ನವೆಂಬರ್ನಲ್ಲಿ ಸಂಪುಟ ಪುನಾರಚನೆ: ಇವರಿಗೆ ಅವಕಾಶ: ದಿಲ್ಲಿಯಿಂದ ಬಂತು ಸ್ಫೋಟಕ ಸುದ್ದಿ
ನವದೆಹಲಿ, ಸೆಪ್ಟೆಂಬರ್ 22 : ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಯ ಕುರಿತು ಗುಸು ಗುಸು ಕೇಳಿ ಬರುತ್ತಿದೆ. ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂದು ಕೈ ಪಾಳಯದ ಒಂದು ಬಣ ಬಹಿರಂಗವಾಗಿ ಹೇಳಿದ್ದು, ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಸುದ್ದಿಲ್ಲದೇ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿವೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈಗಾಗಲೇ ಎರಡು ವರ್ಷಗಳು ಪೂರೈಸಿದ್ದು, ನವೆಂಬರ್ ಗೆ ಎರಡುವರೆ ವರ್ಷ ಪೂರ್ಣಗಳ್ಳಲಿದೆ. ಹೀಗಾರುವಾಗ ಸಚಿವ ಸಂಪುಟ ಪುನಾರಚನೆ ಚರ್ಚೆಗಳು ಶುರುವಾಗಿದ್ದು, ಶೇ 50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ಮಾತು ಕೈ ಪಾಳಯದಲ್ಲಿ ಕೇಳಿ ಬಂದಿದೆ. ಇದಕ್ಕೆ ಪೂರಕವೆಂಬಂತೆ ದೆಹಲಿಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಈ ಕುರಿತು ಇಂದು (ಸೋಮವಾರ) ದೆಹಲಿಯಲ್ಲಿ ಮಾತನಾಡಿರುವ ಸಲೀಂ ಅಹಮದ್, ನವೆಂಬರ್ ನಲ್ಲಿ ಸಂಪುಟ ಪುನರ್ ರಚನೆಯಾಗಲಿದೆ. ಶೇ 50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ. ಸಚಿವ ಸ್ಥಾನ ದಿಂದ ಹೊರ ಬಂದವರಿಗೆ ಪಕ್ಷದ ಕೆಲಸ ವಹಿಸಲಾಗುತ್ತದೆ. ಇನ್ನು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆಗಳಿದ್ದು, ಎರಡು ದಶಕಗಳಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ರಿಗೆ ಸಚಿವ ಸ್ಥಾನ ನೀಡಿಲ್ಲ. ಈ ಬಾರಿ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಮಂತ್ರಿಯಾಗುವ ಆಸೆಯನ್ನ ಸಲೀಂ ಅಹಮದ್ ಬಿಚ್ಚಿಟ್ಟಿದ್ದಾರೆ.
ನವೆಂಬರ್ ನಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷ ಆಗುತ್ತದೆ. ಹಾಗಾಗಿ ಸಂಪುಟ ಬದಲಾವಣೆ ಆಗಲಿದೆ ಸುಮಾರು ಶೇ.50 ರಷ್ಟು ಹೊಸಬರಿಗೆ ಸ್ಥಾನ ನೀಡಲಾಗುತ್ತದೆ. ಸಂಪುಟದಿಂದ ಕೈಬಿಟ್ಟಂದವರಿಗೆ ಪಕ್ಷದ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಜೊತೆಗೆ ಪಕ್ಷ ಸಂಘಟನೆ ಮಾಡಲಾಗುತ್ತದೆ ಮುಂದಿನ 2028 ರಲ್ಲಿ ಕೂಡ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಹಾಗಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಅಂತ ಹೇಳಿದ್ದೇವೆ. ಸಂಪುಟ ಬದಲಾವಣೆ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಸ್ಪೋಟಕ ಹೇಳಿಕೆ ನೀಡಿದರು.
ಸದ್ಯ ನವೆಂಬರ್ ಹೊತ್ತಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಸಂಪುಟ ಪುನಾರಚನೆ ಆಗಲಿದೆ ಎನ್ನುವ ಗುಸುಗುಸು ಚರ್ಚೆಗಳು ನಡೆಯುತ್ತಿರುವಾಗಲೇ ಸಲೀಂ ಅಹಮದ್ ಅವರ ಈ ಹೇಳಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಸಂಪುಟದಿಂದ ಯಾರಿಗೆ ಕೊಕ್ ಕೊಡುತ್ತಾರೆ ಎನ್ನುವ ಆತಂಕ ಸಚಿವರುಗಳಲ್ಲಿ ಮನೆ ಮಾಡಿದೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಯಾವ ನಿಲುವು ತೆಗೆದುಕೊಳ್ಳುತ್ತೆ ಎನ್ನುವುದೇ ಸದ್ಯದ ಕುತೂಹಲ. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಣದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಹೈಕಮಾಂಡ್ ಯಾವ ಮಾನದಂಡದ ಮೇಲೆ ಮಂತ್ರಿಗಿರಿಯನ್ನ ನೀಡುತ್ತದೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications