ಸಿದ್ದರಾಮಯ್ಯ ಬಗ್ಗೆ ಗೊತ್ತು, ಮೀಡಿಯಾದಲ್ಲಿರುವ ಜನರ ಬಗ್ಗೆಯೂ ಗೊತ್ತು: ನಕಲಿ ಸುದ್ದಿ ಬಗ್ಗೆ ಡಿಕೆಶಿ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 04: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಎನ್ಡಿಟಿವಿಯಲ್ಲಿ ಆಡಿದ ಮಾತುಗಳನ್ನು ತಿರುಚಿ ಬರೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಸಿದ್ದರಾಮಯ್ಯನವರೇ ಸರಣಿ ಟ್ವೀಟ್ ಮಾಡಿದ್ದಾರೆ. ಎನ್ಡಿಟಿವಿಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ವೆಬ್ಸೈಟ್ನಿಂದ ವರದಿಯನ್ನು ಅಳಿಸಿ ಹಾಕುವಂತೆ ಒತ್ತಾಯಿಸಿದ್ದಾರೆ.
'ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಾನು ಆಡದ ಮಾತುಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿಯೊಂದನ್ನು ಪ್ರಕಟಿಸಿದೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದ್ದಾಗಿದೆ. ಎನ್ಡಿಟಿವಿ ತಕ್ಷಣ ಈ ಬರಹವನ್ನು ಅಳಿಸಿಹಾಕಿ ತಿದ್ದುಪಡಿ ಪ್ರಕಟಿಸಬೇಕು ಎಂದು ಒತ್ತಾಯಿಸುತ್ತೇನೆ' ಎಂದು ತಿಳಿಸಿದ್ದಾರೆ.

'ನಮ್ಮ ಪಕ್ಷದ ಮುಂದಿನ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ಕೂಡಿ ಆಯ್ಕೆ ಮಾಡಲಿದೆ ಎನ್ನುವುದನ್ನು ನೂರು ಸಲ ಹೇಳಿದ್ದೇನೆ. ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ವಿರೋಧ ಪಕ್ಷಗಳ ಹುನ್ನಾರಕ್ಕೆ ಮಾಧ್ಯಮಗಳು ಆಯುಧವಾಗಿ ಬಳಕೆಯಾಗಬಾರದು' ಎಂದೂ ಅವರು ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಟ್ವೀಟ್
'ಬಿಜೆಪಿಗೆ ಸೋಲು ನಿಶ್ಚಿತವಾಗಿ ಕಾಣುತ್ತಿದೆ. ಹಾಗಾಗಿ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡಿ ಕಾಂಗ್ರೆಸ್ ನಾಯಕರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ. ಸಿದ್ದರಾಮಯ್ಯ ಅವರ ಹೇಳಿಕೆಗೂ, ಮಾಧ್ಯಮದ ವರದಿಗೂ ಯಾವುದೇ ಸಂಬಂಧ ಇಲ್ಲ. 40 ಪರ್ಸೆಂಟ್ ಸರ್ಕಾರ ಸುಳ್ಳು ಹೇಳಿ ಚುನಾವಣೆ ನಡೆಸಲು ಮುಂದಾಗಿದ್ದು, ಇದು ಅವರ ವೈಫಲ್ಯವನ್ನು ತೋರಿಸುತ್ತಿದೆ' ಎಂದು ಆರೋಪಿಸಿದೆ.

'ಸಂದರ್ಶನವೊಂದರಲ್ಲಿ ಮಾನ್ಯ ಸಿದ್ದರಾಮಯ್ಯನವರು ನೀಡಿದ ಹೇಳಿಕೆಯನ್ನು ತಿರುಚಿ ಮಾಡಿದ ಸುಳ್ಳು ವರದಿಯನ್ನು ಅನುಸರಿಸಿ ಇನ್ನೂ ಕೆಲ ಮಾಧ್ಯಮಗಳು ವರದಿ ಮಾಡುತ್ತಿರುವುದು ದುರದೃಷ್ಟಕರ. ಸ್ಪಷ್ಟನೆ ಸಿಕ್ಕಮೇಲೂ ಸುಳ್ಳನ್ನೇ ವರದಿ ಮಾಡುವುದು ಸರಿಯಾದ ನಡೆಯಲ್ಲ. ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು' ಎಂದೂ ಕಾಂಗ್ರೆಸ್ ಹೇಳಿದೆ.
'ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ಬಗ್ಗೆ ಎನ್ಡಿಟಿವಿ (ಅದಾನಿ ಟಿವಿ) ತಪ್ಪು ವರದಿ ಮಾಡಿದಂತೆ ರಾಜ್ಯದ ಮಾಧ್ಯಮಗಳೂ ಕಪೋಲಕಲ್ಪಿತ ವರದಿಗಳನ್ನು ಮಾಡದೆ ವಸ್ತುನಿಷ್ಠ ಪತ್ರಿಕಾಧರ್ಮವನ್ನು ಉಳಿಸಿಕೊಳ್ಳುತ್ತವೆ ಎಂದು ನಾವು ನಂಬಿದ್ದೇವೆ. ಸ್ವಸ್ಥ ಸಮಾಜಕ್ಕೆ ಮಾಧ್ಯಮಗಳ ಹೊಣೆಗಾರಿಕೆ ದೊಡ್ಡದು, ಹೀಗಾಗಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕಿದೆ' ಎಂದೂ ಕಾಂಗ್ರೆಸ್ ತಿಳಿಸಿದೆ.
'ಸನ್ಮಾನ್ಯ ಸಿದ್ದರಾಮಯ್ಯ ಅವರು ಎನ್ಡಿಟಿವಿಗೆ ನೀಡಿದ ಸಂದರ್ಶನ ಇದು. ಆದರೆ ಎನ್ಡಿಟಿವಿ ತಿರುಚಿದ ವರದಿ ಪ್ರಕಟಿಸಿತ್ತು, ಬಹುಶಃ ಅದಾನಿ ಎಫೆಕ್ಟ್ ಕಾರಣದಿಂದ ಇರಬಹುದು. ಕನ್ನಡದ ಮಾಧ್ಯಮಗಳ ಸ್ನೇಹಿತರೂ ಅದೇ ಸುಳ್ಳು ವರದಿಗೆ ಜೋತುಬಿದ್ದು ಇನ್ನಷ್ಟು ಮಸಾಲೆ ಸೇರಿಸುತ್ತಿರುವುದು ದುರಾದೃಷ್ಟಕರ. ಮಾದ್ಯಮಗಳು ಜನರ ನಂಬಿಕೆ ಉಳಿಸಿಕೊಳ್ಳಬೇಕು' ಎಂದೂ ಕೆಪಿಸಿಸಿ ಹೇಳಿದೆ.

ದಿನೇಶ್ ಗುಂಡೂರಾವ್ ಟ್ವೀಟ್
ಎನ್ಡಿಟಿವಿ ಸಂದರ್ಶನದಲ್ಲಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಸಿಎಂ ಆಗಲು ಹೈಕಮಾಂಡ್ ಒಪ್ಪುವುದಿಲ್ಲ ಎಂಬರ್ಥದ ಹೇಳಿಕೆ ವರದಿಯಾಗಿದೆ. ಇದೇ ಅರ್ಥದ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿವೆ. ಇದು ಆಧಾರರಹಿತ. ಸುದ್ದಿಯ ನೈಜತೆ ಕುರಿತು ಸಿದ್ದರಾಮಯ್ಯ ಎನ್ಡಿಟಿವಿ ಬಳಿ ಸ್ಪಷ್ಟನೆ ಕೇಳಿದ್ದಾರೆ. ಹಾಗಾದರೆ ಈ ಸುಳ್ಳು ಸುದ್ದಿಯ ಜನಕ ಯಾರು? ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
'ಕಾಂಗ್ರೆಸ್ನಲ್ಲಿ ಸದ್ಯ ಮುಖ್ಯಮಂತ್ರಿ ಯಾರು ಎಂಬ ಚರ್ಚೆಯೇ ನಡೆಯುತ್ತಿಲ್ಲ. ಸದ್ಯಕ್ಕೆ ಅದು ಅಪ್ರಸ್ತುತ. ಹೀಗಿರುವಾಗ ಸಿದ್ದರಾಮಯ್ಯ ಎನ್ಡಿಟಿವಿ ಸಂದರ್ಶನದಲ್ಲಿ ಶಿವಕುಮಾರ್ ಸಿಎಂ ಆಗಲು ಹೈಕಮಾಂಡ್ ಒಪ್ಪುವುದಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಎನ್ಡಿಟಿವಿ ಅದಾನಿ ಒಡೆತನದಲ್ಲಿದೆ. ಈ ಸುಳ್ಳು ಸುದ್ದಿಯ ಹಿಂದಿನ ರಹಸ್ಯ ಇದರಲ್ಲೇ ಅರ್ಥವಾಗುತ್ತದಲ್ಲವೇ?' ಎಂದು ಅವರು ಕೇಳಿದ್ದಾರೆ.
'ಎನ್ಡಿಟಿವಿ ಅದಾನಿ ಒಡೆತನದಲ್ಲಿರಬಹುದು, ಆದರೆ ಒಂದು ಮಾಧ್ಯಮ ಸಂಸ್ಥೆಯಾಗಿ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಬೇಕು. ಈ ರೀತಿ ಇಬ್ಬರು ಕಾಂಗ್ರೆಸ್ ಮುಖಂಡರ ಮಧ್ಯೆ ತಂದಿಟ್ಟು ತಮಾಷೆ ನೋಡುವುದು ನೈಜ ಪತ್ರಿಕೋದ್ಯಮವಲ್ಲ. ಈ ಕುರಿತು ಎನ್ಡಿಟಿವಿ ಸ್ಪಷ್ಟೀಕರಣ ನೀಡಲಿ. ಇಲ್ಲವೇ ಎನ್ಡಿಟಿವಿ ಸಂಸ್ಥೆ ಬಿಜೆಪಿಯ ಟೂಲ್ಕಿಟ್ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ' ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಈ ಕುರಿತು ಮಾಧ್ಯಮಗಳಿಗೆ ಸರಳವಾಗಿ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, 'ಇದಕ್ಕೆ ಪ್ರಾಮುಖ್ಯತೆ ಕೊಡಬೇಕಿಲ್ಲ. ನಮ್ಮ ಲೀಡರ್ ಏನು ಅಂತ ನನಗೆ ಗೊತ್ತು, ನಮ್ಮ ಸಿದ್ದರಾಮಯ್ಯ ಏನು ಅಂತ ನನಗೆ ಗೊತ್ತು, ಮೀಡಿಯಾಗಳ ಜನರು ಏನು ಅಂತ ನನಗೆ ಗೊತ್ತು' ಎಂದು ಹೇಳಿದ್ದಾರೆ.












Click it and Unblock the Notifications