ಸಂಪುಟ ವಿಸ್ತರಣೆ: ಅತೃಪ್ತರನ್ನು ನಿರ್ಲಕ್ಷಿಸಿದ ಕಾಂಗ್ರೆಸ್, ಕಾರಣವೇನು?
ಬೆಂಗಳೂರು, ಜೂನ್ 08: ಕಾಂಗ್ರೆಸ್ ಅತೃಪ್ತ ಶಾಸಕರು ಸರ್ಕಾರವನ್ನು ಬೀಳಿಸಲು ಸಮಯಕ್ಕಾಗಿ ಹೊಂಚು ಹಾಕಿ ಕೂತಿದ್ದಾರೆ. ಆದರೆ ಕಾಂಗ್ರೆಸ್ ಅವರನ್ನು ನಿರ್ಲಕ್ಷಿಸಿ ಸಂಪುಟ ವಿಸ್ತರಣೆ ಮಾಡುತ್ತಿದೆ. ಇಂತಹಾ ಅಪಾಯಕಾರಿ ಹೆಜ್ಜೆಯನ್ನು ರಾಜ್ಯ ಕಾಂಗ್ರೆಸ್ ಇಡಲು ಕಾರಣವೂ ಇದೆ.
ಪಕ್ಷದಲ್ಲಿ ಒಗ್ಗಟ್ಟು ಸಾಧಿಸಿ ಉಳಿಸಿಕೊಳ್ಳುವುದಕ್ಕಾಗಿಯೇ ರಾಜ್ಯ ಕಾಂಗ್ರೆಸ್ ಮುಖಂಡರು ಸಚಿವ ಸ್ಥಾನಕ್ಕಾಗಿ ಬಂಡಾಯವೆದ್ದಿದ್ದ ಅತೃಪ್ತರಿಗೆ ಮಣೆ ಹಾಕದೆ ಪಕ್ಷೇತರರಿಗೆ ಅವಕಾಶ ನೀಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಬಣದ ಯಾವೊಬ್ಬ ಅತೃಪ್ತರಿಗೂ ಸಚಿವ ಸ್ಥಾನ ನೀಡಲಾಗುತ್ತಿಲ್ಲ.
ಆದರೆ ಹೀಗೆ ಮಾಡಲು ಕಾರಣವೇನು? ಸಚಿವ ಸ್ಥಾನ ಅತೃಪ್ತರನ್ನು ಸಮಾಧಾನ ಪಡಿಸಲು ಕಾಂಗ್ರೆಸ್ ಇದ್ದ ಸುವರ್ಣ ಅವಕಾಶ ಆದರೆ ಅದನ್ನೇಕೆ ಅವರು ಬಳಸಿಕೊಳ್ಳುತ್ತಿಲ್ಲ ಎಂಬ ಅನುಮಾನ ಸಹಜವಾಗಿಯೇ ಹುಟ್ಟುತ್ತದೆ. ಆದರೆ ಇದರ ಹಿಂದೆ ಉತ್ತಮ ಉದ್ದೇಶವೇ ಇದೆ. ಪಕ್ಷದ ಭವಿಷ್ಯಕ್ಕಾಗಿಯೇ ಈ ನಿರ್ಣಯವನ್ನು ರಾಜ್ಯ ಕಾಂಗ್ರೆಸ್ ಮುಖಂಡರು ತಳೆದಿದ್ದಾರೆ.

ರಾಜ್ಯ ಮುಖಂಡರು ಸುಪೀರಿಯರ್ ಎಂದು ತೋರಿಸಿದೆ ಕೆಪಿಸಿಸಿ
ಅತೃಪ್ತರ ಹಠಕ್ಕೆ ಮಣಿದು ಅವರಿಗೆ ಸಚಿವ ಸ್ಥಾನ ನೀಡಿದ್ದೇ ಆದಲ್ಲಿ, ಮುಂದಕ್ಕೆ ಎಲ್ಲರೂ ಅದೇ ದಾರಿಯನ್ನೇ ಹಿಡಿಯುತ್ತಾರೆ. ಪಕ್ಷದ ಮೇಲೆ ಮುನಿಸಿಕೊಂಡು ಮತ್ತೊಂದು ಬಣ ಕಟ್ಟಿಬಿಟ್ಟರೆ ಮುಖಂಡರು ಹುಡುಕಿ ಬಂದು ಸಚಿವ ಸ್ಥಾನ ಕೊಟ್ಟು ಬಿಡುತ್ತಾರೆ ಎಂದು ಇತರೆ ಶಾಸಕರು ಅಂದುಕೊಳ್ಳುತ್ತಾರೆ ಹಾಗಾಗಿ ಅತೃಪ್ತರನ್ನು ಉಪೇಕ್ಷಿಸುವುದು ಸರಿ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.

ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ತೋರಿಸಬೇಕಿತ್ತು
ವ್ಯಕ್ತಿಗಿಂತಲೂ ಪಕ್ಷ ದೊಡ್ಡದು ಎಂದು ತೋರಿಸುವುದಕ್ಕಾಗಿ ಈ ನಿರ್ಣಯವನ್ನು ಉದ್ದೇಶಪೂರ್ವಕವಾಗಿ ತಳೆಯಲಾಗಿದೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಇನ್ನಿತರ ಅತೃಪ್ತರ ಬೇಡಿಕೆಗಳಿಗೆ ಪಕ್ಷ ಬಗ್ಗಿ ಬಿಟ್ಟರೆ, ಉಳಿದ ಶಾಸಕರ ಮೇಲೆ ಪಕ್ಷದ ಹಿಡಿತ ಹೊರಟು ಹೋಗುತ್ತದೆ. ಪಕ್ಷ ವ್ಯಕ್ತಿಗಿಂತಲೂ ದೊಡ್ಡದು ಎಂಬ ಭಾವೆ ಉಳಿಸಲು ಈ ಕ್ರಮ ಅನಿವಾರ್ಯವೇ ಆಗಿತ್ತು.

ಶಿಸ್ತು ಕಾಪಾಡುವುದು ಪಕ್ಷಕ್ಕೆ ಅತ್ಯಗತ್ಯ
ಶಿಸ್ತು ಕಾಪಾಡಲು ಈ ಕ್ರಮ ಅತ್ಯಂತ ಅಗತ್ಯವಾಗಿತ್ತು. ಈಗ ರಮೇಶ್ ಜಾರಕಿಹೊಳಿ ಅವರ ಬೇಡಿಕೆಗಳಿಗೆ ಬಗ್ಗಿದರೆ, ನಾಳೆ ಮತ್ತೊಂದು ಬಣ ನಮಗೂ ಸಚಿವ ಸ್ಥಾನ ಕೊಡಿ ಎಂದು ಬಂಡಾಯವೇಳಲು ದಾರಿಯಾಗುತ್ತಿತ್ತು. ಇದನ್ನು ತಪ್ಪಿಸಲು ಪಕ್ಷದಲ್ಲಿ ಶಿಸ್ತು ಉಳಿಸಿಕೊಳ್ಳಲು ಕೆಪಿಸಿಸಿ ಈ ನಿರ್ಣಯ ತೆಗೆದುಕೊಂಡಿದೆ.

ಇತರ ಶಾಸಕರಿಗೆ ಶಿಸ್ತಿನ ಪಾಠ
ಈ ಘಟನೆಯ ಮೂಲಕ ಇತರ ಶಾಸಕರಿಗೆ, ಮುಖಂಡರಿಗೆ ಕಾಂಗ್ರೆಸ್ ಶಿಸ್ತಿನ ಪಾಠವನ್ನು ಮಾಡಿದಂತಾಗಿದೆ. ಪಕ್ಷದ ವಿರುದ್ಧ ಹೋದರೆ ಎಷ್ಟೆ ಕಷ್ಟವಾಗಿದ್ದರೂ ಪಕ್ಷ ಮಂಡಿ ಊರುವುದಿಲ್ಲ, ಪಕ್ಷದ ವಿರುದ್ಧ ತಿರುಗಿ ಬಿದ್ದವರಿಗೆ ಶಿಕ್ಷೆಯೊಂದೇ ಗತಿ ಎಂದು ರಾಜ್ಯ ಕಾಂಗ್ರೆಸ್ ಮುಖಂಡರು ಇತರ ಶಾಸಕರು ಮುಖಂಡರಿಗೆ ತೋರಿಸಿದಂತಾಗಿದೆ.











Click it and Unblock the Notifications