Get Updates
Get notified of breaking news, exclusive insights, and must-see stories!
Live

Karnataka Budget 2023 Highlights: ಮಂಡನೆಯಾದ ರಾಜ್ಯ ಬಜೆಟ್‌ನ ಪ್ರಮುಖ ಅಂಶಗಳು ಇವು

ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಹಣಕಾಸು ಸಚಿವರು ಆದ ಮುಖ್ಯಮಂತ್ರಿಗಳು ಬೆಳಗ್ಗೆ 10.15ಕ್ಕೆ ತಮ್ಮ ಬಜೆಟ್ ಭಾಷಣ ಆರಂಭಿಸಲಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರವಿರುವುದರಿಂದ ರಾಜ್ಯ ಸರ್ಕಾರದ ಮೇಲೆ ಭಾರಿ ನಿರೀಕ್ಷೆಗಳು ಇವೆ.

ಬೆಂಗಳೂರು, ಫೆಬ್ರವರಿ 17: ಕರ್ನಾಟಕದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ಮೇಲೆ ಎರಡನೇ ಬಾರಿಗೆ 'ರಾಜ್ಯ ಬಜೆಟ್ 2023-24' ಮಂಡಿಸಲಿದ್ದಾರೆ. ಫೆಬ್ರವರಿ 17 ರಂದು ಶುಕ್ರವಾರ ಬೆಳಗ್ಗೆ 10.15ಕ್ಕೆ ಆಯವ್ಯಯ ಮಂಡಿಸಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದ ಜನತೆಯು ಸರ್ಕಾರದ ಭರಪೂರ ಕೊಡುಗೆ/ಘೋಷಣೆಗಳ ನಿರೀಕ್ಷೆಯಲ್ಲಿದ್ದಾರೆ.

ಬಸವರಾಜ ಬೊಮ್ಮಾಯಿಯವರು ಪ್ರಸಕ್ತ 2023-24ನೇ ಸಾಲಿನ ಬಜೆಟ್ ಜನಪರ ಮತ್ತು ಬಡವರ ಪರವಾಗಿರಲಿದೆ ಎಂದು ಸ್ವತಃ ತಿಳಿಸಿದ್ದಾರೆ. ಅನಿಶ್ಚಿತತೆಯಲ್ಲಿ ಬದುಕುತ್ತಿರುವ ರಾಜ್ಯದ ರೈತರನ್ನು ಆರ್ಥಿಕವಾಗಿ ಚೇತರಿಸುವ ನಿಟ್ಟಿನಲ್ಲಿ ಕೃಷಿ ವಲಯಕ್ಕೆ ಹಾಗೂ ಪ್ರಮುಖ ನೀರಾವರಿ ಯೋಜನೆಗಳ ಮೇಲೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

ಈ ವರ್ಷ ರಾಜ್ಯದ ಹಣಕಾಸು ಸ್ಥಿತಿಗತಿ ಉತ್ತಮವಾಗಿದೆ ಎನ್ನಲಾಗಿದೆ. ಕೋವಿಡ್ ನಂತರ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಹೀಗಾಗಿ ಜನಸಾಮಾನ್ಯರಿಗೆ ತೆರಿಗೆ ಹೊರೆ ಬೀಳದಂತೆ ಬಜೆಟ್ ಮಂಡಿಸುವ ಹೊಣೆ ಮುಖ್ಯಮಂತ್ರಿಗಳ ಮೇಲಿದೆ. ಬ್ಯಾಂಕ್‌ಗಳಿಂದ ರೈತರಿಗೆ ದೊರೆಯುವ ಸಾಲದ ಮಿತಿ ಹೆಚ್ಚಿಸುವ ನಿರ್ಧಾರ ಈ ಬಾರಿ ಪ್ರಕಟವಾಗಬಹುದು.

Karnataka Budget 2023 Live Updates: CM Basavaraj Bommai Budget Speech Highlights and Announcements

ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಶಿಕ್ಷಣ, ನೀರಾವರಿ, ಮೂಲಭೂತ ಸೌಲಭ್ಯಗಳಿಗೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಆದ್ಯತೆ ನೀಡುವ ಮೂಲಕ ಪ್ರತಿ ಪಕ್ಷಗಳಿಗೆ ಸೂಕ್ತ ಉತ್ತರ ನೀಡಲಿದ್ದಾರೆ. ತವರು ಜಿಲ್ಲೆ ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳ ಅಭಿವೃದ್ಧಿಗೆ, ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಮುಖ್ಯಮಂತ್ರಿಗಳು ಪ್ರಮುಖ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಗಳು ಇವೆ.

Feb 17, 2023, 4:32 pm IST

ರಾಮಮಂದಿರ ನಿರ್ಮಾಣ: ಡಿಕೆಶಿಗೆ ಸುಧಾಕರ್ ತಿರುಗೇಟು

ಬಜೆಟ್‌ನಲ್ಲಿ ರಾಮನಗರದ ಬೆಟ್ಟದಲ್ಲಿ 'ರಾಮಮಂದಿರ' ಕಟ್ಟುವುದಾಗಿ ಬಿಜೆಪಿ ಸರ್ಕಾರ ಘೋಷಣೆ ಬೆನ್ನಲ್ಲೆ ಹೆಚ್ಚಾದ ರಾಜಕೀಯ ಆರೋಪ-ಪ್ರತ್ಯಾರೋಗಳು. ಇದಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಮನಗರದಲ್ಲಿ ಮೊದಲು ಪಕ್ಷದ ಕಚೇರಿ ಕಟ್ಟಲಿ. ಮುಂದೆ ಕೌಶಲ್ಯಾಭಿವೃದ್ಧಿ ಹಗರಣ ಬಯಲಿಗೆಳೆಯುತ್ತೇನೆ ಎಂದು ವಾಗ್ದಾಳಿ. ಡಿಕೆ ಶಿವಕುಮಾರ್‌ಗೆ ತಿರುಗೇಟು ನಿಡಿದ ಸಚಿವ ಡಾ.ಕೆ.ಸುಧಾಕರ್, ಬಿಜೆಪಿಯವರಿಗೆ ದೇಶದ ಆಶಯ ಮೊದಲು ಮುಖ್ಯ. ಹೀಗಾಗಿ ನಾವು ಮೊದಲು ದೇವಸ್ಥಾನ ಕಟ್ಟುತ್ತೇವೆ. ನಂತರ ಪಕ್ಷದ ಕಚೇರಿ ಕಟ್ಟುತ್ತೇವೆ. ಬೇಕಿದ್ದರೆ ಕಾಂಗ್ರೆಸ್‌ನವರು ಮೊದಲು ಪಕ್ಷದ ಕಚೇರಿ ಕಟ್ಟಲಿ ಎಂದರು.
Feb 17, 2023, 3:58 pm IST

ಉನ್ನತ ಶಿಕ್ಷಣ: ನವೀನ ಯೋಜನೆ ಪ್ರಸ್ತಾಪ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರ್ವಜನಪರ ಬಜೆಟ್‌ ಅನ್ನು ಮಂಡಿಸಿ ಸರ್ವೇ ಜನಾಃ ಸುಖಿನೋ ಭವಂತು ಎಂಬ ತತ್ವದಲ್ಲಿ ನಮ್ಮ ಪಕ್ಷಕ್ಕೆ ನಂಬಿಕೆ ಇರುವುದನ್ನು ಸಾದರ ಪಡಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು. ಉಳಿತಾಯ ಬಜೆಟ್‌ ಅನ್ನು ಮಂಡಿಸುವ ಮೂಲಕ ಕರ್ನಾಟಕವನ್ನು ಆರ್ಥಿಕವಾಗಿ ಸ್ವಾವಲಂಬಿ ರಾಜ್ಯವಾಗಿ ಪರಿವರ್ತಿಸಲಾಗಿದೆ. ಬಜೆಟ್‌ನಲ್ಲಿ ಐಐಟಿ ಮಾದರಿ ಕಾಲೇಜುಗಳ ಸ್ಥಾಪನೆ ಸೇರಿದಂತೆ ಹಲವು ನವೀನ ಯೋಜನೆ ಪ್ರಸ್ತಾಪಿಸಲಾಗಿದೆ. ಅಗತ್ಯ ಅನುದಾನ ಒದಗಿಸಿ ಉನ್ನತ ಶಿಕ್ಷಣದಲ್ಲಿ ಹಿಂದೆಂದೂ ಆಗದಂತಹ ಪ್ರಗತಿಯ ಹಾದಿಯಲ್ಲಿ ಮುಖ್ಯಮಂತ್ರಿಗಳು ದಾಪುಗಾಲಿಟ್ಟಿದ್ದಾರೆ. ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿಗೆ ವೇದಿಕೆ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
Feb 17, 2023, 3:48 pm IST

ಉದ್ಯೋಗ ಸೃಷ್ಟಿ: ಬಿಜೆಪಿ ಕಾಲೆಳೆದ ಕಾಂಗ್ರೆಸ್

ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ನಿರುದ್ಯೋಗಿ ಪದವೀಧರರಿಗೆ ಆರ್ಥಿಕ ನೆರವು ಎಂದಿದ್ದಾರೆ. ಈ ಮೂಲಕ ಉದ್ಯೋಗ ಸೃಷ್ಟಿ ನಮ್ಮಿಂದ ಸಾಧ್ಯವಾಗಿಲ್ಲ, ಮುಂದೆ ಸಾಧ್ಯವೂ ಇಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ಕಾಲೆಳೆದಿದೆ. ಈ ಸಂಬಂಧ ಟ್ವೀಟ್‌ ಮಾಡಿರುವ ಕಾಂಗ್ರೆಸ್, ಕರ್ನಾಟಕ ರಾಜ್ಯದ ಯುವಕರ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸಿಗುವುದು ಬಿಜೆಪಿಯಿಂದ ಮರಿಚಿಕೆಯೇ ಸರಿ. ಈ ಮೂಲಕ ಯುವಕರ ಕಿವಿ ಮೇಲೆ ಹೂವು ಇಡುವ ಪ್ರಯತ್ನವಷ್ಟೇ ಮಾಡಲಾಗಿದೆ ಎಂದು ಟೀಕಿಸಿದೆ.
Feb 17, 2023, 3:33 pm IST

ಅಲ್ಪಸಂಖ್ಯಾತರ ವೃದ್ಧಿಗೆ ಗಮನ

ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮುಖ್ಯವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ವಿದೇಶದಲ್ಲಿ ವ್ಯಾಸಂಗ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ. 20 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಯೋಜನೆ ಸೇರಿದಂತೆ ಈ ವರ್ಗಕ್ಕೆ ಬಜೆಟ್‌ ಆದ್ಯತೆ ನೀಡಲಾಗಿದೆ
Feb 17, 2023, 3:02 pm IST

ಸುದ್ದಿಗೋಷ್ಠಿ ಅಂತ್ಯ

ವಿಧಾನಸೌಧದಲ್ಲಿ ಬಜೆಟ್‌ ಮೇಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸುದ್ದಿಗೋಷ್ಠಿ ಅಂತ್ಯ.
Feb 17, 2023, 2:57 pm IST

ಕೋವಿಡ್‌ ಮುನ್ನ-ನಂತರದ ಸಾಲಕ್ಕೆ ಹೋಲಿಕೆ ಬೇಡ

ಕೋವಿಡ್ ಇಲ್ಲದ ಕಾಲದಲ್ಲೇ 2ಲಕ್ಷ ಕೋಟಿ ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಅವರು ಮಾಡಿದ ಸಾಲವನ್ನು ತೀರಿಸಲಾಗಿದೆ. ಇರುವ ಮೀತಿಯಲ್ಲೇ ಬಿಜೆಪಿ ಸರ್ಕಾರ ಸಾಲ ಮಾಡಿದೆ. ಮುಖ್ಯವಾಗಿ ಕೋವಿಡ್ ಸಮಯದಲ್ಲಿ ಎಲ್ಲವನ್ನು ಸರಿದೂಗಿಸಲು ಸಾಲ ಮಾಡಲಾಗಿದೆ. ಆದರೆ ಕೋವಿಡ್‌ ಮುನ್ನದ ಸಾಲಕ್ಕೂ, ಕೋವಿಡ್ ಸಂದರ್ಭದಲ್ಲಿನ ಸಾಲಕ್ಕೆ ಹೋಲಿಕೆ ಮಾಡಬಾರದು - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
Feb 17, 2023, 2:55 pm IST

ಬಜೆಟ್: ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ

ರಕ್ತಹೀನತೆ ನಿವಾರಣೆಗೆ 'ಆರೋಗ್ಯ ಪುಷ್ಠಿ ಯೋಜನೆ' ಜಾರಿ. ಸ್ಥಳೀಯವಾಗಿ ಪ್ರಯೋಗಾಲಯ ಸೇವೆ ನೀಡುವ ಸಂಬಂಧ 129 ತಾಲೂಕ ಪ್ರಯೋಗಾಲಯ ನಿರ್ಮಿಸಲಾಗುವುದು. ಇದೇ ರೀತಿ ಬಜೆಟ್ ನಲ್ಲಿ ಸಾಕಷ್ಟು ಯೋಜನೆ ಕೈಗೊಂಡಿದ್ದರ ಬಗ್ಗೆ ತಿಳಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
Feb 17, 2023, 2:42 pm IST

ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದ ಕೊಡುಗೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಶಿಕ್ಷಣ ವಲಯಕ್ಕೆ ನೀಡಿರುವ ಆಧ್ಯತೆಗಳು, ರೂಪಿಸಿದ ಹೊಸ ಕ್ರಮಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಒದಗಿಸುತ್ತಿರುವ ಪ್ರೋತ್ಸಾಹ, ವಸತಿ ಶಾಲೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ಕೈಗೊಂಡ ಎಲ್ಲ ಕ್ರಮಗಳ ಬಗ್ಗೆ ವಿವರಿಸಿದರು.
Feb 17, 2023, 2:33 pm IST

ಮಾಶಾಸನ ಹೆಚ್ಚಳ, ಬಡ್ಡಿ ರಹಿತ ಸಾಲ

ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯರಿಗೆ ಮಾಸಾನ ಹೆಚ್ಚಿಸಲಾಗಿದೆ. 3000 ರೂ.ನಿಂದ 10,000 ರೂಪಾಯಿಗೆ ಮಾಶಾಸನ ಹೆಚ್ಚಳ ಮಾಡಲಾಗಿದೆ. ಆ್ಯಸಿಡ್ ದಾಳಿಯ ಸಂತ್ರಸ್ತೆಯರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಸಹ ನೀಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.
Feb 17, 2023, 2:28 pm IST

ಮಹಿಳೆ-ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್

ದುಡಿಯುವ ಮಹಿಳೆಯರಿಗೆ ಸಂಚಾರ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ದುಡಿಯುವ ಮಹಿಳೆಯರು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳಲು ಸಂಚಾರ ಸಮಸ್ಯೆ ಆಗುತ್ತಿದೆ. ಹೀಗಾಗಿ ಅವರಿಗೆ ಫ್ರಿ ಬಸ್‌ ಟ್ರಾವೆಲ್/ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿದೆ. ಯಾವ ವಿದ್ಯಾರ್ಥಿನಿ ಶಿಕ್ಷಣದಿಂದ ವಂಚಿತವಾಗಬಾರದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
Feb 17, 2023, 2:24 pm IST

ಆವರ್ತ ನಿಧಿ ಹೆಚ್ಚಳ, ರೈತಪರ ಸರ್ಕಾರ: ಬೊಮ್ಮಾಯಿ

ರಾಜ್ಯದ 56 ಲಕ್ಷ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ 180 ಕೋಟಿ ರೂಪಾಯಿಯಲ್ಲಿ 'ಜೀವನ ಜ್ಯೋತಿ' ಯೋಜನೆ ಜಾರಿ. ಬೆಲೆ ಕುಸಿತ ಕಂಡಾಗ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗಾಗಿ ಆವರ್ತ ನಿಧಿಗೆ ಈ ಭಾರಿ 1500 ಕೋಟಿ ರೂ. ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಬಿಜೆಪಿ ರೈತರ ಪರವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿಕೊಂಡರು.
Feb 17, 2023, 2:20 pm IST

ಯಾವ ಸರ್ಕಾರವು ಮಾಡದ ಸಾಧನೆ ನಮ್ಮ ಬಿಜೆಪಿ ಸರ್ಕಾರ ಮಾಡಿದೆ. ಕಳೆವ ವರ್ಷಕ್ಕಿಂತ ಈ ವರ್ಷ 43ಸಾವಿರ ಕೋಟಿ (ಶೇ.16) ಬಜೆಟ್ ಮೌಲ್ಯ ಹೆಚ್ಚಾಗಿದೆ. ಆರ್ಥಿಕ ಕ್ಷಮತೆಯಿಂದ ಗಾತ್ರ ಹೆಚ್ಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿಕೆ.
Feb 17, 2023, 2:18 pm IST

ಶೇ.16ರಷ್ಟು ಗಾತ್ರ ಹೆಚ್ಚಳ

ಈ ವರ್ಷ ಶೇ.16ರಷ್ಟು ರಾಜ್ಯದ ಬಜೆಟ್‌ ಗಾತ್ರ ಹೆಚ್ಚಿಸಲಾಗಿದೆ. ಇದರಿಂದ ವಿಶ್ವಾಸ ಹೆಚ್ಚಾಗಿದ್ದು, ಅಭಿವೃದ್ಧಿಗೆ ದೃಷ್ಟಿಯಿಂದ ಗಾತ್ರ ಹೆಚ್ಚಳ. ಎಲ್ಲ ವರ್ಗದವರಿಗೆ ಬಜೆಟ್‌ನಲ್ಲಿ ಅನುಕೂಲ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
Feb 17, 2023, 2:14 pm IST

ರಾಜ್ಯದ ಆರ್ಥಿಕತೆ ಸುಧಾರಣೆ ಆಗಿದೆ: ಸಿಎಂ ಬೊಮ್ಮಾಯಿ

ರಾಜ್ಯದ ಆರ್ಥಿಕತೆ ಸುಧಾರಣೆ ಆಗಿದೆ: ಸಿಎಂ ಬೊಮ್ಮಾಯಿ
ಕೊರೊನಾ ನಂತರ ಕರ್ನಾಟಕದಲ್ಲಿ ಆರ್ಥಿಕತೆ ಸುಧಾರಣೆ ಕಷ್ಟ ಎಂದಿದ್ದರು. ಆದರೆ ತಜ್ಞರ ನಿರೀಕ್ಷೆಗೂ ಮೀರಿ ಆದಾಯ ಸಂಗ್ರಹವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
Feb 17, 2023, 2:12 pm IST

ಬಜೆಟ್ ಮಂಡನೆ: ಸರ್ಕಾರವನ್ನು ಅಭಿನಂದಿಸಿದ ಕಟಿಲ್

ಬಿಜೆಪಿ ರಾಜ್ಯ ಸರ್ಕಾರವು ಗೋಸಂಪತ್ತಿನ ರಕ್ಷಣೆಗಾಗಿ ಬದ್ಧವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಸೇರಿದಂತೆ ವಿವಿಧ ಯೋಜನೆಗಳನ್ನು ಕೈಗೊಂಡ ರಾಜ್ಯಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ತಿಳಿಸಿದರು. ಮೀನುಗಾರರಿಗೆ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ನಮ್ಮ ಸರ್ಕಾರವು ಈ ಬಾರಿ 10,000 ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಿಸಲು ಕ್ರಮ ಕೈಗೊಂಡಿದೆ ಎಂದರು.
Feb 17, 2023, 2:07 pm IST

ಬಜೆಟ್: ಸಿದ್ದರಾಮಯ್ಯ ಸುದ್ದಿಗೋಷ್ಠಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಇದು ಬಿಜೆಪಿ ನಿರ್ಗಮನದ ಬಜೆಟ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಬಿಜೆಪಿ ಕಳೆದ ಬಜೆಟ್‌ನಲ್ಲಿ 206 ಕಾರ್ಯಕ್ರಮ ಘೋಷಣೆ ಮಾಡಿದ್ದರು. ಆದರಲ್ಲಿ ಹಲವು ಜಾರಿ ಮಾಡಿಲ್ಲ ಎಂದು ಆರೋಪಿಸಿದರು.
Feb 17, 2023, 1:58 pm IST

ರೈತರ ಆದಾಯ ದ್ವಿಗುಣಕ್ಕೆ ಕ್ರಮ: BSY

ಬಸವರಾಜ ಬೊಮ್ಮಾಯಿ ಅವರು ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಬಿಜೆಪಿಯ ಆಶಯದಂತೆಯೇ ರೈತರ ಆದಾಯ ದ್ವಿಗುಣಗೊಳಿಸಲು ಅನೇಕ ಕ್ರಮಗಳು ಇದರಲ್ಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಡವರು, ದುರ್ಬಲ ವರ್ಗ, ಮಹಿಳೆಯರ, ಶೋಷಿತರು ಮತ್ತು ಯುವಕರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಯಡಿಯೂರಪ್ಪ ಶ್ಲಾಘಿಸಿದರು.
Feb 17, 2023, 1:36 pm IST

ಆರೋಗ್ಯ ಇಲಾಖೆಗೆ ಅನುದಾನ: ಸುಧಾಕರ್ ಹರ್ಷ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಕರ್ನಾಟಕ 'ರಾಜ್ಯ ಬಜೆಟ್ 2023'ರಲ್ಲಿ ಬಗ್ಗೆ ಹರ್ಷ ವ್ಯಕ್ತಪಡಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್. ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಟ್ಟು 15,151 ಕೋಟಿ ರೂಪಾಯಿ ಅನುದಾನ‌ ನೀಡುವುದಾಗಿ ಘೋಷಿಸಿದ್ದಾರೆ. ಆರು ಹೊಸ ESI ಆಸ್ಪತ್ರೆಗಳು, ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಆರೋಗ್ಯ ಒತ್ತು ನೀಡುವ ಮೂಲಕ ಅವರು ಜನಸ್ನೇಹಿ ಬಜೆಟ್ ಮಂಡಿಸಿದ್ದಾರೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
Feb 17, 2023, 1:20 pm IST

ರಾಜ್ಯ ಬಜೆಟ್‌ಗೆ ಡಿಕೆಶಿ ಲೇವಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಈ ಬಜೆಟ್ ಇದು ಬಿಸಿಲು ಕುದುರೆ ಬಜೆಟ್. ಈ ಬಜೆಟ್ ಯಾರ ಕೈಗೂ ಸಿಗಲ್ಲ. ಇದು ಬಾಯ್... ಬಾಯ್... ಬಜೆಟ್, ಶೋ.. ಬಜೆಟ್‌ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
Feb 17, 2023, 1:14 pm IST

ಮಧ್ಯಾಹ್ನ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ

ಕರ್ನಾಟಕ ರಾಜ್ಯ ಬಜೆಟ್ ಮಂಡನೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಇಂದು (ಶುಕ್ರವಾರ) ಮಧ್ಯಾಹ್ನ 2 ಗಂಟೆಗೆ ಸುದ್ದಿಗೋಷ್ಠಿ.
Feb 17, 2023, 1:12 pm IST

ವಿಧಾನಸೌಧದ ಮುಂದೆ 'ಫೋಟೊ ಶೂಟ್'

ವಿಧಾನಸಭೆಯ ಸದಸ್ಯರ ಅವಧಿ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜ್ಯೆ 4 ಗಂಟೆಗೆ ವಿಧಾನಸೌಧದ ಮುಂದೆ ಜನಪ್ರತಿನಿಧಿಗಳು ಎಲ್ಲರೂ 'ಫೋಟೊ ಶೋಟ್' ನಲ್ಲಿ ಪಾಲ್ಗೊಳ್ಳಲಿದ್ದಾರೆ.
Feb 17, 2023, 1:08 pm IST

ಜಂಟಿ ಅಧೀವೇಶನ ಸೋಮವಾರಕ್ಕೆ ಮುಂದೂಡಿಕೆ

ಜಂಟಿ ಅಧೀವೇಶನ ಸೋಮವಾರಕ್ಕೆ ಮುಂದೂಡಿಕೆ
ಕರ್ನಾಟಕ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನವನ್ನು ಸೋಮವಾರ ಬೆಳಗ್ಗೆಗೆ ಮುಂದೂಡಿದ ಸಭಾಪತಿ ವಿಶ್ವೇಶ್ವರ ಹೆಗೆಡೆ ಕಾಗೇರಿ.
Feb 17, 2023, 12:55 pm IST

ಸಾರಿಗೆ: 10,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ

2023 -24ನೇ ಪ್ರಸಕ್ತ ಸಾಲಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 7500 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿ. ರಾಜ್ಯ ಸಾರಿಗೆ ಇಲಾಖೆಗೆ 10,500 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿ ಮಾಡಲಾಗಿದೆ.
Feb 17, 2023, 12:48 pm IST

'ಮುಖ್ಯಮಂತ್ರಿ ವಿಮಾ ಯೋಜನೆ' : 16 ಲಕ್ಷ ಜನಕ್ಕೆ ಸಹಾಯ

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ. ಟ್ಯಾಕ್ಸಿ, ಆಟೋ ಚಾಲಕರು ಮತ್ತು ಇ ಕಾಮರ್ಸ್‌ ಡೆಲಿವರಿ ಸೇವೆ ನೀಡುತ್ತಿರುವವರ ಕುಟುಂಬಕ್ಕೆ ಭದ್ರತೆ. ಇವರು ಮೃತಪಟ್ಟಿಲ್ಲಿ ಅವರ ಕುಟುಂಬಕ್ಕೆ 2ಲಕ್ಷ ರೂ.ಗಳ ವಿಮಾ ಯೋಜನೆ. ಅಪಘಾತದಿಂದ ಇವರು ಮೃತಪಟ್ಟರೆ 4 ಲಕ್ಷ ರೂ. ವಿಮಾ ಸೌಲಭ್ಯ ಒದಗಿಸಲು 'ಮುಖ್ಯಮಂತ್ರಿ ವಿಮಾ ಯೋಜನೆ' ರೂಪಿಸಲಾಗುವುದು.
Feb 17, 2023, 12:41 pm IST

ಕಾರಾಗೃಹ ನಿರ್ಮಾಣಕ್ಕೆ 410 ಕೋಟಿ ರೂ.

ಕರ್ನಾಟಕದ ಕಾರಾಗೃಹ ನಿರ್ಮಾಣ ಮತ್ತು ಕಾರಾಗೃಹಗಳ ಆಧುನಿಕರಣಕ್ಕೆ ಕ್ರಮ. 410 ಕೋಟಿ ರೂ. ವೆಚ್ಚದಲ್ಲಿ ಕಾರಾಗೃಹ ನಿರ್ಮಾಣ. 51 ಕೋಟಿ ರೂ. ವೆಚ್ಚದಲ್ಲಿ ಕಾರಾಗೃಹ ಆಧುನೀಕರಣ ಮಾಡಲಾಗುವುದು.
Feb 17, 2023, 12:35 pm IST

ರಾಜ್ಯದ ಆಡಳಿತ ವ್ಯವಸ್ಥೆ ಬಲಪಡಿಸಲು ಕ್ರಮ

ರಾಜ್ಯದ ಆಡಳಿತ ವ್ಯವಸ್ಥೆ ಬಲಪಡಿಸಲು ಕ್ರಮ. ಯುವಜನತೆಗೆ ಆಡಳಿತದಲ್ಲಿ ಹೆಚ್ಚಿನ ಉದ್ಯೋಗವಕಾಶ ಒದಗಿಸಲು ಒಂದು ಲಕ್ಷ ಹುದ್ದೆ ಭರ್ತಿಗೆ ಐತಿಹಾಸಿಕ ಕ್ರಮ. ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಈ ಸಾಲಿನಲ್ಲಿ ಪೂರ್ಣಗೊಳಿಸಲು ಆದೇಶ.
Feb 17, 2023, 12:25 pm IST

'ಬದುಕುವ ದಾರಿ'ಹೊಸ ಯೋಜನೆ ಜಾರಿ

ಗ್ರಾಮೀಣ ಯುಕವರ ಸ್ವಯಂ ಉದ್ಯೋಗ ಪ್ರೋತ್ಸಾಹಿಸಲು ಸಹಾಯ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಯುವಕರ ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ ಹತ್ತು ಸಾವಿರ ರೂ.ನಂತೆ ವಿವಿಧ ಚಟುವಟಿಕೆಗೆ 5 ಲಕ್ಷ ವರೆಗೆ ಸಹಾಯಧನ. 'ಬದುಕುವ ದಾರಿ' ಹೊಸ ಯೋಜನೆ ಜಾರಿ. ವಿದ್ಯಾಭ್ಯಾಸ ಮುಂದುವರಿಸಲು ಇಚ್ಛಿಸುವ ಯುವಕರಿಗೆ ಪ್ರೋತ್ಸಾಹ. ಐಟಿಐ ತರಬೇತಿಗಾಗಿ 1500ರೂ. ಶಿಷ್ಯ ವೇತನ.
Feb 17, 2023, 12:20 pm IST

ಪ್ರವಾಸಿತಾಣ: ಗೈಡ್ ಪ್ರೋತ್ಸಾಹಧನ ಹೆಚ್ಚಳ

ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನಗರೇಶ್ವರ ದೇವಸ್ಥಾನ ಪ್ರವಾಸಿ ತಾಣವಾಗಿ ಅಭಿವೃದ್ಧಿ. ಪ್ರವಾಸಿ ತಾಣಗಳಲ್ಲಿನ ಗೈಡ್‌ಗಳ ಪ್ರೋತ್ಸಾಹ ಧನ ಏರಿಕೆ. 2ಸಾವಿರ ರೂಪಾಯಿಯಿಂದ 5 ಸಾವಿರಕ್ಕೆ ಹೆಚ್ಚಳ.
Feb 17, 2023, 12:16 pm IST

40.15 ಕಿ.ಮೀ. ಮೆಟ್ರೋ ಮಾರ್ಗ ಕಾರ್ಯಗತ

ಬೆಂಗಳೂರಿನಲ್ಲಿ ಈ ವರ್ಷ 40.15 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ಕಾರ್ಯಗತಗೊಳಿಸಲು ಯೋಜಿಸಲಾಗಿದೆ. ಸಿಲ್ಕ ಬೋರ್ಡ್ ಜಂಕ್ಷನ್‌ನಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವರೆಗೆ ಮೆಟ್ರೋ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
Feb 17, 2023, 12:10 pm IST

ಕರ್ನಾಟಕ ಬಜೆಟ್: ಇಲಾಖಾವಾರು ಅನುದಾನ ಹಂಚಿಕೆ ಪಟ್ಟಿ

* ಶಿಕ್ಷಣ - 37,960 ಕೋಟಿ * ಜಲಸಂಪನ್ಮೂಲ - 22,854 ಕೋಟಿ * ಗ್ರಾಮೀಣಾಭಿವೃದ್ಧಿ - 20,494 ಕೋಟಿ * ನಗರಾಭಿವೃದ್ಧಿ - 17,938 ಕೋಟಿ * ಕಂದಾಯ - 15,943 ಕೋಟಿ * ಆರೋಗ್ಯ ವಲಯ - 15,151 ಕೋಟಿ * ಒಳಾಡಳಿತ, ಸಾರಿಗೆ - 14,509 ಕೋಟಿ * ಇಂಧನ - 13,803 ಕೋಟಿ * ಸಮಾಜ ಕಲ್ಯಾಣ - 11,163 ಕೋಟಿ * ಲೋಕೋಪಯೋಗಿ - 10,741 ಕೋಟಿ * ಕೃಷಿ, ತೋಟಗಾರಿಕೆ - 9,456 ಕೋಟಿ * ಮಹಿಳಾ, ಮಕ್ಕಳ ಕಲ್ಯಾಣ - 5,676 ಕೋಟಿ * ಆಹಾರ ವಲಯ - 4,600 ಕೋಟಿ * ವಸತಿ - 3,787 ಕೋಟಿ * ಇತರೆ - 1,16,968 ಕೋಟಿ
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+