Karnataka CM : ನನ್ನನ್ನು ಸಿಎಂ ಮಾಡುದ್ರೆ... ಹೈಕಮಾಂಡ್ಗೆ ಡಿಕೆ ಶಿವಕುಮಾರ್ ಕೊಟ್ರು ಬಿಗ್ ಆಫರ್!
ಕರ್ನಾಟಕ ಸಿಎಂ ಆಯ್ಕೆ ವಿಚಾರ ತಾರಕಕ್ಕೇರಿದೆ, ಸಿಎಂ ಆಯ್ಕೆ ಈಗ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಯಾರು ಮುಖ್ಯಮಂತ್ರಿ ಆಗ್ತಾರೆ ಎನ್ನುವುದೇ ದೊಡ್ಡ ಚರ್ಚೆಯಾಗಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ಗೆ ಡಿಕೆಶಿ ದೊಡ್ಡ ಆಫರ್ ನೀಡಿದ್ದಾರೆ ಎಂದು ಹೇಳಲಾಗಿದೆ.
ಒಂದು ವೇಳೆ ನನ್ನನ್ನು ಸಿಎಂ ಮಾಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವಂತೆ ಮಾಡುತ್ತೇನೆ ಮತ್ತು ಸಿದ್ದರಾಮಯ್ಯ ಅವರಿಂದ ಬರುವ ಎಲ್ಲಾ ಸವಾಲಗಳನ್ನು ನಿಭಾಯಿಸುತ್ತೇನೆ ಎಂದು ಹೈಕಮಾಂಡ್ಗೆ ಡಿಕೆ ಶಿವಕುಮಾರ್ ಆಫರ್ ನೀಡಿದ್ದಾರೆ ಎಂದು ಹೇಳಲಾಗಿದೆ.

ಮತ ಎಣಿಕೆ ಮುಗಿದು 4 ದಿನವಾದರೂ ಕಾಂಗ್ರೆಸ್ ಇನ್ನೂ ಸಿಎಂ ಆಯ್ಕೆಯ ಗೊಂದಲದಲ್ಲೇ ಕಾಲ ಕಳೆಯುತ್ತಿದೆ. ಇಬ್ಬರೂ ನಾಯಕರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಸಿಎಂ ಸ್ಥಾನಕ್ಕೆ ಭಾರಿ ಪೈಪೋಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಶಾಸಕರ ಬೆಂಬಲ ಯಾರಿಗೆ ಹೆಚ್ಚಾಗಿದೆ ಅವರಿಗೆ ಸಿಎಂ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟಿದ್ದರೆ, ಕೆಪಿಸಿಸಿ ಅಧ್ಯಕ್ಷ ನಾನು ನನಗೆ ಸಿಎಂ ಸ್ಥಾನ ನೀಡಿ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ.
ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರು ನಾಯಕರ ಜೊತೆ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದರೂ ಒಮ್ಮತದ ತೀರ್ಮಾನ ಮಾಡಲು ಸಾಧ್ಯವಾಗಲಿಲ್ಲ. ಇಂದು ರಾಹುಲ್ ಗಾಂಧಿ ಕೂಡ ಇಬ್ಬರು ನಾಯಕರ ಜೊತೆ ಚರ್ಚೆ ಮಾಡಿದ್ದಾರೆ. ಯಾವುದೇ ಸಂಧಾನಕ್ಕೂ ಡಿಕೆಶಿ ಒಪ್ಪಿಲ್ಲ ಎಂದು ಹೇಳಲಾಗಿದ್ದು, ನನಗೆ ಸಿಎಂ ಸ್ಥಾನ ಕೊಡ ಇಲ್ಲ ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡಿ ಎಂದು ಆಫರ್ ಕೂಡ ನೀಡಿದ್ದಾರೆ ಎನ್ನಲಾಗಿದೆ.
ಏನೇ ಬಂದ್ರು ನಾನು ನೋಡಿಕೊಳ್ತೇನೆ
ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಿದರೆ ಸಿದ್ದರಾಮಯ್ಯ ಅವರ ಅಸಮಾಧಾನ ಎದುರಿಸುವುದು ಹೇಗೆ ಎನ್ನುವ ಆತಂಕ ಹೈಕಮಾಂಡ್ಗೆ ಎದುರಾಗಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಡಿಕೆಶಿ, ನನಗೆ ಸಿಎಂ ಮಾಡಿ, ಮುಂದಿನದ್ದನ್ನು ಏನೇ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಒಬ್ಬ ಶಾಸಕ ಕೂಡ ಕಾಂಗ್ರೆಸ್ ಬಿಡದಂತೆ ನೋಡಿಕೊಳ್ತೇನೆ, ನನ್ನ ಮೇಲಿನ ಕೇಸ್ಗಳು ಸುಪ್ರೀಂಕೋರ್ಟ್ನಲ್ಲಿವೆ, ಪ್ರಕರಣಗಳಿಂದ ಪಕ್ಷಕ್ಕೆ ಯಾವುದೇ ಮುಜುಗರ ಆಗಲ್ಲ, ಮುಖ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ಸ್ಥಾನಗಳನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ನನ್ನದು ಎಂದು ಡಿಕೆಶಿ ರಾಹುಲ್ ಗಾಂಧಿ ಮುಂದೆ ಹೇಳಿದ್ದಾರೆ.
ಅಧಿಕಾರ ಹಂಚಿಕೆಯಾದರೂ ನಾನೇ ಮೊದಲು ಸಿಎಂ ಆಗ್ಬೇಕು
ಇನ್ನು ಇಬ್ಬರಿಗೂ ಅಧಿಕಾರ ಹಂಚಿಕೆ ಮಾಡುವ ಹೈಕಮಾಂಡ್ ನಿರ್ಧಾರಕ್ಕೆ ಡಿಕೆಶಿ ಮತ್ತು ಸಿದ್ದರಾಮಯ್ಯ ಒಪ್ಪಿಕೊಂಡಿದ್ದರೂ, ಡಿಕೆ ಶಿವಕುಮಾರ್ ಮಾತ್ರ ನನಗೆ ಮೊದಲು ಸಿಎಂ ಆಗಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು ಇಬ್ಬರ ನಡುವಿನ ತಿಕ್ಕಾಟ ತಾರಕಕ್ಕೇರಿದ ನಂತರ ಈಗ ಪ್ರಿಯಾಂಕ ಗಾಂಧಿ ಕೂಡ ರಾಜಿ ಸಂಧಾನ ಮಾಡಲು ಮುಂದಾಗಿದ್ದಾರೆ. ಡಿಕೆಶಿ ಅವರ ಮನವೊಲಿಸಲು ಪ್ರಿಯಾಂಕ ಗಾಂಧಿ ಚರ್ಚೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಏನೇ ಆದರೂ ಇನ್ನು 48 ಗಂಟೆಗಳ ಒಳಗೆ ಸಿಎಂ ಹೆಸರು ಘೋಷಣೆ ಮಾಡುವುದಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.












Click it and Unblock the Notifications