ಉಪಚುನಾವಣೆ: 5 ಅಭ್ಯರ್ಥಿಗಳನ್ನು ಸೋಲಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಮಾಡಿದ 'ಶಪಥ'
ಡಿಸೆಂಬರ್ ಐದರಂದು ನಡೆಯಲಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಇಂದು (ನ 18) ನಾಮಪತ್ರ ಸಲ್ಲಿಸಲು ಅಂತಿಮದಿನ. ಡಿಸೆಂಬರ್ ಒಂಬತ್ತರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಹದಿನೈದು ಕ್ಷೇತ್ರಗಳ ಪೈಕಿ ಹನ್ನೊಂದು ಕ್ಷೇತ್ರಕ್ಕೆ ಮಾತ್ರ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಉಳಿದಂತೆ, ಎರಡು ಕ್ಷೇತ್ರಗಳಲ್ಲಿ ತನ್ನ ಬೆಂಬಲವನ್ನು ಇನ್ನೊಂದು ಅಭ್ಯರ್ಥಿಗೆ ಎಂದು ಈಗಾಗಲೇ ಹೇಳಿದೆ.
ಇನ್ನು, ಕಾಗವಾಡ ಮತ್ತು ಅಥಣಿಯಲ್ಲಿ ತನ್ನ ಅಭ್ಯರ್ಥಿಯನ್ನು ಜೆಡಿಎಸ್ ಪ್ರಕಟಿಸಲಿಲ್ಲ. ಯಡಿಯೂರಪ್ಪ ಸರಕಾರದ ಅಸ್ತಿತ್ವಕ್ಕೆ ಸವಾಲಾಗಿರುವ ಈ ಉಪಚುನಾವಣೆಯಲ್ಲಿ, ಕೆಲವೊಂದು ಕಡೆ ತ್ರಿಕೋಣ ಸ್ಪರ್ಧೆ ಏರ್ಪಡಲಿದೆ. "ನನ್ನ ಗುರಿ, ಪ್ರಮುಖವಾಗಿ ಐದು ಕ್ಷೇತ್ರಗಳು" ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶಪಥ ಮಾಡಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ಉಪಚುನಾವಣೆ ನಡೆಯುತ್ತಿರುವ ಹದಿನೈದು ಕ್ಷೇತ್ರಗಳಲ್ಲಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಗೆದ್ದದ್ದು ಮೂರು ಕ್ಷೇತ್ರ. ಈ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದನ್ನು ಕುಮಾರಸ್ವಾಮಿ ಎರಡನೇ ಆದ್ಯತೆಯಾಗಿ ತೆಗೆದುಕೊಂಡಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.

ಹೊಸಕೋಟೆ, ಗೋಕಾಕದಲ್ಲಿ ಜೆಡಿಎಸ್ ಬೆಂಬಲ
ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮತ್ತು ಗೋಕಾಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ, ಜೆಡಿಎಸ್ ಬೆಂಬಲ ನೀಡಲಿದೆ ಎನ್ನುವುದು ಅಧಿಕೃತ ಸುದ್ದಿ. ಇನ್ನು, ಹಿರೇಕೆರೂರು, ಯಲ್ಲಾಪುರ, ರಾಣೆಬೆನ್ನೂರಿನಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದ್ದರೂ, ಅಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.

ಹುಣಸೂರಿನಿಂದ ನಿಂದ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್
2018ರ ಅಸೆಂಬ್ಲಿ ಚುನಾವಣೆಯಲ್ಲಿ ಹುಣಸೂರಿನಿಂದ ಎಚ್.ವಿಶ್ವನಾಥ್, ಕೆ.ಆರ್.ಪೇಟೆಯಿಂದ ನಾರಾಯಣಗೌಡ ಮತ್ತು ಮಹಾಲಕ್ಷ್ಮೀ ಲೇಔಟ್ ನಿಂದ ಗೋಪಾಲಯ್ಯ, ಜೆಡಿಎಸ್ ಟಿಕೆಟಿನಿಂದ ಗೆದ್ದಿದ್ದರು. ಈ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದನ್ನು ಕುಮಾರಸ್ವಾಮಿ, ಎರಡನೇ ಆದ್ಯತೆಯಾಗಿ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ.

ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಮುನ್ನ ಕುಮಾರಸ್ವಾಮಿ ಶಪಥ
ಸಮ್ಮಿಶ್ರ ಸರಕಾರ ಉರುಳಲು ಪ್ರಮುಖ ಕಾರಣವಾಗಿದ್ದವರು, ರಮೇಶ್ ಜಾರಕಿಹೊಳಿ, ವಿಶ್ವನಾಥ್, ಎಂಟಿಬಿ ನಾಗರಾಜ್, ಎಸ್.ಟಿ.ಸೋಮಶೇಖರ್ ಮತ್ತು ಡಾ.ಕೆ. ಸುಧಾಕರ್. ಇವರನ್ನು ಶತಾಯಗತಾಯು ಸೋಲಿಸಲೇ ಬೇಕೆಂದು ಶಪಥ ಮಾಡಿರುವ ಕುಮಾರಸ್ವಾಮಿ, ಅದಕ್ಕೆ ಸೂಕ್ತ ಹೆಜ್ಜೆಗಳನ್ನು ಇಡುತ್ತಿದ್ದಾರೆ ಎನ್ನುವ ಮಾಹಿತಿಯಿದೆ.

ಬಿಜೆಪಿ ಗೆಲ್ಲಬಾರದು ಎನ್ನುವ ನಿರ್ಧಾರಕ್ಕೆ ಕುಮಾರಸ್ವಾಮಿ
ಗೋಕಾಕ್ ನಲ್ಲಿ ಲಖನ್ ಜಾರಕಿಹೊಳಿಗೆ, ಹೊಸಕೋಟೆಯಲ್ಲಿ ಎಂಟಿಬಿಗೆ ವಿರುದ್ದವಾಗಿ ಶರತ್ ಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಇನ್ನುಳಿದಂತೆ, ಜೆಡಿಎಸ್ ಗೆಲ್ಲಲಾಗದಿದ್ದರೂ, ಬಿಜೆಪಿ ಗೆಲ್ಲಬಾರದು ಎನ್ನುವ ನಿರ್ಧಾರಕ್ಕೆ (ಆ ಪಕ್ಷದಿಂದ ಅನರ್ಹರು ಸ್ಪರ್ಧಿಸುತ್ತಿರುವುದರಿಂದ) ಕುಮಾರಸ್ವಾಮಿ ಬಂದಿದ್ದಾರೆ ಎನ್ನುವ ಮಾಹಿತಿಯಿದೆ. ಯಶವಂತಪುರ ಮತ್ತು ಚಿಕ್ಕಬಳ್ಳಾಪುರದಲ್ಲಿ ವಿಶೇಷ ಪ್ರಚಾರ ನಡೆಸಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ಕುಮಾರಸ್ವಾಮಿ ಮೊದಲ ಆದ್ಯತೆ
ಕೆ.ಆರ್.ಪೇಟೆ ಮತ್ತು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ರಣತಂತ್ರ ರೂಪಿಸುತ್ತಿದೆ. ಆದರೆ, ಕುಮಾರಸ್ವಾಮಿ ಮೊದಲ ಆದ್ಯತೆ, ಐದು ಅಭ್ಯರ್ಥಿಗಳನ್ನು ಹೇಗಾದರೂ ಸೋಲಿಸುವುದು. ಈ ನಿಟ್ಟಿನಲ್ಲಿ, ಕುಮಾರಸ್ವಾಮಿ ಭರವಸೆಯ ಮಾತನ್ನಾಡಿದ್ದಾರೆ ಎನ್ನುತ್ತದೆ ಜೆಡಿಎಸ್ ವಲಯಗಳು.












Click it and Unblock the Notifications