ಇಳಿವಯಸ್ಸಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ ದರ್ಶನಕ್ಕೆ ಸರ್ಕಾರದಿಂದ ಹಣ!
ಜೀವನದಲ್ಲಿ ಒಮ್ಮೆ ಆದರೂ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಬೇಕು ಎಂಬ ಇಚ್ಛೆ ಹಲವರಿಗೆ ಇದ್ದೇ ಇರುತ್ತೆ. ಸಾಯುವ ಮುನ್ನ ಕಾಶಿ ವಿಶ್ವನಾಥನ ದರ್ಶನ ಮಾಡಬೇಕು ಎಂಬ ಮಹದಾಸೆ ಅನೇಕರಿಗೆ ಇರುವುದು ಸಹಜ.
ಆದ್ರೆ, ಕಾಶಿ ಯಾತ್ರೆ, ಕೈಲಾಸ ಮಾನಸ ಸರೋವರ ಯಾತ್ರೆ ಎಲ್ಲರಿಗೂ ಸುಲಭವಾಗಿ ಕೈಗೆಟಕುವುದಿಲ್ಲ. ಅದರಲ್ಲೂ ಬಡವರ ಪಾಲಿಗೆ ಈ ತೀರ್ಥ ಕ್ಷೇತ್ರಗಳ ಯಾತ್ರೆ ಗಗನ ಕುಸುಮ.
ಪುರಾಣ ಪುಣ್ಯ ಸ್ಥಳಗಳ ನಮಗೆಲ್ಲಿ ಸಾಧ್ಯ ಅಂತ ಕೈಚೆಲ್ಲಿರುವ ಬಡವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಹಿ ಸುದ್ದಿ ನೀಡಿದ್ದಾರೆ. ಬಡತನ ರೇಖೆಗಿಂತ ಕಡಿಮೆ ಇರುವ ಹಿರಿಯರಿಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡಲು ಹೊಸ ಯೋಜನೆ ರೂಪಿಸಿದ್ದಾರೆ.

'ಜೀವನ ಚೈತ್ರ ಯಾತ್ರೆ'
ನಿನ್ನೆಯಷ್ಟೇ (ಮಾರ್ಚ್ 5) 2020-21ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದರು. ಬರೋಬ್ಬರಿ 2 ಲಕ್ಷದ 37 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ನ ಹಣಕಾಸು ಮಂತ್ರಿ ಕೂಡ ಆಗಿರುವ ಬಿ.ಎಸ್.ಯಡಿಯೂರಪ್ಪ ಮಂಡನೆ ಮಾಡಿದರು. ಅದರಲ್ಲಿ ವಯಸ್ಸಾದ ಬಡವರಿಗೆ 'ಜೀವನ ಚೈತ್ರ ಯಾತ್ರೆ' ಯೋಜನೆಯನ್ನು ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.

ಸಿನಿಮಾದ ಹೆಸರು ನಾಮಕರಣ
'ಜೀವನ ಚೈತ್ರ' ಎಂದ ಕೂಡಲೆ ನಿಮಗೆ ವರನಟ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ನೆನಪಾಗಬಹುದು. ಅದೇ 'ಜೀವನ ಚೈತ್ರ' ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಚಿತ್ರದಲ್ಲಿ ಬದ್ರಿನಾಥ, ರಿಷಿಕೇಶ, ಕೇದಾರನಾಥ, ವಾರಣಾಸಿ ಸೇರಿದಂತೆ ಹಲವು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ ವಯಸ್ಸಾದ ಡಾ.ರಾಜ್ ಕುಮಾರ್. ಬಹುಶಃ ಇದೇ ಕಾರಣಕ್ಕೋ ಏನೋ, ವಯಸ್ಸಾದವರಿಗೆ ತೀರ್ಥ ಕ್ಷೇತ್ರ ದರ್ಶನ ಮಾಡಿಸುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ 'ಜೀವನ ಚೈತ್ರ ಯಾತ್ರೆ' ಅಂತ ನಾಮಕರಣ ಮಾಡಿದೆ.

ಉಚಿತ ತೀರ್ಥ ಕ್ಷೇತ್ರ ದರ್ಶನ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ರೈಲ್ವೇ ಇಲಾಖೆಯ IRCTC ಸಹಯೋಗದೊಂದಿಗೆ, ರಾಜ್ಯದಲ್ಲಿರುವ 60 ವರ್ಷ ಮೀರಿದ ಬಡತನ ರೇಖೆಗಿಂತ ಕೆಳಗಿರುವ ಆಯ್ದ ಫಲಾನುಭವಿಗಳು ಉಚಿತವಾಗಿ ರಾಜ್ಯದ ಹಾಗೂ ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರಗಳನ್ನು ದರ್ಶಿಸಲು ಅನುವಾಗುವಂತೆ 'ಜೀವನ ಚೈತ್ರ ಯಾತ್ರೆ' ಯೋಜನೆ ಜಾರಿಗೊಳಿಸಿದೆ.

20 ಕೋಟಿ ಅನುದಾನ
'ಜೀವನ ಚೈತ್ರ' ಯಾತ್ರೆಗಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ತಮ್ಮ ಬಜೆಟ್ ನಲ್ಲಿ 20 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದೆ. ಈ ಯೋಜನೆಯಲ್ಲಿ ಯಾವ್ಯಾವ ಕ್ಷೇತ್ರಗಳ ದರ್ಶನ ಆಗಲಿದೆ ಎಂಬ ಸ್ಪಷ್ಟನೆ ಸದ್ಯಕ್ಕೆ ಸಿಕ್ಕಿಲ್ಲ. ಆದ್ರೆ, ರಾಜ್ಯದ ಮತ್ತು ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರಗಳು ಅಂತ ಘೋಷಿಸಿರುವುದರಿಂದ ಕೈಲಾಸ ಮಾನಸ ಸರೋವರ, ಕಾಶಿ ವಿಶ್ವನಾಥ, ಕೇದಾರನಾಥ, ಬದ್ರಿನಾಥ, ಧರ್ಮಸ್ಥಳ, ಹೊರನಾಡು, ಶೃಂಗೇರಿ ಸೇರಿದಂತೆ ಹಲವು ಕ್ಷೇತ್ರಗಳು ಸೇರ್ಪಡೆ ಆಗುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications