Karnataka rain: ರಾಜ್ಯದಲ್ಲಿ 3 ದಿನ ತೀವ್ರ ಮಳೆ, ಕರಾವಳಿಗೆ 'ಆರೆಂಜ್ ಅಲರ್ಟ್', ಒಳನಾಡಿನ ಮುನ್ಸೂಚನೆ
ಬೆಂಗಳೂರು, ಸೆಪ್ಟಂಬರ್ 29: ಕರ್ನಾಟಕದಲ್ಲಿ ಸುರಿದಿದ್ದ ಮಳೆ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಇವೆ. ಮುಂದಿನ ಮೂರು ದಿನ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಸುರಿಯಲಿದ್ದು, ಕೆಲವು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.
ಹವಾಮಾನದಲ್ಲಿನ ಒಂದಷ್ಟು ಬದಲಾವಣೆಗಳಿಂದ ರಾಜ್ಯದ ಕರಾವಳಿ ಮತ್ತು ಒಳನಾಡು ಜಿಲ್ಲೆಗಳಲ್ಲಿ ಮಳೆ ಬಿರುಸುಗೊಂಡಿದೆ. ಈ ಪೈಕಿ ಕರಾವಳಿಯಲ್ಲಿ ನಾಳೆಯಿಂದ ಶನಿವಾರದಿಂದ ಸೋಮವಾರದ ವರೆಗೆ ಗುಡುಗು ಮಿಂಚು ಸಹಿತ ಅತ್ಯಧಿಕ ಮಳೆ ನಿರೀಕ್ಷೆ ಇದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಶನಿವಾರ ಒಂದು ದಿನ ಆರೆಂಜ್ ಅಲರ್ಟ್' ನೀಡಲಾಗಿದೆ. ಉಳಿದ ಎರಡು ದಿನ ಕರಾವಳಿ ಮೂರು ಜಿಲ್ಲೆಗಳಿಗೆ ಆರಂಜ್ ಅಲರ್ಟ್ ನೀಡಲಾಗಿದೆ.

ಇನ್ನೂ ಒಳನಾಡಿನ ಜಿಲ್ಲೆಗಳಲ್ಲಿ ಮಂಗಳವಾರದವರೆಗೆ ಸಾಧಾರಣದಿಂದ ಭಾರಿ ಮಳೆ ನಿರೀಕ್ಷೆ ಇದೆ. ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಅಬ್ಬರಿಸಲಿದೆ. ಇಷ್ಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉಳಿದಂತೆ ಒಳನಾಡಿನ ಇನ್ನಿತರ ಜಿಲ್ಲೆಗಳಲ್ಲಿ ಮೂರು ದಿನ ಹಗುರದಿಂದ ಸಾಧಾರಣವಾಗಿ ಆಗಾಗ ಮಳೆ ಬೀಳಲಿದೆ. ನಂತರ ಎರಡು ದಿನ ಚದುರಿದಂತೆ ಮಳೆ ಬೀಳಲಿದೆ. ಬಂಗಾಳಕೊಲ್ಲಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದಲ್ಲಿ ಸುರಿಯುತ್ತಿದ್ದ ಮಳೆ ವಾತಾವರಣ ಮತ್ತಷ್ಟು ಬಿರುಸುಗೊಂಡಿದೆ.

ಉತ್ತರ ಕನ್ನಡ ಮತ್ತು ಬೀದರ್ಗೆ ಅಧಿಕ ಮಳೆ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಮತ್ತು ಬೀದರ್ನಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಉಳಿದಂತೆ ಚಿಕ್ಕಮಗಳೂರು, ದಕ್ಷಿಣ ಕನ್ನಡ, ತುಮಕೂರು, ವಿಜಯಪುರ, ಹಾವೇರಿ, ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ಬಿರುಸಿನ ಮಳೆ ದಾಖಲಾಗಿದೆ. ಉಳಿದಂತೆ ಹಗುರದಿಂದ ಸಾಧಾರಣವಾಗಿ ಮಳೆ ಆಗಿದೆ.
ಇನ್ನೂ ಮುಂದಿನ ಒಂದೆರಡು ದಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಗಾಗ ತುಂತುರು ಮಳೆ, ಒಂದೆರಡು ಕಡೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆಗಳು ಕಂಡು ಬಂದಿದೆ. ತಾಪಮಾನ ಸಹ ಸಾಮಾನ್ಯವಾಗಿರಲಿದ್ದು, ಮಬ್ಬು ವಾತಾವರಣ ಕಂಡು ಬರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications