ಕನ್ನಡ ಪತ್ರಿಕೆಗಳಲ್ಲಿ ಕರ್ನಾಟಕ ಬಜೆಟ್ ಮತ್ತು ಕಾವೇರಿ ತೀರ್ಪು
Recommended Video
ಬೆಂಗಳೂರು, ಫೆಬ್ರವರಿ 17: ಕನ್ನಡದ ಸುದ್ದಿಮನೆಗೆ ನಿನ್ನೆ(ಫೆ.17) ಬ್ಯುಸಿ ದಿನ. ಒಂದೆಡೆ ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ತೀರ್ಪು, ಇನ್ನೊಂದೆಡೆ ರಾಜ್ಯ ಬಜೆಟ್.
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2007 ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ್ದ ತೀರ್ಪನ್ನು ವಿರೋಧಿಸಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿನ್ನೆ ತೀರ್ಪು ನೀಡಿತ್ತು. ಈ ತೀರ್ಪಿನನ್ವಯ ಕರ್ನಾಟಕ ತಮಿಳುನಾಡಿಗೆ ನೀಡುತ್ತಿದ್ದ 192 ಟಿಎಂಸಿ ಅಡಿ ನೀರಿಗೆ ಬದಲಾಗಿ 177.25 ಟಿಎಂಸಿ ಅಡಿ ನೀರನ್ನಷ್ಟೇ ನೀಡಲು ಆದೇಶಿಸಿತು. ಇದರಿಂದಾಗಿ ಕರ್ನಾಟಕದ ಬಳಿ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ಉಳಿದಂತಾಗುತ್ತದೆ.
ಹಿಂದುಳಿದವರು, ದಲಿತರಿಗೆ ಬಜೆಟ್ ನಲ್ಲಿ ಸಿದ್ದರಾಮಯ್ಯ ಭರ್ಜರಿ ಕೊಡುಗೆ
ಇದರೊಂದಿಗೆ ನಿನ್ನೆ ಕಾಂಗ್ರೆಸ್ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು. ದಾಖಲೆಯ 13 ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಹಲವು ಜನಪರ ಯೋಜನೆಗಳನ್ನು ಘೋಷಿಸಿಸದರು. ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯೂ ಇರುವುದರಿಂದ ಈ ಬಜೆಟ್ ಬಹಳ ಮಹತ್ವದ್ದೆನ್ನಿಸಿತು.
ಸಿದ್ರಾಮಣ್ಣ ಯಾರಿಗೆ ಏನು ಕೊಟ್ಟರು ಅನ್ನೋದರ ಪೈಸಾಪೈಸಾ ಲೆಕ್ಕ!
ಈ ಎರಡೂ ಮಹತ್ವದ ಸುದ್ದಿಯನ್ನು ಕನ್ನಡದ ಸುದ್ದಿ ಪತ್ರಿಕೆಗಳು ಹೇಗೆ ಪ್ರಕಟಿಸಿವೆ? ಯಾವುದಕ್ಕೆಷ್ಟು ಮಹತ್ವ ನೀಡಿವೆ? ಯಾವ ಪತ್ರಿಕೆ ನೀಡಿd ಶೀರ್ಷಿಕೆ ಚೆನ್ನಾಗಿದೆ? ಎಂಬೆಲ್ಲ ಮಾಹಿತಿ ನಿಮಗಾಗಿ ಇಲ್ಲಿದೆ.
ಕಾವೇರಿದ ಕರುನಾಡ ಸಂಭ್ರಮ
ಸಮಬಾಳು-ಸಮಪಾಲು, ಚುನಾವಣೆಗೆ ಫೈವ್ ಸ್ಟಾರ್ ಬಜೆಟ್ ಕೊಟ್ಟ ಸಿದ್ದರಾಮಯ್ಯ, ಕನ್ನಡಿಗರಿಗೊಲಿದ ಕಾವೇರಿ, ಶತಮಾನದ ಗೆಲುವು, ರಾಜ್ಯದ ಪಾಲು 14.75 ಟಿಎಂಸಿ ಹೆಚ್ಚಳ ಎಂದು ನಿನ್ನೆಯ ಸುದ್ದಿ ಹೂರಣವನ್ನು ಎರಡೇ ಸಾಲಿನಲ್ಲಿ ವಿವರಿಸಿರುವ ವಿಜಯವಾಣಿ ಪತ್ರಿಕೆ ಕಾವೇರಿದ ಕರುನಾಡ ಸಂಭ್ರಮ ಎಂಬ ಶೀರ್ಷಿಕೆ ನೀಡಿದೆ.
ಜನಪರ ನಿಲುವು ಕಾವೇರಿ ಗೆಲುವು
ಭರವಸೆಗಳ ವರ್ಷ: ಸರ್ವರಿಗೂ ಹರ್ಷ. ಕರ್ನಾಟಕಕ್ಕೆ ಐತಿಹಾಸಿಕ ನ್ಯಾಯದ ಹರ್ಷ ಎಂಬ ಕಿನ್ನರ್ ನೊಂದಿಗೆ 'ಜನಪರ ನಿಲುವು ಕಾವೇರಿ ಗೆಲುವು' ಎಂಬ ಶೀರ್ಷಿಕೆ ನೀಡಿದೆ ವಿಜಯ ಕರ್ನಾಟಕ.
ಎಷ್ಟು ತಿಂಗಳ ಬಜೆಟ್ ಭಾಗ್ಯ? 15 ವರ್ಷಗಳ ಕಾವೇರಿ ಸೌಭಾಗ್ಯ
ಮುಖಪುಟದ ಮುಕ್ಕಾಲು ಪುಟವನ್ನು ಬಜೆಟ್ ಮತ್ತು ಕಾವೇರಿಗಾಗಿ ಈಸಲಿಟ್ಟಿರುವ ಕನ್ನಡ ಪ್ರಭದ ಮುಖಪುಟದ ಕಾರ್ಟೂನ್ ಸುಂದರವಾಗಿದೆ. ಎಷ್ಟು ತಿಂಗಳ ಬಜೆಟ್ ಭಾಗ್ಯ? 15 ವರ್ಷಗಳ ಕಾವೇರಿ ಸೌಭಾಗ್ಯ ಎಂಬ ಅರ್ಥಪೂರ್ಣ ಹೆಡ್ ಲೈನ್ ಗಮನ ಸೆಳೆಯುತ್ತದೆ.
ನಕ್ಕಾಳಾ ಕಾವೇರಿ, ಸಕಲ ಇಷ್ಟಾರ್ಥ ಸಿದ್ದು ರಸ್ತು
ನಕ್ಕಳಾ ಕಾವೇರಿ ಎಂದು ಕಾವೇರಿ ತಾಯಿಗೆ ಮುಖಪುಟದ ಹೆಡರ್ ನಲ್ಲಿ ಜಾಗ ನೀಡಿರುವ ಉದಯವಾಣಿ ಇಂದು ನಡೆಯಲಿರುವ ಅದ್ಧೂರಿ ಮಹಾಮಜ್ಜನಕ್ಕೂ ಅಷ್ಟೇ ಮಹತ್ವ ನೀಡಿದೆ. ಸಿದ್ದರಾಮಯ್ಯ ಬಜೆಟ್ ಗೆ ಸಕಲ ಇಷ್ಟಾರ್ಥ ಸಿದ್ದು ರಸ್ತು ಎಂಬ ಶೀರ್ಷಿಕೆ ನೀಡಿ ಗಮನ ಸೆಳೆದಿದೆ.
ರಾಜ್ಯಕ್ಕೆ ಶುಕ್ರದೆಸೆ
ತಂಪೆರೆದ ಕಾವೇರಿ, ಭಾಗ್ಯಗಳಿಲ್ಲದ ಬಜೆಟ್ ಎಂದು ಎರಡು ಪ್ರಮುಖ ಸುದ್ದಿಗಳನ್ನು ವಿವರಿಸಿರುವ ಹೊಸ ದಿಗಂತ, ರಾಜ್ಯಕ್ಕೆ ಶುಕ್ರದೆಸೆ ಎಂಬ ಶೀರ್ಷಿಕೆ ನೀಡಿದೆ. ಮುಖಪುಟ ವಿನ್ಯಾಸ ಸುಂದರವಾಗಿ ಮೂಡಿಬಂದಿದೆ.
ಶರಣು ಕಾವೇರಿ ತಾಯಿಯೇ, ಮತಾಧೀಶರಿಗೆ ಸಾಷ್ಟಾಂಗ
ಜೈ ಹಿಂದ, ಜೈ ಕಿಸಾನ್, ಜೈ ಕಲ್ಯಾಣ ಎಂದು ಕರ್ನಾಟಕ ಬಜೆಟ್ ಅನ್ನು ವಿವರಿಸಿರುವ ಸಂಯುಕ್ತ ಕರ್ನಾಟಕ, ಶರಣು ಕಾವೇರಿ ತಾಯಿಯೇ ಎಂದು ಶತಮಾನದ ಹಿಗ್ಗನ್ನು ವಿವರಿಸಿದೆ! ಮತಾಧೀಶರಿಗೆ ಸಾಷ್ಟಾಂಗ ಎಂದು ಬಜೆಟ್ ಅನ್ನು ವಿಶ್ಲೇಷಿಸಿದ್ದು ಗಮನ ಸೆಳೆಯುತ್ತದೆ.
ಮತಯಾತ್ರೆಗೆ ಸಿದ್ಧ!
"ಕಾವೇರಿ ಸಮಾಧಾನ ತಂದ ಸುಪ್ರೀಂ ತೀರ್ಪು, ಮತಯಾತ್ರೆಗೆ ಸಿದ್ಧ" ಎಂದು ಎಂದಿನಂತೆಯೇ ಸರಳ ಶೀರ್ಷಿಕೆ, ವಿನ್ಯಾಸದಿಂದ ಗಮನಸೆಳೆಯುತ್ತದೆ ಪ್ರಜಾವಾಣಿ.
ಸರ್ವಜನಪರ ಬಜೆಟ್
ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು, ಮಧ್ಯಮ ವರ್ಗದವರಿಗೆ ಆದ್ಯತೆ ಎಂಬ ಕಿಕ್ಕರ್ ನೀಡಿ 'ಸರ್ವಜನಪರ ಬಜೆಟ್ ' ಎಂಬ ಶೀರ್ಷಿಕೆ ಎನೀಡಿದೆ ವಾರ್ತಾಭಾರತಿ. ಕಾವೇರಿ ತೀರ್ಪಿಗಿಂತ ಹೆಚ್ಚು ಮಹತ್ವವನ್ನು ವಾರ್ತಾಭಾರತಿ ರಾಜ್ಯ ಬಜೆಟ್ ಗೇ ನೀಡಿದೆ.
ಬೆಳಗೊಳದಲ್ಲಿ ಮಜ್ಜನ, ಕರುನಾಡಿಗೆ ಸುದಿನ
ಬೆಳಗೊಳದಲ್ಲಿ ಮಜ್ಜನ, ಕರುನಾಡಿಗೆ ಸುದಿನ ಎಂದು ಮುಖಪುಟದಲ್ಲಿ ಕಾವೇರಿ ಮತ್ತು ಮಹಾಮಸ್ತಕಾಭಿಷೇಕದ ಸುದ್ದಿಯನ್ನು ನೀಡಿದೆ ವಿಶ್ವವಾಣಿ. 'ಸರ್ವಸ್ಪರ್ಶಿ ಸಿದ್ದು ಬಜೆಟ್' ಎಂದು ಒಂಬತ್ತನೆಯ ಪುಟದಿಂದ ನಾಲ್ಕು ಪುಟವನ್ನು ಬಜೆಟ್ ಗಾಗಿ ಮೀಸಲಿರಿಸಿದೆ ವಿಶ್ವವಾಣಿ.