ಇರೋ ಒಂದು ಹುದ್ದೆಯನ್ನು 4 ಜನರಿಗೆ ಹಂಚಿದ ಯಡಿಯೂರಪ್ಪ: ಮೀಸೆ ತಿರುವಿದವರಾರು?
ತಮ್ಮ ಮನೆಯ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದ ನಂತರ, ಖುದ್ದು ಹೋಂ ಕ್ವಾರಂಟೈನ್ ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಒಳಪಟ್ಟಿದ್ದಾಗ, ಆ ಗುರುತರ ಜಬಾಬ್ದಾರಿಯನ್ನು ಕಂದಾಯ ಸಚಿವ ಆರ್.ಅಶೋಕ್ ಗೆ ವಹಿಸಲಾಗಿತ್ತು.
ಆಗಲೇ, ಸುಧಾಕರ್ ಮತ್ತೆ ಕರ್ತವ್ಯಕ್ಕೆ ವಾಪಸ್ ಆದ ನಂತರ, ಈ ಹುದ್ದೆ ನಿರ್ವಹಣೆಯ ವಿಚಾರದಲ್ಲಿ ಮೇಲಾಟ ಶುರುವಾಗಬಹುದು ಎನ್ನುವ ಲೆಕ್ಕಾಚಾರವಿತ್ತು. ಅದು ಹಾಗೇ ಆಗಿದೆ. ಯಾಕೆಂದರೆ, ಕೊರೊನಾ ನಿರ್ವಹಣೆಯ ಜವಾಬ್ದಾರಿ ಈಗ ಪ್ರತಿಷ್ಠೆಯ ಹುದ್ದೆಯಾಗಿ ಪರಿಣಸಿರುವುದು.
ಕೊರೊನಾ ನಿರ್ವಹಣೆ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಮೊದಮೊದಲು ಶ್ರೀರಾಮುಲು ಮತ್ತು ಡಾ.ಸುಧಾಕರ್ ನಡುವೆ ಹೊಂದಾಣಿಕೆಯ ಕೊರತೆ ತೀವ್ರವಾಗಿ ಕಾಡುತ್ತಿದ್ದದ್ದು, ಸಾರ್ವಜನಿಕ ವಲಯದಲ್ಲಿ ಗೌಪ್ಯವಾಗಿ ಏನೂ ಉಳಿದಿರಲಿಲ್ಲ.
ಆದರೆ, ಸುಧಾಕರ್ ಅನುಪಸ್ಥಿತಿಯಲ್ಲಿ ಯಾವಾಗ ಅಶೋಕ್, ಆಖಾಡಕ್ಕೆ ಇಳಿದರೋ, ಆಗ ಅದು ಇಬ್ಬರು ಸಚಿವರ ನಡುವೆ ಮತ್ತೆ ಪೈಪೋಟಿಗೆ ಕಾರಣವಾಯಿತು. ಕೊರೊನಾ ನಿರ್ವಹಣೆಯನ್ನು ನಾಲ್ಕು ಜನರಿಗೆ ಹಂಚಿದ ಸಿಎಂ ಬಿಎಸ್ವೈ.

ಸುಧಾಕರ್ ಹೋಂ ಕ್ವಾರಂಟೈನ್
ಸುಧಾಕರ್ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾಗ, ಪ್ರಮುಖವಾಗಿ, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವಿಪರಿಮೀತ ಜಾಸ್ತಿ ಆಗಲಾರಂಭಿಸಿತು. ಹಾಗಾಗಿ, ಬೆಂಗಳೂರು ಬಗ್ಗೆ ಹೆಚ್ಚಿನ ಅನುಭವವಿರುವ ಅಶೋಕ್ ಗೆ ಈ ಜವಾಬ್ದಾರಿಯನ್ನು ಬಿಎಸ್ವೈ ವಹಿಸಿದ್ದರು. ಕೊಟ್ಟ ಜವಾಬ್ದಾರಿಯನ್ನು ಭಾರೀ ಹುಮ್ಮಸ್ಸಿನಿಂದಲೇ ಅಶೋಕ್ ಮಾಡಿದ್ದರು ಎನ್ನುವುದಕ್ಕೆ ಎರಡು ಮಾತಿಲ್ಲ. ಆದರೆ..

ಸಾಮ್ರಾಟ್ ಅಶೋಕ್
ಖುದ್ದು ಮುಖ್ಯಮಂತ್ರಿಗಳೇ, ಸುಧಾಕರ್ ಅವರಿಗೆ ದೂರವಾಣಿ ಕರೆಮಾಡಿ, ಕ್ವಾರಂಟೈನ್ ಮುಗಿದ ನಂತರ, ನಿಮ್ಮ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದ ನಂತರ ಪರಿಸ್ಥಿತಿ ಬದಲಾಯಿತು. ಸಿಎಂ ಎದುರಲ್ಲಿ ಅಶೋಕ್ -ಸುಧಾಕರ್ ಮುನಿಸು ಬಹಿರಂಗವಾಗಿದ್ದರೆ ಅದು ಒಂದು ಲೆಕ್ಕ, ಆದರೆ ಮಾಧ್ಯಮದ ಮುಂದೆಯೇ ಬಯಲಾಯಿತು.

ಇರೋ 1 ಹುದ್ದೆಯನ್ನು 4 ಜನರಿಗೆ ಹಂಚಿದ ಬಿಎಸ್ವೈ
ಕೊರೊನಾ ನಿರ್ವಹಣೆಗಿಂತ ಜಾಸ್ತಿ, ತಮ್ಮ ಸಚಿವ ಸಂಪುಟದ ಸದಸ್ಯರಲ್ಲಿ ಅಪಸ್ವರ ಏಳದಂತೆ ನೋಡಿಕೊಳ್ಳುವುದು ಪ್ರಮುಖ ಆದ್ಯತೆ ಎನ್ನುವುದಕ್ಕಾಗಿಯೋ ಏನೋ, ಮುಖ್ಯಮಂತ್ರಿ ಯಡಿಯೂರಪ್ಪ, ಈ ವೇಳೆ, ತುರ್ತಾಗಿ ಆಗಬೇಕಾಗಿರುವ ಕೋವಿಡ್ ನಿರ್ವಹಣೆಯನ್ನು ನಾಲ್ಕು ಜನರಿಗೆ ಹಂಚಿ ಬಿಟ್ಟರು.

ಆಸ್ಪತ್ರೆಗಳ ಉಸ್ತುವಾರಿ
ಸಚಿವರ ನೂತನ ಜವಾಬ್ದಾರಿ ಹೀಗಿದೆ:
ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ಆರ್. ಅಶೋಕ್ ಹಾಗೂ ಶಾಸಕ ಎಸ್. ಆರ್. ವಿಶ್ವನಾಥ್ ಗೆ
ನೀತಿ ರೂಪಿಸುವುದು, ಮಾಧ್ಯಮಗಳಿಗೆ ಮಾಹಿತಿ ಕೊಡುವುದು, ವಾರ್ ರೂಂ ಜವಾಬ್ದಾರಿ ಡಾ. ಸುಧಾಕರ್ ಗೆ
ಕೋವಿಡ್ ಕೇರ್ ಸೆಂಟರ್ ಗಳ ಸ್ಥಾಪನೆ ಮತ್ತು ನಿರ್ವಹಣೆ ಡಾ. ಅಶ್ವಥ್ ನಾರಾಯಣ ಅವರಿಗೆ.












Click it and Unblock the Notifications