ಸಾಮಾನ್ಯ ನಾಗರಿಕನಿಗೆ ಸಂಕಷ್ಟ ತಂದಿಟ್ಟ ಬಂದ್ಗಳು
ಬೆಂಗಳೂರು, ಜುಲೈ, 28: ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಮುಷ್ಕರದ್ದೇ ಕಾರು ಬಾರು. ಇದೀಗ ಕಳಸಾ ಬಂಡೂರಿಗೆ ಸಂಬಂಧಿಸಿ ನ್ಯಾಯಾಧೀಕರಣ ನೀಡಿರುವ ಮಧ್ಯಂತರ ತೀರ್ಪು ರಾಜ್ಯದಲ್ಲಿ ಆಕ್ರೋಶದ ಕಿಡಿ ಹತ್ತಿಸಿದೆ.
ಇಲ್ಲಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುವ ಜನರದ್ದು ತಪ್ಪೋ, ಬೇಡಿಕೆಗಳನ್ನು ತಳ್ಳಿ ಹಾಕುತ್ತಲೇ ಬಂದಿರುವ ಸರ್ಕಾರದ್ದು ತಪ್ಪೋ? ಹೇಳಲು ಸಾಧ್ಯವಿಲ್ಲ. ಆದರೆ ಒಟ್ಟಿನಲ್ಲಿ ಸಾಮಾನ್ಯ ನಾಗರಿಕ ಇಂಥ ಸಂದರ್ಭಗಳು ಎದುರಾದಾಗ ಪ್ರತಿದಿನ ತಾಪತ್ರಯ ಪಡುವುದು ತಪ್ಪಿಲ್ಲ. ಬಸ್ ಇಲ್ಲವೋ? ಶಾಲೆ ಇದೆಯೋ? ಸರ್ಕಾರಿ ಕಚೇರಿಯಲ್ಲಿನ ತುರ್ತು ಕೆಲಸ ಆಗುತ್ತದೆಯೋ ಇಲ್ಲವೋ? ಎಂಬ ಗೊಂದಲದಲ್ಲೇ ದಿನ ದೂಡಬೇಕಾಗುತ್ತದೆ.[ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ]
ಕೆಎಸ್ ಆರ್ ಟಿಸಿ ನೌಕರರ ಮುಷ್ಕರದ ಕಾರಣಕ್ಕೆ ಇಡೀ ರಾಜ್ಯ ಮೂರು ದಿನ ಸ್ತಬ್ಧವಾಗಿತ್ತು. ಇದೀಗ ಕಳಸಾ ಬಂಡೂರಿ ಬೆಂಕಿ ಹೊತ್ತಿಕೊಂಡಿದೆ. ಮತ್ತೆ ಶನಿವಾರ ಅಂದರೆ ಜುಲೈ 30 ಕ್ಕೆ ಕನ್ನಡ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಒಟ್ಟಿನಲ್ಲಿ ಪ್ರತಿದಿನ ಬಂದ್ ದಿನ ಎಂಬಂತೆ ಆಗಿದೆ. ಅನಿವಾರ್ಯವಾಗಿ ಜನ ಸಂಕಷ್ಟ ಅನುಭವಿಸಲೇಬೇಕಾಗಿದೆ.
ಕೋಲಾರದ ರೈತರಿಗೆ ಸಿಕ್ಕಿದ್ದು ಲಾಠಿ ಏಟು
ಕುಡಿಯುವ ನೀರು ಕೇಳಿಕೊಂಡು ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನ ಕಡೆ ಪಾದಯಾತ್ರೆ ಬಂದಿದ್ದ ರೈತರಿಗೆ ಸರ್ಕಾರ ನೀಡಿದ್ದು ಲಾಠಿ ಏಟು. ದೇವನಹಳ್ಳಿ ರಸ್ತೆಯ ಮೂಲಕ ರೈತ ಶಕ್ತಿ ವಿಧಾನಸೌಧದ ಕಡೆ ನುಗ್ಗಿ ಬರುತ್ತಿದ್ದ ವೇಳೆ ಅವರನ್ನು ಬೆಂಗಳೂರಿನ ನಗರದ ಮಧ್ಯಭಾಗಕ್ಕೆ ಕರೆಸಿಕೊಂಡ ಸರ್ಕಾರ ಲಾಠಿ ಚಾರ್ಜ್ ಮಾಡಿತ್ತು. ಈ ವೇಳೆ ನಾಗರಿಕರು ತೊಂದರೆ ಅನುಭವಿಸಿದ್ದರು.
ಪ್ರಕರಣ ದಾಖಲು-ಹಿಂದಕ್ಕೆ
ನೀರು ಕೇಳಿಕೊಂಡು ಬಂದವರ ಮೇಲೆ ಸರ್ಕಾರ ಪ್ರಕರಣದ ದಾಖಲು ಮಾಡಿತ್ತು. ಹೋರಾಟದ ನಂತರ ಎಲ್ಲ ಪಪ್ರಕರಣಗಳನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹೇಳಿತ್ತು.
ಕಳಸಾ ಬಂಡೂರಿ
ಕಳಸಾ ಬಂಡೂರಿ ಹೋರಾಟ ಆರಂಭವಾಗಿ ವರ್ಷವೇ ಉರುಳಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕನಡುವಿನ ಸಮನ್ವಯ ಕೊರತೆ ರಾಜ್ಯದ ರೈತರ ಹಿತಕ್ಕೆ ಮಾರಕವಾಗಿದೆ. ಸರ್ವ ಪಕ್ಷ ನಿಯೋಗ ಹೋಗಿ ಪ್ರಧಾನಿಯನ್ನು ಭೇಟಿ ಮಾಡಿ ಬಂದಿದ್ದಷ್ಟೆ ಸದ್ಯದ ಸಾಧನೆ
ಮುಂದೇನು
ಉತ್ತರ ಕರ್ನಾಟಕದ ರೈತರ ಮುಂದೆ ಉಳಿದಿರುವುದು ಹೋರಾಟದ ದಾರಿ ಮಾತ್ರ. ಸರ್ಕಾರ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಸುಪ್ರೀಂ ಮೊರೆ ಹೋಗುತ್ತೇನೆ ಎಂದು ಹೇಳಿದೆ. ಆದರೆ ಇದಕ್ಕೆಲ್ಲ ಸ್ಷಷ್ಟ ಉತ್ತರ ಸಿಗಲು ಇನ್ನೆಷ್ಟು ತಿಂಗಳು ಬೇಕೋ? ಮತ್ತೆ ಬಂದ್ ಆದರೆ ಅದರ ಪರಿಣಾಮ ಸಾಮಾನ್ಯ ನಾಗರಿಕನ ಮೇಲೆಯೇ.