ನಾಯಕತ್ವ ಬದಲಾವಣೆ: ಉಸ್ಸಪ್ಪಾ ಎನ್ನುವಷ್ಟರಲ್ಲಿ ಬಿಎಸ್ವೈಗೆ ಮತ್ತೆ ಆತಂಕ
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಮೂರು ದಿನಗಳ ಕರ್ನಾಟಕ ಭೇಟಿಯ ನಂತರ, ಕೊಂಚ ನಿರಾಳವಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತೆ ಟೆನ್ಸನ್ ಎದುರಾಗುವ ಸಾಧ್ಯತೆಯಿಲ್ಲದಿಲ್ಲ.
ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಬಿಜೆಪಿಯ ಭಿನ್ನರಿಗೆ ಸಾರಿ ಹೋಗಿರುವ ಅರುಣ್ ಸಿಂಗ್, ಒಟ್ಟಾರೆಯಾಗಿ ತಮ್ಮ ಮೂರು ದಿನಗಳ ಕರ್ನಾಟಕ ಭೇಟಿಯ ವರದಿಯನ್ನು ವರಿಷ್ಠರಿಗೆ ಇನ್ನೂ ಸಲ್ಲಿಸಬೇಕಷ್ಟೇ..
ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ ಎಂದು ಸಂಕ್ರಾಂತಿ, ಶಿವರಾತ್ರಿ, ಯುಗಾದಿಯ ಮಹೂರ್ತ ಫಿಕ್ಸ್ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಎಲ್ಲಾ ಹೇಳಿಕೆಯು ಠುಸ್ ಆಗಿದ್ದು ಗೊತ್ತೇ ಇದೆ.
ಏನೇ ಭಿನ್ನಾಭಿಪ್ರಾಯವಿದ್ದರೂ, ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಬೇಕೆಂದು ಹೈಕಮಾಂಡ್ ಫರ್ಮಾನ್ ಹೊರಡಿಸಿದ್ದರೂ, ಎಚ್.ವಿಶ್ವನಾಥ್ ಅವರು ಸಿಎಂ ಮತ್ತವರ ಪುತ್ರ ವಿಜಯೇಂದ್ರ ವಿರುದ್ದ ಗಂಭೀರ ಆರೋಪವನ್ನು ಮುಂದುವರಿಸಿದ್ದಾರೆ.

ಮೂರು ದಿನಗಳ ಕರ್ನಾಟಕ ಭೇಟಿಯ ವರದಿಯನ್ನು ಅರುಣ್ ಸಿಂಗ್ ಸಲ್ಲಿಕೆ
ಅರುಣ್ ಸಿಂಗ್ ಅವರು ಮೂರು ದಿನಗಳ ಭೇಟಿಯ ವೇಳೆ ಬಿಜೆಪಿಯ ಪರ/ವಿರೋಧಿ/ತಟಸ್ಥ ಬಣದ ಶಾಸಕರ ಜೊತೆ ಮಾತುಕತೆ ನಡೆಸಿದ್ದರು. ಅವರ ಮೂರು ದಿನ ಭೇಟಿಯ ವಿಸ್ಕೃತ ವರದಿಯನ್ನು ಇದೇ ಬರುವ ಜೂನ್ 24ರಂದು ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಲಿದ್ದಾರೆ.

ಜೂನ್ 24ರಂದು ಬಿಜೆಪಿಯ ಸಂಸದೀಯ ಮಂಡಳಿಯ ನಿರ್ಣಾಯಕ ಸಭೆ
ಜೂನ್ 24ರಂದು ಬಿಜೆಪಿಯ ಸಂಸದೀಯ ಮಂಡಳಿಯ ನಿರ್ಣಾಯಕ ಸಭೆ ನಡೆಯಲಿದೆ. ಆ ಸಭೆಯಲ್ಲಿ ಅರುಣ್ ಸಿಂಗ್ ವರದಿಯ ವಿಚಾರ ಪ್ರಸ್ತಾವನೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ, ಯಡಿಯೂರಪ್ಪನವರ ವಿರೋಧಿ ಬಣದ ಅಂಶಗಳು ಚರ್ಚೆಗೆ ಬಂದರೆ ಮತ್ತೊಂದು ಸುತ್ತಿನ ಆತಂಕ, ಸಿಎಂಗೆ ಎದುರಾಗಲಿದೆಯೇ ಎನ್ನುವುದು ಬೆಂಬಲಿಗರ ಭಯಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶ ಸೇರಿದಂತೆ ಮುಂಬರುವ ಏಳು ರಾಜ್ಯಗಳ ಅಸೆಂಬ್ಲಿ ಚುನಾವಣೆ
ಕೇಂದ್ರ ಸಂಸದೀಯ ಮಂಡಳಿಯ ಸಭೆಯ ಸದ್ಯದ ಅಜೆಂಡಾ ಪ್ರಕಾರ, ಸಂಪುಟ ವಿಸ್ತರಣೆ, ಉತ್ತರ ಪ್ರದೇಶ ಸೇರಿದಂತೆ ಮುಂಬರುವ ಏಳು ರಾಜ್ಯಗಳ ಅಸೆಂಬ್ಲಿ ಚುನಾವಣೆ ಪ್ರಮುಖ ವಿಷಯವಾಗಲಿದೆ. ಆದರೂ, ಕರ್ನಾಟಕದ ವಿಚಾರ ಚರ್ಚೆಗೆ ಬಂದರೆ ಮತ್ತೆ ಇಕ್ಕಟ್ಟಿನ ಸ್ಥಿತಿ ಎದುರಾಗಲಿದೆಯೇ ಎನ್ನುವುದು ಬಿಎಸ್ವೈ ಪರ ಶಾಸಕರಿಗಿರುವ ಭೀತಿ.

ಕೆಲವು ಪ್ರಮುಖ ಸಚಿವರು ತೆರೆಯ ಹಿಂದೆ ತೊಂದರೆ ಕೊಟ್ಟರು
ಜೊತೆಗೆ ಇದ್ದುಕೊಂಡೇ ಕೆಲವು ಪ್ರಮುಖ ಸಚಿವರು ತೆರೆಯ ಹಿಂದೆ ತೊಂದರೆ ಕೊಟ್ಟಿದ್ದು, ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಲು ಕಾರಣವೇನು.. ಹೀಗೆ ಹಲವು ವಿಚಾರಗಳನ್ನು ಸವಿಸ್ತಾರವಾಗಿ ಅರುಣ್ ಸಿಂಗ್ ಮುಂದೆ ದೂರಲು ಬಿಎಸ್ವೈ ಆಪ್ತರು ಸಿದ್ದರಾಗಿದ್ದರು. ಆದರೆ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಆ ಕೆಲಸ ನಡೆದಿರಲಿಲ್ಲ.












Click it and Unblock the Notifications