ಆರೆಸ್ಸೆಸ್ ಬೆಂಬಲಿತ ಶಿಕ್ಷಕರ ಮೇಲೆ ಕಾಂಗ್ರೆಸ್ ಕಣ್ಣು, ಎಬಿವಿಪಿ ಕೆಂಗಣ್ಣು
ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ ಸಂಘ ಪರಿವಾರದ ಬೆಂಬಲಿತ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಕೆಪಿಸಿಸಿಯ ಈ ಕ್ರಮದ ವಿರುದ್ಧ ಆರೆಸ್ಸೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕಿಡಿಕಾರಿದೆ.
ಕಾಂಗ್ರೆಸ್ ಪಕ್ಷ ವಿದ್ಯಾರ್ಥಿ ಸಂಘಟನೆ ಎನ್ಎಸ್ ಯುಐ ಹಾಗೂ ಇತರೆ ವಿದ್ಯಾರ್ಥಿ ಸಂಘಟನೆಗಳ ಸದಸ್ಯರೊಂದಿಗೆ ವೇಣು ಗೋಪಾಲ್ ಅವರು ಸಭೆ ನಡೆಸಿದ ಬಳಿಕ ಗುರುವಾರದಂದು ಈ ರೀತಿ ಸೂಚನೆ ನೀಡಿದ್ದಾರೆ.

ಸಾಕಷ್ಟು ಕಾಲೇಜುಗಳು ಪ್ರಾಂಶುಪಾಲರು ಆರೆಸ್ಸೆಸ್ ಹಾಗೂ ಎಬಿವಿಪಿ ಪರ ಇದ್ದಾರೆ, ಹೀಗಾಗಿ ನಮ್ಮ ದನಿಯೆತ್ತಲು ಆಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷ ವಿದ್ಯಾರ್ಥಿ ಸಂಘಟನೆ ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ಸದಸ್ಯರು ದೂರಿದ್ದಾರೆ.
ಆರೆಸ್ಸೆಸ್ ಬೆಂಬಲ ಹೊಂದಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ವಿಚಾರ ಪ್ರಜಾತಾಂತ್ರಿಕ ವ್ಯವಸ್ಥೆಯ ಮತ್ತು ಸಂವಿಧಾನ ಆಶಯಗಳ ಬಗ್ಗೆ ಇರುವ ಅಗೌರವವನ್ನು ಸೂಚಿಸುತ್ತದೆ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ ಬಿದರೆಯವರು ಪ್ರತಿಕ್ರಿಯಿಸಿದ್ದಾರೆ.
ಕೆಲ ಶಿಕ್ಷಕರು ಬೋಧಿಸುವ ವೇಳೆ ಆರ್ ಎಸ್ಎಸ್ ಹಾಗೂ ಎಬಿವಿಪಿಗೆ ಪೂರಕವಾಗಿ ರಾಜಕೀಯವನ್ನು ಮಿಶ್ರಣ ಮಾಡಿ ಮಾತನಾಡುತ್ತಿದ್ದಾರೆ ಎಂಬ ದೂರಿನ ಬಗ್ಗೆ ವರದಿಯನ್ನು ವೇಣುಗೋಪಾಲ್ ಅವರು ಕೇಳಿದ್ದು ನಿಜ. ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಜಕೀಯವನ್ನು ಸೇರ್ಪಡೆಗೊಳಿಸುವುದು ಕಾನೂನಿಗೆ ವಿರುದ್ಧವಾದದ್ದು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಬೇಕು. ಆದರೆ, ಪೂರ್ಣ ಪಟ್ಟಿಯನ್ನು ಸಲ್ಲಿಸುವಂತೆ ಕೋರಿಲ್ಲ ಎಂದು ಎನ್ ಎಸ್ ಯು ಐನ ರಾಜ್ಯ ಅಧ್ಯಕ್ಷ ಮಂಜುನಾಥ್ ಗೌಡ ಅವರು ಹೇಳಿದ್ದಾರೆ.












Click it and Unblock the Notifications