಬಿಜೆಪಿಗೆ ಮತ ಹಾಕಿ ಎಂದಿದ್ದರು. ಆದರೆ ಇದಕ್ಕೆ ತಿರುಗೇಟು ನೀಡಿದ್ದ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಕನ್ನಡಿಗರಿಗೆ ಪ್ರಧಾನಿ ಮೋದಿ ಅವರ ಆಶೀರ್ವಾದ ಬೇಕಿಲ್ಲ ಬದಲಾಗಿ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಹಾಗೂ ನಾಡಿನ ಖ್ಯಾತ ಕವಿ ಕುವೆಂಪು ಅವರ ಆಶೀರ್ವಾದವೇ ಸಾಕು ಎಂದಿದ್ದರು.

ಇಲ್ಲಿ ಪ್ರಿಯಾಂಕಾ ಗಾಂಧಿ ಅವರು ಬುದ್ದಿವಂತಿಕೆಯಿಂದ ಎರಡು ಅಸ್ತ್ರ ಬಳಸಿರುವುದನ್ನು ಕಾಣಬಹುದು. ಒಂದು ಕನ್ನಡದ ಅಸ್ಮಿತೆಯ ಅಸ್ತ್ರ ಹಾಗೂ ಎರಡು ಜಾತಿ ಅಸ್ತ್ರ. ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಯಾವಾಗಲೂ ಪ್ರಾದೇಶಿಕತೆಯನ್ನು ಎತ್ತಿಹಿಡಿಯುತ್ತದೆ. ಅದೇ ಸಮಯದಲ್ಲಿ ಜಾತಿ ಸಮೀಕರಣದ ನಿಲುವಿಗೂ ಬದ್ದವಾಗಿರುತ್ತದೆ ಎಂದು ಸಾರಿದ್ದಾರೆ.
ಮೊನ್ನೆ ತಾನೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯುವಕರೊಂದಿಗೆ ಸಂವಾದ ನಡೆಸುವ ವೇಳೆ ಆ ಯುವತಿಗೆ ನೀವು ಕನ್ನಡದಲ್ಲೆ ಮಾತನಾಡಿ ಎಂದು ಹೇಳಿದ್ದರು. ಈ ಮೂಲಕ ಕನ್ನಡಕ್ಕೆ ಒತ್ತು ನೀಡುವ ಅವರ ನಿಲುವನ್ನು ವ್ಯಕ್ತಪಡಿಸಿದ್ದರು. ಅದರಂತೆ ಪ್ರಿಯಾಂಕಾ ಗಾಂಧಿ ಅವರು ಕೂಡ ನಿನ್ನೆ ಮೈಸೂರಿನಲ್ಲಿ ಮತ ಹಾಕದಿದ್ದರೆ ಮೋದಿ ಆಶೀರ್ವಾದ ಸಿಗುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷರು ಅಹಂಕಾರದಿಂದ ಹೇಳಿದ್ದಾರೆ. ಇದು ಬಸವಣ್ಣ ಹಾಗೂ ಕುವೆಂಪು ಅವರ ನಾಡು ಎಂದು ಹೇಳಿದ್ದರು. ಈ ಮೂಲಕ ಕನ್ನಡಿಗರು ಎಂದಿಗೂ ಬಿಜೆಪಿ ಮರ್ಜಿಗೆ ಒಳಗಾಗಬಾರದು ಎಂದು ಹೇಳಿದ್ದರು.
ಈ ವಿಧಾನಸಭಾ ಚುನಾವಾಣೆಯಲ್ಲಿ ಮೋದಿ ಮುಖ್ಯರಲ್ಲ. ಕರ್ನಾಟಕದ ಜನರಷ್ಟೇ ಮುಖ್ಯ. ನಿಮ್ಮ ಅನುಭವದ ಮೇಲೆ ಮತ ನೀಡಿ. ಯೋಚಿಸಿ ಮತ ನೀಡಿ ಎಂದು ಕರೆ ನೀಡಿದ್ದರು, ಈ ವೇಳೆ ನಂದಿನಿ ಬಗ್ಗೆಯೂ ಮಾತನಾಡಿದ ಅವರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಂದಿನಿ ಬ್ರಾಂಡ್ಗೆ ಬಲ ನೀಡಲಾಗುವುದು. ರಾಜ್ಯದಲ್ಲಿ ಹೊರ ರಾಜ್ಯದ ಹಾಲು ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳುವ ಮೂಲಕ ಕನ್ನಡಿಗರ ಮನ ಗೆಲ್ಲಲು ಪ್ರಯತ್ನಿಸಿದರು.
ಪ್ರಿಯಾಂಕಾ ಅವರಂತೆಯೇ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರು ನಿನ್ನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ಮಾತನಾಡಿ, ಕನ್ನಡಿಗರು ನಾವು ತಮಿಳುನಾಡಿನ ಜನರನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್ ಆಗಲಿ ಜೆಡಿಎಸ್ ಆಗಲಿ ಇಲ್ಲ. ಜನರು ಪ್ರಾದೇಶಿಕ ಪಕ್ಷಕ್ಕೆ ಮತ ನೀಡಿದ್ದಾರೆ. ಅದರಂತೆ ಈ ಬಾರಿಯೂ ಕನ್ನಡದ ಜನ ಪ್ರಾದೇಶಿಕ ಪಕ್ಷ ಜೆಡಿಎಸ್ಗೆ ಮತ ನೀಡಬೇಕು ಎಂದು ಹೇಳಿದ್ದಾರೆ.
ಕನ್ನಡ ಭಾಷೆ, ನಂದಿನಿ ಹಾಲು ಹಾಗೂ ಕೇಂದ್ರ ಸರ್ಕಾರಿ ಸೇವೆಗಳನ್ನು ಕನ್ನಡದಲ್ಲಿ ನಡೆಸುವ ಬಗ್ಗೆ ಜೆಡಿಎಸ್ ಮೊದಲಿನಿಂದಲೂ ತನ್ನ ಧ್ವನಿ ಎತ್ತುತ್ತಲೇ ಬಂದಿದೆ. ಬಿಜೆಪಿ ವಿರುದ್ಧ ಸಮರ ಸಾರಿರುವ ಈ ಎರಡೂ ಪಕ್ಷಗಳು ಕರ್ನಾಟಕದಲ್ಲಿ ಈಗ ಕನ್ನಡದ ದಾಳ ಉರುಳಿಸಿವೆ. ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಾಲಿ ಅಸ್ಮಿತೆಯ ಅಸ್ತ್ರ ಬಳಸಿ ಯಶಸ್ಸು ಸಾಧಿಸಿದ್ದರು.
ಅದರಂತೆ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಕನ್ನಡದ ಅಸ್ಮಿತೆಯೆ ಅಸ್ತ್ರವನ್ನು ಬಳಸುತ್ತಿವೆ. ಇದು ಕರ್ನಾಟಕದಲ್ಲಿ ವರ್ಕ್ ಆಗುತ್ತಾ ನೋಡಬೇಕಿದೆ. ಕನ್ನಡಪರ ಹೋರಾಟಗಾರರು ಯಾವಗಲೂ ಬಲಪಂಥೀಯ ಚಿಂತನೆಗಳ ವಿರುದ್ಧ ಹೋರಾಟ ಮಾಡುತ್ತಲೇ ಬಂದಿವೆ, ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿಯ ಲಿಂಗಾಯತ ಸಿಎಂ ಅಸ್ತ್ರಕ್ಕೆ ಬದಲಾಗಿ ಕನ್ನಡ ಅಸ್ಮಿತೆಯ ಅಸ್ತ್ರ ಬಳಸಿರುವುದು ಮತವಾಗಿ ಪರಿವರ್ತನೆಯಾಗಲಿದೆಯೇ ನೋಡಬೇಕಿದೆ.












Click it and Unblock the Notifications