ಕುಮಾರಸ್ವಾಮಿ ಬಜೆಟ್: ಯಾರಿಗೆ ಸಿಹಿ? ಯಾರಿಗೆ ಕಹಿ?
Recommended Video

ಬೆಂಗಳೂರು, ಫೆಬ್ರವರಿ 08: ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡಿಸಿದ್ದಾರೆ. ಅಭಿವೃದ್ಧಿಯ ಕಾರಣಕ್ಕಿಂತಲೂ ರಾಜಕಾರಣದ ಕಾರಣಕ್ಕೆ ಬಹು ಚರ್ಚಿತವಾಗಿದ್ದ ಬಜೆಟ್ ಇದು.
ಕುಮಾರಸ್ವಾಮಿ ಅವರ ಬಜೆಟ್, ಅನ್ನದಾತರ, ಕೆಳಮಧ್ಯಮವರ್ಗದವರ ಹಾಗೂ ಶ್ರಮಿಕರ ಪಾಲಿಗೆ ಹರ್ಷ ತಂದಿದೆ. ಉಳಿದಂತೆ ಸಂಭ್ರಮ ಪಡಲು ಬಜೆಟ್ನಲ್ಲಿ ಬೇರೆ ಕಾರಣಗಳು ಸಿಗುತ್ತಿಲ್ಲ. ಹಾಗೆಂದು ಕಳಪೆ ಬಜೆಟ್ ಇದೆಂಬ ನಿರ್ಣಯಕ್ಕೂ ಬರುವಂತಿಲ್ಲ.
ಚಿತ್ರಗಳು : ಮೈತ್ರಿ ಸರ್ಕಾರದ 2ನೇ ಬಜೆಟ್ ಮಂಡಿಸಿದ ಕುಮಾರಣ್ಣ
ಕುಮಾರಸ್ವಾಮಿ ಅವರು ಚುನಾವಣಾ ಪೂರ್ವ ಘೋಷಿಸಿದ್ದ ರೈತ ಸಾಲಮನ್ನಾಕ್ಕಾಗಿ ಬಜೆಟ್ನಲ್ಲಿ ದೊಡ್ಡ ಮೊತ್ತವನ್ನು ಮೀಸಲಡಿಲಾಗಿದೆ. ಸಹಕಾರಿ ಮತ್ತು ಖಾಸಗಿ ಬ್ಯಾಂಕಿನ ಕೃಷಿ ಸಾಲಮನ್ನಾಕ್ಕಾಗಿ ಈ ಆರ್ಥಿಕ ವರ್ಷದಲ್ಲಿ 12650 ಕೋಟಿಯನ್ನು ಕುಮಾರಸ್ವಾಮಿ ಕೊಟ್ಟಿದ್ದಾರೆ. ರೈತ ಉಪಕಸುಬಾದ ಪಶುಸಂಗೋಪನೆಗೆ ಸಿಎಂ ಭಾರಿ ಉಡುಗೊರೆ ನೀಡಿದ್ದು, ಹಾಲಿನ ಪ್ರೋತ್ಸಾಹ ಧನವನ್ನು 5 ರಿಂದ 6 ರೂಪಾಯಿಗೆ (ಲೀಟರ್ಗೆ) ಏರಿಸಿದ್ದಾರೆ.
ಬಹು ಸಮಯದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಬಡ ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತವಾಗಿ ಸಾಲ ನೀಡುವ ಶ್ಲಾಘನೀಯ ಯೋಜನೆಯನ್ನು ಕುಮಾರಸ್ವಾಮಿ ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ. ಆಟೋ ಹಾಗೂ ಕ್ಯಾಬ್ ಚಾಲಕರಿಗಾಗಿ ವಸತಿ ನಿರ್ಮಾಣ ಹಾಗೂ ಗುಂಪು ವಿಮೆ ಸೌಲಭ್ಯಗಳನ್ನು ಸಹ ಸಿಎಂ ಘೋಷಿಸಿದ್ದು, ನಿರ್ಲಕ್ಷಿತ ವರ್ಗವನ್ನು ಸಿಎಂ ಯೋಜನೆಯಡಿ ತಂದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ
ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಕುಮಾರಸ್ವಾಮಿ ಅವರು ಮಣಿದಿದ್ದು 500 ರೂಪಾಯಿ ಸಹಾಯಧನ ಹೆಚ್ಚಿಸಿದ್ದಾರೆ. ವೃದ್ಧಾಪ್ಯ ವೇತನವನ್ನು ಸಹ 500 ಹೆಚ್ಚಳ ಮಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅನುದಾನ ಹೆಚ್ಚಿಸಿದ್ದಾರೆ. ಗರ್ಭಿಣಿಯರ ಮಾಸಾಶನ 1000 ರೂ. ಹೆಚ್ಚಿಸಿದ್ದಾರೆ.

ಕೃಷಿ ಗೆ ಮೊದಲ ಆದ್ಯತೆ
ಕುಮಾರಸ್ವಾಮಿ ಅವರ ಬಜೆಟ್ನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿ ಇಲಾಖೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಇಸ್ರೇಲ್ ಕೃಷಿಗೆ ಪ್ರೋತ್ಸಾಹ, ರೈತ ಸಿರಿ ಯೋಜನೆ, ರೈತ ಕಣಜ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ. ಭತ್ತ ಬೆಳೆಯುವ ರೈತರಿಗೆ 'ಕರಾವಳಿ ಪ್ಯಾಕೇಜ್', ಹನಿ ನೀರಾವರಿಗೆ 368 ಕೋಟಿ ಅನುದಾನ ಮೀಸಲಿಡಲಾಗಿದೆ.

ನೀರಾವರಿಗೆ 17212 ಕೋಟಿ ಅನುದಾನ
ಬಜೆಟ್ನಲ್ಲಿ ನೀರಾವರಿಗೆ ಎರಡನೇ ಅತಿಹೆಚ್ಚು ಮೊತ್ತದ ಅನುದಾನವನ್ನು ನೀಡಲಾಗಿದೆ. 17,212 ಕೋಟಿ ಅನುದಾನ ನೀಡಲಾಗಿದೆ. ಆದರೆ ನೀರಾವರಿಗೆ ಈ ಬಾರಿ ಅನುದಾನ ಕಡಿಮೆ ಆಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಸಿದ್ದರಾಮಯ್ಯ ಅವಧಿಯಲ್ಲಿ ನೀರಾವರಿಗೆ ಇನ್ನೂ ಹೆಚ್ಚಿನ ಅನುದಾನ ಮೀಸಲಿಡಲಾಗಿತ್ತು.

ಹೊಸ ತೆರಿಗೆ ಹೇರಿಲ್ಲ
ಕುಮಾರಸ್ವಾಮಿ ಅವರು ಯಾವುದೇ ಹೊಸ ತೆರಿಗೆಗಳನ್ನು ಜನರ ಮೇಲೆ ಹೇರದಿರುವುದು ಸಮಾಧಾನಕರ, ಬಿಯರ್ ಮೇಲಿನ ಅಬಕಾರಿ ಸುಂಕ ಏರಿಸಿರುವುದರ ಹೊರತಾಗಿ ಇನ್ನಾವುದೇ ಏರಿಕೆಗಳು ಬಜೆಟ್ನಲ್ಲಿ ಇಲ್ಲ. ಅಬಕಾರಿ ಇಲಾಖೆ ಸೇರಿದಂತೆ ನೊಂದಣಿ ಮುದ್ರಾಂಕ ಇಲಾಖೆಗೆ ಹೆಚ್ಚಿನ ರಾಜಸ್ವ ಸಂಗ್ರಹ ಮಾಡುವ ಗುರಿ ನಿಗದಿಗೊಳಿಸಿದ್ದಾರೆ ಸಿಎಂ.

ತಪ್ಪನ್ನು ಪುನರಾವರ್ತಿಸಿಲ್ಲ ಎಚ್ಡಿಕೆ
ಕಳೆದ ಬಾರಿ ಬಜೆಟ್ ಮಂಡಿಸಿದಾಗ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು, ಆದರೆ ಈ ಬಾರಿಯ ಬಜೆಟ್ನಲ್ಲಿ ಸಿಎಂ ಅವರು ಕಳೆದ ಬಾರಿಯ ತಪ್ಪನ್ನು ಪುನರಾವರ್ತಿಸಿಲ್ಲ. ಮೀನುಗಾರರಿಗೆ, ಹಾಗೂ ಕರಾವಳಿ ಭಾಗದ ರೈತರಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಾಲೇಜು, ಆಸ್ಪತ್ರೆ ಸ್ಥಾಪನೆಗೆ ಅನುದಾನ ನೀಡಿದ್ದಾರೆ. ಹೈದರಾಬಾದ್-ಕರ್ನಾಟಕ ಭಾಗದಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ.

ಇಲಾಖೆಗೆ ಅನುದಾನ ವಿತರಣೆ
ಶಿಕ್ಷಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ, ಕನ್ನಡ ಮತ್ತು ಸಂಸ್ಕೃತಿ, ಮನೊರಂಜನೆ, ಬೆಂಗಳೂರು ಅಭಿವೃದ್ಧಿ, ಮೆಟ್ರೋ ಯೋಜನೆ, ನಗರಾಭಿವೃದ್ಧಿ, ಮೀನುಗಾರಿಕೆ, ಆರೋಗ್ಯ ಇನ್ನೂ ಹತ್ತು ಹಲವು ಇಲಾಖೆಗಳಿಗೆ ಬಜೆಟ್ನಲ್ಲಿ ಮಾಮೂಲಿನಂತೆ ಹಣ ಹಂಚಿಕೆ ಮಾಡಲಾಗಿದೆ.

ವಿತ್ತಿಯ ಕೊರತೆ ಏರದಂತೆ ನಿಗಾ
ಒಟ್ಟಾರೆಯಾಗಿ ಕುಮಾರಸ್ವಾಮಿ ಅವರ ಬಜೆಟ್ ಅನ್ನು ಗಮನಿಸಿದಲ್ಲಿ ರೈತರು, ಬಡವರು, ಶ್ರಮಿಕ ವರ್ಗಕ್ಕೆ ಕುಮಾರಸ್ವಾಮಿ ಅವರು ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು ಕಾಣುತ್ತದೆ. ಅತಿಯಾದ ಜನಪ್ರಿಯ ಬಜೆಟ್ ಅನ್ನು ಮಂಡಿಸದೆ ವಿತ್ತಿಯ ಕೊರತೆ ಹೆಚ್ಚಾಗದಂತೆಯೂ ನೋಡಿಕೊಳ್ಳುವಲ್ಲಿ ಸಿಎಂ ಗಮನಹರಿಸಿದ್ದಾರೆ.












Click it and Unblock the Notifications