ಮುಖ್ಯಮಂತ್ರಿ ಸಿದ್ದರಾಮಯ್ಯ ಉಚಿತ ಸಲಹೆ ಕೇಳಿಸಿಕೊಳ್ಳಿ

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ '1987ರವರೆಗೆ ಸಿಗರೇಟ್ ಸೇದುತ್ತಿದ್ದೆ. ಬಿಡಬೇಕು ಅಂದುಕೊಂಡಾಗಲೆಲ್ಲ ಮತ್ತಷ್ಟು ಸೇದಲು ಪ್ರಾರಂಭಿಸುತ್ತಿದೆ' ಎಂದು ತಮ್ಮ ಸಿಗರೇಟ್ ಪ್ರೇಮವನ್ನು ಹೊರಹಾಕಿದ್ದಾರೆ.
'ಪ್ರತಿ ಯುಗಾದಿಗೆ ಸಿಗರೇಟ್ ನಿಂದ ದೂರವಾಗುವ ಪ್ರತಿಜ್ಞೆ ಮಾಡುತ್ತಿದ್ದೆ. ಆದರೆ ಅವತ್ತೇ ಸಿಗರೇಟ್ ಮೇಲೆ ಮತ್ತಷ್ಟು ಮಗದಷ್ಟು ಪ್ರೀತಿ ಹೆಚ್ಚಾಗುತ್ತಿತ್ತು. ಆಮೇಲಾಮೇಲೆ ಆರೋಗ್ಯ ಕೈಕೊಡುತ್ತಿರುವುದು ಅನುಭವಕ್ಕೆ ಬಂತು. ಎಚ್ಚೆತ್ತುಕೊಂಡು ಅನಿವಾರ್ಯವಾಗಿ ಸಿಗರೇಟಿನಿಂದ ಸಂಪೂರ್ಣ ದೂರವಾದೆ' ಎಂದು ಸಿಗರೇಟ್ ಕಚ್ಚಿದ್ದ ತುಟಿಯಂಚಿನಿಂದ 66 ವರ್ಷದ ಸಿದ್ದರಾಮಯ್ಯ ಒಂದು ನಗೆ ಚೆಲ್ಲಿದರು.
ಅಷ್ಟೇ ಅಲ್ಲ ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ನಾಡಿನ ಯುವಜನತೆಗೆ ಒಂದು ಉಚಿತ ಸಲಹೆಯನ್ನೂ ನೀಡಿದ್ದಾರೆ, ಕೇಳಿಸಿಕೊಳ್ಳಿ.
'ಶೋಕಿಗಾಗಿ ಸಿಗರೇಟ್ ಹಾಗೂ ಬೀಡಿ ಸೇದಿ ಮುಂದೆ ಕುಟುಂಬ ಸದಸ್ಯರು ನಿಮಗಾಗಿ ಶೋಕ ಆಚರಿಸುವಂತೆ ಮಾಡಬೇಡಿ. ಸತ್ತರೂ ಸಿಗರೇಟ್ ಹಾಗೂ ಮದ್ಯಪಾನ ಬಿಡಲ್ಲ ಎನ್ನುವ ಜನರಿದ್ದಾರೆ. ಸರ್ಕಾರ ನಿಷೇಧ ಮಾಡುವುದರಿಂದ ಇಂತಹ ಕೆಟ್ಟ ಚಟಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಜನರೇ ಆ ಚಟದಿಂದ ಬಿಡಿಸಿಕೊಳ್ಳಬೇಕು' ಎಂದು ರಾಜೀವ್ ಗಾಂಧಿ ಎದೆ ರೋಗ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ತಿಳಿಸಿದರು.
'ಗ್ರಾಮೀಣ ಪ್ರದೇಶದ ಜನರಿಗೆ ಈ ಮೊದಲು ಅಷ್ಟು ರೋಗಗಳು ಬರುತ್ತಿರಲಿಲ್ಲ. ಆದರೆ ಈಗ ಧೂಮಪಾನ, ಮದ್ಯಪಾನ ಹಾಗೂ ಇತರ ಕೆಟ್ಟ ಚಟಗಳಿಗೆ ದಾಸರಾಗಿ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದರೆ ಈ ಚಟಗಳಿಂದ ದಯವಿಟ್ಟು ದೂರವಿರಿ. ಈ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ' ಎಂದೂ ರಾಜ್ಯದ ಜನತೆಯಲ್ಲಿ ಮುಖ್ಯಮಂತ್ರಿ ಮನವಿ ಮಾಡಿದರು.












Click it and Unblock the Notifications