ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಬಗ್ಗೆ ಸಿದ್ದರಾಮಯ್ಯ ಮಹತ್ವದ ಮಾಹಿತಿ!
ರಾಜ್ಯದಲ್ಲಿ ನಿಗಮ ಮಂಡಳಿಗೆ ನೂತನ ಅಧ್ಯಕ್ಷರ ನೇಮಕ ವಿಚಾರ ವಿಧಾನಸಭೆ ಎಲೆಕ್ಷನ್ ರೇಂಜ್ಗೆ ಕಾವು ಪಡೆಯುತ್ತಿದೆ. ಅದರಲ್ಲೂ ಲೋಕಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್ ಒಳಗೆ ಹೊತ್ತಿರುವ ಅಸಮಾಧಾನದ ಕಿಡಿಗೆ, ನೀರು ಹಾಕಲು ಕಾಂಗ್ರೆಸ್ ನಾಯಕರಿಗೆ ಇದು ಅತ್ಯುತ್ತಮ ಅವಕಾಶ. ಹೀಗಿದ್ದಾಗಲೇ ನಿಗಮ ಮಂಡಳಿ ನೇಮಕಾತಿ ಬಗ್ಗೆ, ಸಿದ್ದರಾಮಯ್ಯ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
ಅಂದಹಾಗೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದವರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು ಅಂತಾ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ನಿಗಮ ಮಂಡಳಿ ನೇಮಕಾತಿ ಬಗ್ಗೆಯೂ ಮಹತ್ವದ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಸಿದ್ಧವಾಗಿದೆ ಫುಲ್ ಲಿಸ್ಟ್!
ಅಂದಹಾಗೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಶಾಸಕರನ್ನು ಪರಿಗಣಿಸಲಾಗುವುದು. ನಾನು & ಡಿಸಿಎಂ ಅಂತಿಮ ಪಟ್ಟಿಯ ಸಿದ್ಧಪಡಿಸಿ ಪಕ್ಷದ ವರಿಷ್ಠರಿಗೆ ನೀಡಲಾಗಿದ್ದು ಅನುಮತಿ ನಿರೀಕ್ಷಿಸಲಾಗಿದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಮೂಲಕ, ಇನ್ನೇನು ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕಾತಿಗೆ ಕ್ಷಣಗಣನೆ ಆರಂಭವಾಗಿದೆ ಎಂಬುದನ್ನ ತಿಳಿಸಿದ್ದಾರೆ.
ಬೆಳೆಹಾನಿ ಪರಿಹಾರದ ಮಾಹಿತಿ
ಹಾಗೇ ಬೆಳೆಹಾನಿ ಬಗ್ಗೆ ಮಾತನಾಡಿದ ಸಿಎಂ, 'ಬೆಳೆಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಎನ್ಡಿಆರ್ಎಫ್ ಮಾರ್ಗ ಸೂಚಿಯಂತೆ ನಿಗದಿಯಾದ ಪರಿಹಾರ ಮೊತ್ತನ ನೀಡಲಾಗುವುದು. ಹಾವೇರಿ ಜಿಲ್ಲೆಗೆ ಕುಡಿವ ನೀರು, ಮೇವು, ಉದ್ಯೋಗ ಸೇರಿ ವಿವಿಧ ಕಾರ್ಯಗಳಿಗೆ 226 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎಲ್ಲಾ ಜಿಲ್ಲಾಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಬರಗಾಲದ ಪರಿಸ್ಥಿತಿ ಬಗ್ಗೆ ನಿಗಾ ವಹಿಸುವುದಲ್ಲದೇ, ಕುಡಿವ ನೀರಿಗೆ ಕೊರತೆ ಬರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ' ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ನಮ್ಮ ದುಡ್ಡು ನಮಗೆ ಕೊಡ್ತಿಲ್ಲ!
ಎನ್ಆರ್ಜಿಎಸ್ ಅಡಿ ಬರಗಾಲದ ಸ್ಥಿತಿಯಲ್ಲಿ 150 ಮಾನವ ದಿನಗಳ ಉದ್ಯೋಗ ನೀಡುವಂತೆ ನಿಯಮವಿದೆ. ಈ ಕ್ರಮಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕಿದ್ದು, ಈವರೆಗೆ ಅನುಮತಿ ನೀಡಿಲ್ಲ. ಇಡೀ ದೇಶದಲ್ಲಿ 12 ರಾಜ್ಯದಲ್ಲಿ ಬರಗಾಲ ಸ್ಥಿತಿಯಿದೆ. ರಾಜ್ಯಕ್ಕೆ ಬರ ಅಧ್ಯಯನಕ್ಕೆ ಕೇಂದ್ರ ತಂಡ ಬಂದು ಪರಿಶೀಲಿಸಿದೆ. ಆದ್ರು ಕೇಂದ್ರದಿಂದ ಬರಪರಿಹಾರ ಬಿಡುಗಡೆಯಾಗಿಲ್ಲ. ರಾಜ್ಯದ ದುಡ್ಡನ್ನು ರಾಜ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
ನಾನು ವಕೀಲನಾಗಿರುವುದರಿಂದಲೇ ಹಿಂದಿನ ತನಿಖಾ ಆದೇಶ ಕಾನೂನು ರೀತಿ ಇರಲಿಲ್ಲವೆಂದು ವಾಪಸ್ ಪಡೆಯಲಾಗಿದೆ. ನನಗೆ ಕಾನೂನಿನ ಅರಿವು ಇಲ್ಲದಿದ್ರೆ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ & ಕುಮಾರಸ್ವಾಮಿ ಅವರಂತೆ ನಾನು ಕಾನೂನುಬಾಹಿರವಾಗಿದ್ದರೂ ತನಿಖೆಗೆ ಸಮ್ಮತಿಸುತ್ತಿದ್ದೆ ಎಂದರು ಸಿಎಂ ಸಿದ್ದರಾಮಯ್ಯ.












Click it and Unblock the Notifications