ಸದನದಲ್ಲಿ ಮುಂದುವರಿದ ಬಿಜೆಪಿ ಗದ್ದಲ, ಕಲಾಪ ಮುಂದೂಡಿಕೆ

ಬೆಂಗಳೂರು, ಫೆಬ್ರವರಿ 7: ಬಜೆಟ್ ಅಧಿವೇಶನದ ಎರಡನೆಯ ದಿನವೂ ಬಿಜೆಪಿ ಶಾಸಕರ ಪ್ರತಿಭಟನೆ, ಗದ್ದಲಕ್ಕೆ ಬಲಿಯಾಗಿದೆ.

ಬಿಜೆಪಿ ಶಾಸಕರು ಸದನದ ಬಾವಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಗದ್ದಲವನ್ನು ಕೆಲಹೊತ್ತು ವೀಕ್ಷಿಸಿದ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್, ಸದನವನ್ನು ಶುಕ್ರವಾರ ಮಧ್ಯಾಹ್ನ 12.30ಕ್ಕೆ ಮುಂದೂಡಿದರು.

ಬಜೆಟ್ ಅಧಿವೇಶನದ ಮೊದಲ ದಿನವೂ ಬಿಜೆಪಿ ಶಾಸಕರು ಗದ್ದಲ ನಡೆಸಿದ್ದರು. ವಾಡಿಕೆಯಂತೆ ನಡೆಯುವ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಇದರಿಂದ 22 ಪುಟಗಳ ಭಾಷಣದಲ್ಲಿ ಕೇವಲ 2 ಪುಟಗಳನ್ನು ಓದಿದ್ದ ರಾಜ್ಯಪಾಲರು ಭಾಷಣವನ್ನು ಮೊಟಕುಗೊಳಿಸಿ ಸದನದಿಂದ ತೆರಳಿದ್ದರು. ನಂತರವೂ ಬಿಜೆಪಿ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.

ಆದರೆ, ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಪುನಃ ಸದನದ ಬಾವಿಗಿಳಿದು ಪ್ರತಿಭಟನೆ ಶುರುಮಾಡಿದರು. 'ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ' ಎಂದು ಘೋಷಣೆಗಳನ್ನು ಕೂಗಿದರು.

ಬಾವಿಯಲ್ಲಿ ನೀರಿಲ್ಲ, ಅಲ್ಲಿ ಯಾಕೆ ನಿಂತಿದ್ದೀರಿ?

ಬಾವಿಯಲ್ಲಿ ನೀರಿಲ್ಲ, ಅಲ್ಲಿ ಯಾಕೆ ನಿಂತಿದ್ದೀರಿ?

ಆಗ ಸ್ಪೀಕರ್ ರಮೇಶ್ ಕುಮಾರ್, 'ಬಾವಿಯಲ್ಲಿ ನೀರಿಲ್ಲ ಎಂದು ಅಲ್ಲಿ ನಿಂತಿದ್ದೀರಾ?' ಎಂದು ಕೆಣಕಿದರು.

ಈ ನಡುವೆಯೇ ಸಚಿವ ಕೃಷ್ಣ ಬೈರೇಗೌಡ ಕಾಗದಪತ್ರಗಳ ಮಂಡಿಸಲು ಮುಂದಾದರು. 'ಬಾವಿಯಲ್ಲಿ ನೀರಿಲ್ಲ. ಇಲ್ಲಿ ಬಿದ್ದು ಒದ್ದಾಡಬೇಡಿ. ಮೊದಲು ನಿಮ್ಮ ಸೀಟುಗಳಲ್ಲಿ ಕುಳಿತುಕೊಳ್ಳಿ. ಸರ್ಕಾರಕ್ಕೆ ಬಹುಮತ ಇಲ್ಲ ಎಂದಾದರೆ ಅವಿಶ್ವಾಸ ನಿರ್ಣಯ ಮಾಡಿ' ಎಂದು ಅವರು ತರಾಟೆಗೆ ತೆಗೆದುಕೊಂಡರು.

ಗದ್ದಲದ ನಡುವೆಯೇ ರಮೇಶ್ ಕುಮಾರ್ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಅವಕಾಶ ನೀಡಿದರು. ಶಾಸಕ ಎಸ್‌.ಟಿ. ಸೋಮಶೇಖರ್ ಚರ್ಚೆಗೆ ಮುಂದಾದರು. ಆದರೆ, ಬಿಜೆಪಿ ಶಾಸಕರ ಕೂಗಾಟ ತೀವ್ರಗೊಂಡಿತು. ಸಿಎಂ ಅಧಿಕಾರದಿಂದ ಕೆಳಕ್ಕಿಳಿಯಿರಿ ಎಂದು ಘೋಷಣೆ ಕೂಗಿದರು. ಇದರಿಂದ ಕಲಾಪವನ್ನು ಹದಿನೈದು ನಿಮಿಷ ಮುಂದೂಡಲಾಯಿತು.

ಬಹುಮತವೇ ಇಲ್ಲ: ಯಡಿಯೂರಪ್ಪ

ಬಹುಮತವೇ ಇಲ್ಲ: ಯಡಿಯೂರಪ್ಪ

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ. ಈ ಕಾರಣಕ್ಕಾಗಿ ಕಲಾಪಕ್ಕೆ ಸಹಕಾರ ನೀಡುತ್ತಿಲ್ಲ. ಬಹುಮತ ಇಲ್ಲದೆಯೇ ಬಜೆಟ್ ಹೇಗೆ ಮಂಡಿಸುತ್ತಾರೆ? ಹೀಗಾಗಿ ಧರಣಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಬಜೆಟ್ ಓದಿದ ಬಳಿಕವೇ ಅದರ ಕಾಪಿ ನೀಡುವುದಾಗಿ ಸರ್ಕಾರ ಹೇಳಿದೆ. ಸಂಸತ್‌ನಲ್ಲಿ ಈ ರೀತಿಯ ಸಂಪ್ರದಾಯ ಇದೆ ಎಂದು ಹೇಳುತ್ತಿದೆ. ಮುಖ್ಯಮಂತ್ರಿ ಬಜೆಟ್ ಓದಿದ ಬಳಿಕ ಶಾಸಕರು ಮತ್ತು ಮಾಧ್ಯಮದವರಿಗೆ ಕಾಪಿ ನೀಡಲು ನಿರ್ಧರಿಸಲಾಗಿದೆ. ಈ ಸಂಪ್ರದಾಯ ನಮ್ಮಲ್ಲಿ ಇಲ್ಲ ಎಂದು ಹೇಳಿದರು.

ಕಲಾಪ ನಾಳೆಗೆ ಮುಂದೂಡಿಕೆ

ಇದಾದ ಬಳಿಕ ಸದನ ಮತ್ತೆ ಸೇರಿದಾಗ ಬಿಜೆಪಿ ಶಾಸಕರು ಪುನಃ ಬಾವಿಗಿಳಿದರು. ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು. ಬಿಜೆಪಿಗೆ ಧಿಕ್ಕಾರ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಈ ಗದ್ದಲವನ್ನು ಮೌನವಾಗಿ ವೀಕ್ಷಿಸಿದ ಸ್ಪೀಕರ್ ರಮೇಶ್ ಕುಮಾರ್, ಸದನವನ್ನು ಗುರುವಾರ ಮಧ್ಯಾಹ್ನ 12.30ಕ್ಕೆ ಮುಂದೂಡಿದರು.

ಪರಿಷತ್‌ನಲ್ಲಿಯೂ ಗದ್ದಲ

ವಿಧಾನಪರಿಷತ್‌ನಲ್ಲಿಯೂ ಬಿಜೆಪಿ ಸದಸ್ಯರು ಕಲಾಪಕ್ಕೆ ಅಡ್ಡಿಪಡಿಸಿದರು. ಸದನ ಆರಂಭವಾಗುತ್ತಿದ್ದಂತೆಯೇ ಕೋಟಾ ಶ್ರೀನಿವಾಸ ಪೂಜಾರಿ ರಾಜ್ಯಪಾಲರ ಭಾಷಣದಲ್ಲಿ ಸಂಪೂರ್ಣ ಸುಳ್ಳು ಹೇಳಿಸಲಾಗಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ. ಶಾಸಕರೇ ಸರಿಯಾಗಿ ಸದನಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಇದಕ್ಕೆ ಆಡಳಿತ ಪಕ್ಷದ ಆಕ್ಷೇಪ ವ್ಯಕ್ತಪಡಿಸಿದರು. ಗದ್ದಲ ಹೆಚ್ಚಿದ್ದರಿಂದ ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಲಾಯಿತು. ಆಗಲೂ ಬಿಜೆಪಿ ಸದಸ್ಯರು ಪ್ರತಿಭಟನೆ ಆರಂಭಿಸಿದಾಗ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಪುನಃ ಮುಂದೂಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+