ಬಸವಕಲ್ಯಾಣದಲ್ಲಿ ಯಡಿಯೂರಪ್ಪ ವಿರುದ್ಧ ಸಿದ್ದು ಲೆಫ್ಟ್ ಅಂಡ್ ರೈಟ್
ಬಸವಕಲ್ಯಾಣ, ಡಿಸೆಂಬರ್ 13: ಚೆಕ್ ಮೂಲಕ ಲಂಚ ತೆಗೆದುಕೊಂಡ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಬಿ.ಎಸ್.ಯಡಿಯೂರಪ್ಪ ಒಬ್ಬರೇ. ಅದೇ ಕಾರಣಕ್ಕೆ ಜೈಲಿಗೆ ಹೋಗಿಬಂದವರು ಈಗ ಪರಿವರ್ತನಾ ಯಾತ್ರೆ ಅಂತ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಇಲ್ಲಿ ವಾಗ್ದಾಳಿ ನಡೆಸಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಮಂತ್ರಿ ಬೀದರ್ ಗೆ ಬಂದಿದ್ದರು. ಆದರೆ ಅವರ ಹೆಸರನ್ನು ಪ್ರಸ್ತಾವ ಮಾಡಲಿಲ್ಲ್ ಅಂತ ಹೇಳ್ತಿದ್ದರು. ಆದರೆ ನಾನು ಕನ್ನಡ ನಾಡಿನಲ್ಲಿ ಹುಟ್ಟಿದವನು. ಬಸವಣ್ಣನವರನ್ನು ನೆನಪಿಸಿಕೊಳ್ತೀನಿ ಎಂದು ಹೇಳಿದರು.
ನೂರಾ ಎಂಬತ್ತೆಂಟು ಕೋಟಿ ರುಪಾಯಿಯಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇವೆ. ಯಡಿಯೂರಪ್ಪನವರು ಇಲ್ಲಿಗೆ ಬಂದಾಗ ಹೇಳಿದ್ದರಂತೆ: ಸಿದ್ದರಾಮಯ್ಯ ಅವರು ಏನೂ ಮಾಡಿಲ್ಲ ಅಂತ. 932 ಕೋಟಿ ರುಪಾಯಿ ಮೊತ್ತದ ನೀರಾವರಿ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಇದನ್ನು ಯಡಿಯೂರಪ್ಪ ಮಾಡಿದ್ದರಾ ಎಂದು ಪ್ರಶ್ನಿಸಿದರು.
ಕಾರಂಜಾ ಯೋಜನೆ ಐವತ್ತು ವರ್ಷದಿಂದ ಹಾಗೇ ಇತ್ತು. ಅದಕ್ಕಾಗಿ ನಾನೂರು ಮೂವತ್ತೆರಡು ಕೋಟಿ ಖರ್ಚು ಮಾಡಿದ್ದೇವೆ ಎಂದರು. ಆಗಿನಿಂದ ಮುಖ್ಯಮಂತ್ರಿ ಆಗಿದ್ದವರ ಪೈಕಿ ಜೈಲಿಗೆ ಹೋದವರು ಒಬ್ಬರೇ ಒಬ್ಬರು. ಅದು ಯಡಿಯೂರಪ್ಪ ಎಂದು ಹೇಳಿದರು.

ಜೈಲಿಗೆ ಹೋದವರು ಎಷ್ಟು ಮಂದಿ
ನಿಮ್ಮ ಸರಕಾರದಲ್ಲಿದ್ದವರಲ್ಲಿ ಜನಾರ್ದನ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು, ಸುರೇಶ್ ಬಾಬು, ಆನಂದ್ ಸಿಂಗ್, ಹಾಲಪ್ಪ ಹೀಗೆ ಎಷ್ಟು ಜನ ಜೈಲಿಗೆ ಹೋದರು, ಎಷ್ಟು ಜನ ಜಾಮೀನಿನ ಮೇಲೆ ಹೊರಗೆ ಇದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ನಾವು ನೋಟು ಮುದ್ರಿಸುವ ಯಂತ್ರ ಇಟ್ಟುಕೊಂಡಿದ್ದೀವಾ ಎಂದ ಬಿಎಸ್ ವೈ
ಇನ್ನೇನು ನಮ್ಮ ಸರಕಾರ ಐದು ವರ್ಷ ಪೂರೈಸುತ್ತಿದೆ. ಈ ಅವಧಿಯಲ್ಲಿ ಯಾವುದಾದರೂ ಭ್ರಷ್ಟಾಚಾರ ಹಗರಣ ಆಗಿದೆಯಾ? ಇನ್ನು ನಮ್ಮ ಸರಕಾರ ಎಂಟು ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ಇದೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಅಂತ ಕೇಳಿದರೆ, ನಾವು ನೋಟು ಮುದ್ರಣದ ಯಂತ್ರ ಇಟ್ಟುಕೊಂಡಿದ್ದೀವಾ ಎಂದು ಪ್ರಶ್ನಿಸಿದ್ದರು ಅಂತ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.

ಸಮಾಜದ ಶಾಂತಿ ಕದಡುವ ಯತ್ನ
ಯಡಿಯೂರಪ್ಪ ಅವರಿಗೆ ಎರಡು ನಾಲಗೆ. ಅವರು ಅಧಿಕಾರದಲ್ಲಿದ್ದಾಗ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಅವರಿಗೆ ಹೇಳಲು ಏನೂ ಇಲ್ಲ. ಅದಕ್ಕೆ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಸಂಘರ್ಷದ ವಾತಾವರಣ ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ. ಜನರ ಮಧ್ಯೆ ವಿಷ ಹಿಂಡುವಂಥ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಗೆ ವಾಪಸ್ ಹೋಗಲ್ಲ ಎಂದು ಅಲ್ಲಾಹ್ ಮೇಲೆ ಆಣೆ
ಕೆಜೆಪಿ ಕಟ್ಟಿದಾಗ ಯಡಿಯೂರಪ್ಪನವರು ಅಲ್ಲಾಹ್ ಮೇಲೆ ಆಣೆ ಮಾಡಿ ಹೇಳಿದ್ದರು: ನಾನು ಬಿಜೆಪಿಗೆ ವಾಪಸ್ ಹೋಗಲ್ಲ ಅಂತ. ಈಗ ಅವರು ಯಾವ ಪಕ್ಷದಿಂದ ಸಂಸದ ಆಗಿದ್ದಾರೆ ಎಂದು ಪ್ರಶ್ನೆ ಮಾಡಿದರು. ಇನ್ನು ಆಗ ಟಿಪ್ಪುನನ್ನು ಮಹಾನ್ ವೀರ ಅಂತ ಹೋಗಳಿದವರು ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದರು.












Click it and Unblock the Notifications