ಒಂದೇ ಕ್ಲಿಕ್ನಲ್ಲಿ ಸೋಮವಾರದ ಕರ್ನಾಟಕದ ಜಿಲ್ಲಾಸುದ್ದಿಗಳು
ಬೆಂಗಳೂರು, ಆಗಸ್ಟ್ 16; ಮೈಸೂರು ನಗರದ ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಪಾಲಿಕೆ ಸದಸ್ಯತ್ವ ರದ್ದುಗೊಂಡ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಮೂರು ಪಕ್ಷದ ನಾಯಕರು ಅಭ್ಯರ್ಥಿ ಹುಡುಕಾಟದಲ್ಲಿದ್ದಾರೆ. ಸೆಪ್ಟೆಂಬರ್ 3ರಂದು ಚುನಾವಣೆ ನಡೆಯಲಿದ್ದು, ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಚುನಾವಣೆ ಸಂಬಂಧ ಹೇಳಿಕೆ ಕೊಟ್ಟಿದ್ದಾರೆ. "ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಆಯ್ಕೆಯಾಗುತ್ತದೆ. ಆಗಸ್ಟ್ 20ಕ್ಕೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಕಾಂಗ್ರೆಸ್ನಿಂದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಈ ಸಂಬಂಧ ಕೆಪಿಸಿಸಿಗೆ ಪತ್ರ ಬರೆದಿದ್ದೇವೆ. ಈ ಮೊದಲು ಅಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲಾಗಿತ್ತು. ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ" ಎಂದು ಹೇಳಿದ್ದಾರೆ.

ಇನ್ನು ಕಳೆದ ಬಾರಿ ಅಲ್ಪ ಅಂತರದಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಈ ಬಾರಿ ಅಭ್ಯರ್ಥಿಯಾಗಿ ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ. ಅಧಿಕೃತವಾಗಿ ಬುಧವಾರ ಈ ಬಗ್ಗೆ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.
ಬಿಬಿಎಂಪಿಯಿಂದ ಅಭಿಯಾನ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 'ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ' ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ. ಸೋಮವಾರ ಕಂದಾಯ ಸಚಿವ ಆರ್. ಅಶೋಕ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಭಿಯಾನ ಉದ್ಘಾಟಿಸಿದರು. ಅಭಿಯಾನದ ಅಡಿ ಪ್ರತಿದಿನ ವೈದ್ಯರ ತಂಡ 50 ಮನೆಗೆ ಭೇಟಿ ನೀಡಲಿದೆ. ಒಂದು ವಾರ್ಡ್ನಲ್ಲಿ ವೈದ್ಯರ 5 ತಂಡಗಳು ಇರಲಿವೆ. ಮನೆಗೆ ಭೇಟಿ ನೀಡುವ ತಂಡ ಕುಟುಂಬ ಸದಸ್ಯರ ಆರೋಗ್ಯದ ಮಾಹಿತಿಯನ್ನು ಕೆಲ ಹಾಕಲಿದೆ.
ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನ; ಸಿಡಿಮದ್ದು ಸಿಡಿದು ಕಾರಿನಲ್ಲಿದ್ದ ಓರ್ವ ಸಜೀವವಾಗಿ ಸುಟ್ಟು ಹೋಗಿರುವ ಹೃದಯ ವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮರಳೆಗವಿ ಮಠದ ಬಳಿ ಸೋಮವಾರ ನಡೆದಿದೆ. ಸಿಡಿಮದ್ದು ಸಿಡಿದ ರಭಸಕ್ಕೆ ಕಾರಿನಲ್ಲಿದ್ದ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರವಾಗಿದೆ. ಶಕ್ತಿ ಮೈನಿಂಗ್ಸ್ಗೆ ಸಿಡಿ ಮದ್ದುಗಳನ್ನು ಕಾರಿನಲ್ಲಿ ಸಾಗಿಸುವಾಗ ಆಕಸ್ಮಿಕವಾಗಿ ಸ್ಪೋಟಗೊಂಡಿದೆ. ಕನಕಪುರದಲ್ಲಿ ಗ್ರಾನೈಟ್ ಕಲ್ಲುಗಣಿಗಾರಿಕೆ ನಡೆಯುತ್ತಿತ್ತು. ಅದಕ್ಕಾಗಿ ಸಿಡಿ ಮದ್ದುಗಳನ್ನು ಸಾಗಿಸುತ್ತಿದ್ದ ಕೆಎ 51 ಪಿ 3384 ಸ್ವಿಫ್ಟ್ ಕಾರಿನಲ್ಲಿ ಸ್ಫೋಟ ಸಂಭವಿಸಿದೆ.
ವಾಹನಗಳಿಗೆ ಶಿರಾಡಿ ಓಪನ್; ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಈಗ ವಾಹನಗಳ ಸಂಚಾರಕ್ಕೆಪುನಃ ಅವಕಾಶ ನೀಡಲಾಗಿದೆ. ಜುಲೈನಲ್ಲಿ ಸುರಿದ ಭಾರೀ ಮಳೆಗೆ ಶಿರಾಡಿ ಘಾಟ್ನ ದೋಣಿಗಲ್ ಎಂಬಲ್ಲಿ ಹೆದ್ದಾರಿ ಕುಸಿತವಾಗಿದ್ದು, ಎಲ್ಲಾ ರೀತಿಯ ವಾಹನ ಸಂಚಾರ ನಿರ್ಬಂಧವಾಗಿತ್ತು. ಈಗ ದುರಸ್ಥಿ ಕಾರ್ಯ ನಡೆದಿದ್ದು, ಕೆಲವು ನಿಯಮಗಳ ಅನುಸಾರವಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಸ್ಪೋಟಕಗಳು ವಶಕ್ಕೆ; ಮಂಗಳೂರು ಬಂದರು ಪ್ರದೇಶದ ಗೋಡೌನ್ ಮೇಲೆ ದಾಳಿ ನಡೆಸಿದ ಪೊಲೀಸರು ಸ್ಫೋಟಕ ತಯಾರು ಮಾಡಲು ಬಳಕೆ ಮಾಡುವ ಕಚ್ಚಾವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆನಂದ್ ಗಟ್ಟಿ ಎಂಬ ವ್ಯಕ್ತಿಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. 400 ಕೆಜಿ ಸಲ್ಫರ್ ಪೌಡರ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಪುತ್ರಿ ವಿವಾಹಕ್ಕೆ ಆಹ್ವಾನ; ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಹ್ಲಾದ್ ಜೋಶಿ ಸೋಮವಾರ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಗಳ ಮದುವೆಗೆ ಆಮಂತ್ರಣ ನೀಡಿದರು.
ವಿಶೇಷ ಸಭೆ ನಡೆಸಿದ ಕಟೀಲ್; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ಬೆಳಗಾವಿ ಜಿಲ್ಲೆಯ ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ ವಿಶೇಷ ಸಭೆ ನಡೆಸಿದರು. 58 ವಾರ್ಡ್ಗಳಿಗೆ ಸೆಪ್ಟೆಂಬರ್ನಲ್ಲಿ ಚುನಾವಣೆ ನಡೆಯಲಿದೆ.
ಕೇಂದ್ರ ಸಚಿವರಿಗೆ ಸ್ವಾಗತ; ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ, ಬೀದರ್ ಸಂಸದ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲು ಬೀದರ್ಗೆ ಆಗಮಿಸಿದರು. ಬಿಜೆಪಿ ಕಾರ್ಯಕರ್ತರು ಅವರಿಗೆ ಅದ್ದೂರಿ ಸ್ವಾಗತ ಕೋರಿದರು.
ಗದ್ದೆಗಿಳಿದು ನಾಟಿ ಮಾಡಿದ ಸಚಿವರು; ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮಂಡ್ಯಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೊನಗನಹಳ್ಳಿಯಲ್ಲಿ ಗದ್ದೆಗಿಳಿದು ಮಹಿಳೆಯರ ಜೊತೆ ಭತ್ತ ನಾಟಿ ಮಾಡಿದರು.












Click it and Unblock the Notifications