RR Nagar: ಮನೆ ಮನೆ ಪ್ರಚಾರ ಆರಂಭಿಸಿದ ಮುನಿರತ್ನ: ಮತದಾರರೇ ನನ್ನ ದೇವ್ರು ಎಂದ ಬಿಜೆಪಿ ಅಭ್ಯರ್ಥಿ
ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದ ಜ್ಞಾನ ಭಾರತಿ ವಾರ್ಡ್ನಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು. ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ.
ಪ್ರಚಾರದ ವೇಳೆಯೇ ಬಿಜೆಪಿಗೆ ಸೇರ್ಪಡೆಯಾದ ಇತರೆ ಪಕ್ಷದ ನಾಯಕರನ್ನು ಮುನಿರತ್ನ ಪಕ್ಷಕ್ಕೆ ಸ್ವಾಗತಿಸಿದರು. ಮತಯಾಚನೆ ವೇಳೆ ಮಾತನಾಡಿದ ಅವರು, "ನನ್ನ ಮತದಾರರೇ ನನಗೆ ದೇವರಿದ್ದಂತೆ, ಈ ಬಾರಿ ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ನೀನು ಉತ್ತಮ ಕೆಲಸ ಮಾಡಿದ್ದೀಯಾ, ಗೆದ್ದು ಬಾ ಸಾಕು ಎಂದು ನನ್ನ ಕ್ಷೇತ್ರದ ಮತದಾರ ದೇವರುಗಳು ಹೇಳಿದ್ದಾರೆ" ಎಂದು ಮುನಿರತ್ನ ತಿಳಿಸಿದರು.

ನಿನ್ನಂತಹ ಕೆಲಸ ಮಾಡುವ ಶಾಸಕರನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ, ನೀನು ಇಲ್ಲ ಅಂದ್ರೆ ಈ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ 20 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ, ಆದ ಕಾರಣ ನೀನೆ ಈ ಬಾರಿಯೂ ಗೆಲ್ಲಬೇಕು ಎಂದು ಮತದಾರರು ಆಶೀರ್ವಾದ ಮಾಡುತ್ತಿದ್ದಾರೆ ಎಂದು ಮುನಿರತ್ನ ತಿಳಿಸಿದ್ದಾರೆ.
ಸೋಮನಹಳ್ಳಿ ಸುಂಕದಕಟ್ಟೆಯವರೆಗೂ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾಡಲಿದ್ದು, ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಂಜೆಯವರೆಗೂ ಜ್ಞಾನಭಾರತಿ ವಾರ್ಡ್ನಲ್ಲಿ ಇರುತ್ತೇನೆ ಪಕ್ಷದ ವಿವಿಧ ಮುಖಂಡರನ್ನು ಭೇಟಿ ಮಾಡುತ್ತೇನೆ ಎಂದು ಮುನಿರತ್ನ ಹೇಳಿದರು.
ವಿವಿಧ ಮುಖಂಡರ ಜೊತೆ ಮಾತನಾಡುವ ಸಂದರ್ಭದಲ್ಲಿ, ನನ್ನ ಕ್ಷೇತ್ರದಲ್ಲಿ ಉತ್ತಮ ದರ್ಜೆಯ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಫ್ಲೈ ಓವರ್ ಗಳನ್ನು ಕಟ್ಟಲಾಗಿದೆ. ರಸ್ತೆಗಳ ಅಭಿವೃದ್ಧಿಯಾಗಿದೆ. ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿ ಕೆಲಸಗಳನ್ನು ಮಾಡಲು ನನ್ನನ್ನು ಗೆಲ್ಲಿಸಬೇಕು ಎಂದು ವಿವಿಧ ಮುಖಂಡರ ಬಳಿ ಮನವಿ ಮಾಡಿದರು.
ಮುನಿರತ್ನಗೆ ಕಾಂಗ್ರೆಸ್ ಪ್ರಬಲ ಸ್ಪರ್ಧೆ?
2020 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮುನಿರತ್ನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್ ವಿರುದ್ಧ ಗೆಲುವು ಸಾಧಿಸಿದ್ದರು. ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಮೂಲಕ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ದೊಡ್ಡ ಕ್ಷೇತ್ರವಾದ ರಾಜರಾಜೇಶ್ವರಿನಗರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.
ದಿವಂಗತ ಐಎಎಸ್ ಅಧಿಕಾರಿ ಪತ್ನಿ ಕುಸುಮಾ ಹನುಮಂತರಾಯಪ್ಪ ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಸೋತ ಬಳಿಕ ಕೂಡ ಅವರು ಕ್ಷೇತ್ರದಲ್ಲಿ ಕೆಲಸ ಮುಂದುವರೆಸಿಕೊಂಡು ಬಂದಿದ್ದಾರೆ. ಉಪ ಚುನಾವಣೆಯಲ್ಲಿ ಇಲ್ಲಿ ಕೇವಲ 45.40 ರಷ್ಟು, ಮಾತ್ರ ಮತದಾನವಾಗಿತ್ತು. ಈ ಬಾರಿ ಹೆಚ್ಚಿನ ಮತದಾನವಾದರೆ ಕಾಂಗ್ರೆಸ್ ಬಿಜೆಪಿಗೆ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications