karnataka rain: ಕರಾವಳಿ ಜಿಲ್ಲೆಗಳಿಗೆ ಮತ್ತೆ ವರುಣಾತಂಕ: 3 ದಿನದ ರಾಜ್ಯದ ಹವಾಮಾನ ವರದಿ
ಬೆಂಗಳೂರು, ಜುಲೈ 13: ಕರ್ನಾಟಕ ಮಲೆನಾಡು, ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿದಿದ್ದು, ಇದು ಮುಂದಿನ ಕೆಲವು ದಿನ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಕಡಿಮೆಯಾಗಿದ್ದ ವರುಣ ಮುಂದಿನ ಮೂರು ದಿನ ಮತ್ತಷ್ಟು ತೀವ್ರಗೊಳ್ಳುವ ಸುಳಿವು ನೀಡಿದ್ದಾನೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಕರ್ನಾಟಕದಲ್ಲಿ ಮಳೆ ಪ್ರಭಾವ ಇಳಿಕೆ ಆಗಿದೆ ಅನ್ನುಷ್ಟರದಲ್ಲಿಯೇ ಕೆಲವು ಜಿಲ್ಲೆಗಳಲ್ಲಿ ಮತ್ತಷ್ಟು ಹೆಚ್ಚಾಗಿ ಅಬ್ಬರಿಸಲಿದೆ. 'ರೆಡ್ ಅಲರ್ಟ್'ನಿಂದ ಈಗಷ್ಟೇ ಯೆಲ್ಲೋ ಅಲರ್ಟ್ಗೆ ಮರಳಿದ್ದ ಕರಾವಳಿಯ ಮೂರು ಜಿಲ್ಲೆಗಳೂ ಮತ್ತೆ 'ಆರೆಂಜ್ ಅಲರ್ಟ್' ಪಡೆದಿದೆ.

ಹೌದು, ಮುಂದಿನ ಮೂರು ದಿನ (ಜುಲೈ 16ರ ವರೆಗೆ) ಕರಾವಳಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹತ ವ್ಯಾಪಕ ಮಳೆ ಆಗಲಿದೆ. ಈ ಮೂರು ಜಿಲ್ಲೆಗಳಿಗೆ ಜುಲೈ 14ರಂದು ಅತ್ಯಧಿಕ ಮಳೆ ಸುರಿಯಲಿರುವ ಕಾರಣಕ್ಕೆ ಒಂದು ದಿನ 'ಆರೆಂಜ್ ಅಲರ್ಟ್' ನೀಡಲಾಗಿದೆ.
ನಂತರ ಎರಡು ದಿನ ಸಾಧಾರಣದಿಂದ ಭಾರಿ ಮಳೆಯ ನಿರೀಕ್ಷೆ ಇರುವ ಸಂಬಂಧ ಇದೇ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡಿನ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್
ಇತ್ತ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಮುಂದಿನ ಮೂರು ದಿನವೂ ಜೋರು ಮಳೆ ಆಗಲಿದೆ. ಹೀಗಾಗಿ ಮೂರು ದಿನವೂ ಈ ಜಿಲ್ಲೆಗಳು ಯೆಲ್ಲೋ ಅಲರ್ಟ್ ಪಡೆದಿವೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಮಂಡ್ಯ, ಮೈಸೂರು, ವಿಜಯನಗರ, ಚಾಮರಾಜನಗರ ಜಿಲ್ಲೆಗಳಿಗೆ ಮುಂದಿನ ಎರಡು ದಿನ ಉತ್ತಮ ಮಳೆಯ ಆಗಮನವಾಗಲಿದೆ.
ಇನ್ನೂ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ, ಕಲಬುರಗಿಯ ವಿವಿಧ ಪ್ರದೇಶಗಳಲ್ಲಿ ಮುಂದಿನ ಮೂರು ದಿನ ಆಗಾಗ ಹಗುರದಿಂದ ಸಾಧಾರಣ ಮಳೆ ಬೀಳುವ ಸಾಧ್ಯತೆಗಳು ಇವೆ. ಇದರ ಹೊರತು ಈ ಭಾಗದ ಜಿಲ್ಲೆಗಳಿಗೆ ಯಾವುದೇ ಗಂಭೀರ ಸ್ವರೂಪದ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಕರಾವಳಿಗೆ ಬಿದ್ದ ಮಳೆ ಮಾಹಿತಿ
ಈ ಹಿಂದಿನ 24 ಗಂಟೆಗಳಲ್ಲಿ ರಾಜ್ಯದ ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಅಧಿಕ ಮಳೆ ಆಗಿದೆ. ಉಡುಪಿ ಜಿಲ್ಲೆ ಕೊಲ್ಲೂರು ಮತ್ತು ಸಿದ್ದರಾಪುರದಲ್ಲಿ ಕ್ರಮವಾಗಿ 18ಸೆಂಟೀ ಮೀಟರ್ ಮತ್ತು 17 ಸೆಂಟಿ ಮೀಟರ್ ಮಳೆ ದಾಖಲಾಗಿದೆ.
ಉಳಿದಂತೆ ಉತ್ತರ ಕನ್ನಡದ ಮಂಕಿ, ಕದ್ರಾ, ಉಡುಪಿಯ ಕೋಟಾ, ದಕ್ಷಿಣ ಕನ್ನಡ ಜಿಲ್ಲೆಯ ಪೆಣಂಬೂರು, ಶಿವಮೊಗ್ಗ ಜಿಲ್ಲೆ ಲಿಂಗನಮಕ್ಕಿ ಸೇರಿದಂತೆ ಶಿರಾಲಿ, ಮಗಳೂರು ವಿಮಾನ ನಿಲ್ದಾಣ, ತಾಳಗುಪ್ಪ, ಶೃಂಗೇರಿ, ಹೊನ್ನಾವರ, ಕಾರ್ಕಳ, ಮಂಗಳೂರು ಹಾಗೂ ಮತ್ತಿತರ ಕಡೆಗಳಲ್ಲಿ ವ್ಯಾಪಕ ವಾಗಿ ಮಳೆ ದಾಖಳಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮುಂದಿನ ಎರಡರಿಂದ ಮೂರು ದಿನ ಕೆಲವೆಡೆ ಚದುರಿದಂತೆ ತುಂತುರು ಮಳೆಯಾದರೆ, ಇನ್ನೂ ಕೆಲವೆಡೆ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯುವ ಲಕ್ಷಣಗಳು ಇವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಳೆ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.












Click it and Unblock the Notifications