ಹಾಸನ ಟಿಕೆಟ್ ವಿವಾದಕ್ಕೆ ನಾಳೆ ಫುಲ್ಸ್ಟಾಪ್ ಇಡ್ತಾರಾ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು, ಏಪ್ರಿಲ್. 06: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ, ವಿವಾದಿತ ಹಾಸನ ಕ್ಷೇತ್ರ ಸೇರಿದಂತೆ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಏಪ್ರಿಲ್ 7 ರಂದು ಅಂತಿಮಗೊಳಿಸಲಾಗುವುದು ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಗುರುವಾರ ಹೇಳಿದ್ದಾರೆ.
ಜೆಡಿಎಸ್ನಲ್ಲಿ ಉಂಟಾಗಿರುವ ದೊಡ್ಡ ವಿವಾದವೆಂದರೇ ಅದು ಹಾಸನ ಟಿಕೆಟ್ ಫೈಟ್. ಈ ಟಿಕೆಟ್ ಹಂಚಿಕೆ ಸಮಸ್ಯೆ ನಾಳೆ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಎಚ್ ಡಿ ಕುಮಾರಸ್ವಾಮಿ, ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಈ ವಿವಾದದಿಂದಲೇ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿದೆ.

"ಪಂಚರತ್ನ ಯಾತ್ರೆ ಇಂದು (ಗುರುವಾರ) ಪಿರಿಯಾಪಟ್ಟಣದ ಗ್ರಾಮಗಳಲ್ಲಿ ಸುಮಾರು 105 ಕಿ.ಮೀ ಸಂಚರಿಸಲಿದೆ. ನಾನು ಸುಮಾರು 90 ಗ್ರಾಮಗಳಿಗೆ ಭೇಟಿ ನೀಡುತ್ತೇನೆ, ನಾನು ಹಿಂತಿರುಗುವ ಹೊತ್ತಿಗೆ ತಡವಾಗುತ್ತದೆ. ಹೀಗಾಗಿ ನಾಳೆ ನಾನು ಮರಳಿದ ನಂತರ ನಾವು ಟಿಕೆಟ್ ಹಂಚಿಕೆಯನ್ನು ಅಂತಿಮಗೊಳಿಸುತ್ತೇವೆ" ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಸೇರಿದಂತೆ ಉಳಿದ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಗುರುವಾರದೊಳಗೆ ಪಕ್ಷ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಆ ಪಟ್ಟಿಯಲ್ಲಿ ಹಾಸನದ ಅಭ್ಯರ್ಥಿಯ ಹೆಸರು ಇರಲಿದೆ ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು.
ಜೆಡಿಎಸ್ ಪಕ್ಷದ ಮೂಲಗಳ ಪ್ರಕಾರ, ಹಾಸನ ಟಿಕೆಟ್ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಎರಡನೇ ಪಟ್ಟಿ ವಿಳಂಬವಾಗುತ್ತಿದೆ. ದೆಹಲಿಯಲ್ಲಿರುವ ಪಕ್ಷದ ವರಿಷ್ಠ ಎಚ್ಡಿ ದೇವೇಗೌಡ ಅವರು ಪುತ್ರರಾದ ಕುಮಾರಸ್ವಾಮಿ ಮತ್ತು ಹೆಚ್ಡಿ ರೇವಣ್ಣ ಅವರೊಂದಿಗೆ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಣಕ್ಕಿಳಿದಿರುವ ಭವಾನಿ ರೇವಣ್ಣ, ಕುಮಾರಸ್ವಾಮಿ ಪದೇ ಪದೇ ಸ್ಪಷ್ಟಪಡಿಸುತ್ತಿದ್ದರೂ ಮಣಿಯದಿರುವ ಹಿನ್ನೆಲೆಯಲ್ಲಿ ಹಾಸನ ಸೀಟು ವಿಚಾರವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಅತ್ತಿಗೆ ಭವಾನಿ ರೇವಣ್ಣ ಅವರನ್ನು ಹಾಸನದಲ್ಲಿ ಕಣಕ್ಕಿಳಿಸುವುದಿಲ್ಲ, ಬದಲಿಗೆ "ಪಕ್ಷದ ನಿಷ್ಠಾವಂತ ಕಾರ್ಯಕರ್ತ" ಒಬ್ಬರು ಕಣಕ್ಕೆ ಇಳಿಯುತ್ತಾರೆ ಎಂದು ಕುಮಾರಸ್ವಾಮಿ ಪದೇ ಪದೇ ತಿಳಿಸಿದ್ದಾರೆ.
ಹಾಸನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆಯಾಗಿರುವ ಭವಾನಿ ರೇವಣ್ಣ ಅವರು ಕುಮಾರಸ್ವಾಮಿ ಅವರ ಹಿರಿಯ ಸಹೋದರ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪತ್ನಿ ಹಾಗೂ ದೇವೇಗೌಡರ ಸೊಸೆ. ಭವಾನಿ ರೇವಣ್ಣ ಅವರಿಗೆ ಅವರ ಪತಿ ಮತ್ತು ಪುತ್ರರಾದ ಹಾಸನದ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಮತ್ತು ಎಂಎಲ್ಸಿ ಸೂರಜ್ ರೇವಣ್ಣ ಅವರ ಬೆಂಬಲವಿದೆ.
ಹಾಸನ ಟಿಕೆಟ್ ವಿಚಾರವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗುವ ಲಕ್ಷಣಗಳಿದ್ದು, ವಯೋಸಹಜ ಅನಾರೋಗ್ಯದಿಂದ ಕೆಲ ದಿನಗಳಿಂದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದ ದೇವೇಗೌಡರು ಭಾನುವಾರ ಸಂಜೆ ತಮ್ಮ ಇಬ್ಬರು ಪುತ್ರರು ಹಾಗೂ ಭವಾನಿ ರೇವಣ್ಣ ಜೊತೆಗೆ ಮಾತುಕತೆ ನಡೆಸಿದರು.
ಆದರೂ ಈ ಭಿನ್ನಾಭಿಪ್ರಾಯ ಕಡಿಮೆಯಾಗಿಲ್ಲ. ಹಾಸನ ಟಿಕೆಟ್ ವಿಚಾರದಲ್ಲಿ ಗೌಡರ ಮಾತೇ ಅಂತಿಮ ಎಂದು ಕುಮಾರಸ್ವಾಮಿ ಹಾಗೂ ರೇವಣ್ಣ ಇಬ್ಬರೂ ಸಮರ್ಥಿಸಿಕೊಂಡಿದ್ದಾರೆ. ಡಿಸೆಂಬರ್ನಲ್ಲಿ ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಎರಡನೇ ಪಟ್ಟಿ ಬಿಡುಗಡೆಗೆ ಇನ್ನೂ ಹಾಸನ ಕ್ಷೇತ್ರ ಅಡ್ಡಗಾಲಾಗಿದೆ.












Click it and Unblock the Notifications