ಕಾಂಗ್ರೆಸ್ ಡಿಲೀಟ್ ಮಾಡಿದ ಟ್ವೀಟ್ ನಲ್ಲಿ ಬಿಎಸ್ವೈ ಬಗ್ಗೆ ಏನಿದು ಪದಪ್ರಯೋಗ?
Recommended Video
ಬೆಂಗಳೂರು, ಆ 19: ರಾಜ್ಯದಲ್ಲಿ ಸದ್ಯ ಭಾರೀ ಸದ್ದು ಮಾಡುತ್ತಿರುವ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಿದ್ದೇನೆ ಎನ್ನುವ ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆಯ ಬೆನ್ನಲ್ಲೇ ಕೆಪಿಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಿ, ನಂತರ ಡಿಲೀಟ್ ಮಾಡಿದೆ.
ಮುಖ್ಯಮಂತ್ರಿಗಳ ವಿರುದ್ದ ಟ್ವೀಟ್ ನಲ್ಲಿ ಬಳಸಿದ ಪದ ಅನಾವಶ್ಯಕ ಟೀಕೆಗೊಳಗಾಗಬಹುದು ಎನ್ನುವ ಕಾರಣಕ್ಕಾಗಿ ಕೆಪಿಸಿಸಿ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಕೆಪಿಸಿಸಿ ಮಾಡಿದ್ದ ಟ್ವೀಟ್ ಹೀಗಿತ್ತು, " @BSYBJP ಅವರೇ, ತಾನು ಕಳ್ಳ ಪರರ ನಂಬ ಎಂಬಂತೆ ನಿಮ್ಮ ವರ್ತನೆ. ಆಪರೇಷನ್ ಕಮಲದ ಮುಖೇನ ಸರಕಾರ ಬೀಳಿಸಿ, ಹಿಂಬಾಗಿಲಿನ ಅನೈತಿಕ ಸಿಎಂ ಆಗಿರುವ ತಾವು ಭೂಗತ ಪಾತಕಿಗಳ ರೀತಿ ವರ್ತಿಸುತ್ತಿದ್ದೀರಿ".

" ಮೋದಿ ಆಳ್ವಿಕೆಯಲ್ಲಿ ಸಿಬಿಐ ಬಿಜೆಪಿಯ ಮಂಚೂಣಿ ಘಟಕವಾಗಿ ಕೆಲಸ ಮಾಡುತ್ತಿದೆ. ಫೋನ್ ಕದ್ದಾಲಿಕೆ ಎಂಬುದು ಸುಳ್ಳು, ದ್ವೇಷ ರಾಜಕಾರಣದ ಸಂಚು". ಇದು ಕೆಪಿಸಿಸಿ ಮಾಡಿದ್ದ ಟ್ವೀಟ್.

ಇದರಲ್ಲಿ ಮುಖ್ಯಮಂತ್ರಿಗಳನ್ನು ಕೆಪಿಸಿಸಿ, ' ಭೂಗತ ಪಾತಕಿ'ಗಳಿಗೆ ಹೋಲಿಸಿತ್ತು. ಈ ಟ್ವೀಟ್ ಅನ್ನು ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್ ತನ್ನ ಹ್ಯಾಂಡಲ್ ನಿಂದ ಡಿಲೀಟ್ ಮಾಡಿತ್ತು.
ಕೆಪಿಸಿಸಿ ಡಿಲೀಟ್ ಮಾಡಿದ್ದ ಟ್ವೀಟ್ ಅನ್ನು ಕೇಂದ್ರ ಸಚಿವ ಸದಾನಂದ ಗೌಡ ತಮ್ಮ ಹ್ಯಾಂಡಲ್ ನಿಂದ ಮತ್ತೆ ಟ್ವೀಟ್ ಮಾಡಿ, ಹೀಗೆ ಬರೆದುಕೊಂಡಿದ್ದರು. "ಅಧಿಕಾರ ಕಳೆದುಕೊಂಡ ಕರ್ನಾಟಕ ಕಾಂಗ್ರೆಸ್ ನಾಲಿಗೆಗೂ ಮೆದುಳಿಗೂ ಸಂಪರ್ಕ ಕಳೆದುಕೊಂಡು ಮತಿಭ್ರಮಣ ಗೊಂಡಿದೆ".
"ದೇಶವನ್ನು ಲೂಟಿ ಹೊಡೆದ ಭೂಗತ ಪಾತಕಿಗಳು ಯಾರೆಂದು ಜನ ನೋಡಿದ್ದಾರೆ. ಕದ್ದಾಲಿಕೆ ಬಗ್ಗೆ ತನಿಖೆಗೆ ಒತ್ತಾಯಿಸಿದ ನಿಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ರವರನ್ನು ಏನೆಂದು ಕರೆಯುತ್ತೀರಿ?"












Click it and Unblock the Notifications