Karnataka Elections: ಪ್ರಧಾನಿ ಮೋದಿ ಬ್ಯಾನರ್ ಕಿತ್ತೆಸೆದ ಬಿಜೆಪಿ ಕಾರ್ಯಕರ್ತರು: ಕಾಲಚಕ್ರ ತಿರುಗುತ್ತದೆ ಎಂದ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 13: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Elections 2023 ) ಬಿಜೆಪಿ 212 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕನಿಷ್ಠ 60 ಕ್ಕೂ ಹೆಚ್ಚು ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಂಡಾಯದ ಬೆಂಕಿ ದಗದಗಿಸುತ್ತಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಮೋದಿ ಬ್ಯಾನರ್ ಹಾಕಿದವರೇ ಮೋದಿಯನ್ನು ಕಿತ್ತೆಸೆಯುತ್ತಿದ್ದಾರೆ. ಇದಲ್ಲವೇ ಅಚ್ಛೆ ದಿನ್, ಇದಲ್ಲವೇ ಅಮೃತಕಾಲ್ ಬಿಜೆಪಿ? ಮೋದಿ ಮುಖ ನೋಡಿ ಮತ ಕೊಡಿ ಎನ್ನುವ ಕಾಲ ಹೋಗಿದೆ, ಬಿಜೆಪಿ ಕಾರ್ಯಕರ್ತರಿಗೆ ಈಗ ಮೋದಿಯೇ ಅಪಥ್ಯ. ಕಾಲಚಕ್ರ ತಿರುಗುತ್ತದೆ, ತಲೆ ಮೇಲೆ ಬಿದ್ದ ನೀರು ಕಾಲಬುಡಕ್ಕೆ ಬರಲೇಬೇಕು' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

'ಬಿಜೆಪಿಯಲ್ಲಿ ಈಗ ಅಭ್ಯರ್ಥಿಗಳ ಪಟ್ಟಿಗಿಂತ ಬಂಡಾಯ ಎದ್ದವರ ಪಟ್ಟಿಯೇ ಬಹು ದೊಡ್ಡದಿದೆ. ಮೋದಿ ಮುಖ ತೋರಿಸಿ ಮತ ಕೊಡಿ ಎನ್ನುತ್ತಿದ್ದವರೇ ಈಗ ಮೋದಿ ಮುಖವನ್ನು ಕಿತ್ತೆಸೆಯುತ್ತಿದ್ದಾರೆ. ಏಕಚಕ್ರಾಧಿಪತ್ಯ, ಸರ್ವಾಧಿಕಾರಗಳು ಗುಜರಾತಿನಲ್ಲಿ ನಡೆದಿದೆ ಎಂದ ಮಾತ್ರಕ್ಕೆ ಕರ್ನಾಟಕದಲ್ಲೂ ನಡೆಯುತ್ತದೆ ಎಂದುಕೊಂಡಿದ್ದು ಮೂರ್ಖತನ' ಎಂದು ಕೆಪಿಸಿಸಿ ವಾಗ್ದಾಳಿ ನಡೆಸಿದೆ.
'ಹಾಲಿ ಶಾಸಕರರಿಗೆ ಟಿಕೆಟ್ ನೀಡದೆ ಕೈಬಿಟ್ಟಿರುವ ಬಿಜೆಪಿ ಅದಕ್ಕೆ ಯಾವ ಕಾರಣ ನೀಡುತ್ತದೆ. ಟಿಕೆಟ್ ನೀಡದಿರುವುದಕ್ಕೆ ಅಸಾಮರ್ಥ್ಯವೇ ಕಾರಣವಾದರೆ ಮೊದಲನೆಯದಾಗಿ ಸಿಎಂ ಬೊಮ್ಮಾಯಿಯವರನ್ನೇ ಕೈಬಿಡಬೇಕಿತ್ತು. ಜೊತೆಗೆ ಸಾಲು ಸಾಲು ಅಸಮರ್ಥ ಸಚಿವರಿದ್ದಾರೆ. ಅವರೆಲ್ಲರನ್ನೂ ಕೈಬಿಡಬೇಕಿತ್ತು. ಟಿಕೆಟ್ ವಂಚನೆಗೆ ಕಾರಣವೇನು' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಬಿಬಿಎಂಪಿ ಹಗರಣದ ಮಾಜಿ ಅಧಿಕಾರಿ ಅನಿಲ್ ಕುಮಾರ್ಗೆ ಕೊರಟಗೆರೆ ಟಿಕೆಟ್. ಐಎಂಎ ಹಗರಣದಲ್ಲಿ ಜೈಲು ಸೇರಿದ್ದ ಮಾಜಿ ಅಧಿಕಾರಿ ಎಲ್ ಸಿ ನಾಗರಾಜುಗೆ ಮಧುಗಿರಿ ಟಿಕೆಟ್. ಭ್ರಷ್ಟಾಚಾರಕ್ಕೆ ಸಹಕರಿಸುವ ಇಂದಿನ ಭ್ರಷ್ಟ ಅಧಿಕಾರಿಗಳೇ ಮುಂದಿನ ಬಿಜೆಪಿ ಅಭ್ಯರ್ಥಿಗಳು. ರೌಡಿಗಳನ್ನು, ಭ್ರಷ್ಟರನ್ನು ಕಂಡರೆ ಬಿಜೆಪಿಗೆ ಅದೆಷ್ಟು ಮಮಕಾರ' ಎಂದು ಆರೋಪಿಸಿದೆ.
'ಬಿಜೆಪಿಯವರ ಭ್ರಷ್ಟಾಚಾರ ಬಿಜೆಪಿಯವರಿಗಿಂತ ಬೇರೆ ಯಾರಿಗೆ ಚೆನ್ನಾಗಿ ತಿಳಿದಿರಲು ಸಾಧ್ಯ. ಬಿಜೆಪಿ ಶಾಸಕ ನೆಹರೂ ಒಲೆಕಾರ್ ಸಿಎಂ ವಿರುದ್ಧ ಹನಿ ನೀರಾವರಿಯಲ್ಲಿ ₹1,500 ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. #BJPvsBJP ಜಗಳದಲ್ಲಿ #40Percentsarkara ದ ರಹಸ್ಯಗಳು ಹೊರಬರುತ್ತಿವೆ. ಬಸವರಾಜ ಬೊಮ್ಮಾಯಿ ತನಿಖೆಗೆ ಒಡ್ಡಿಕೊಳ್ಳುವರೇ?' ಎಂದು ಕೆಪಿಸಿಸಿ ಪ್ರಶ್ನಿಸಿದ್ದಾರೆ.
'ಟಿಕೆಟ್ ಘೋಷಣೆಯ ವೇದಿಕೆಯಲ್ಲಿ ಕರ್ನಾಟಕದ ರಾಜ್ಯಾಧ್ಯಕ್ಷ ಇಲ್ಲ, ಕರ್ನಾಟಕದ ಪ್ರಚಾರ ಸಮಿತಿಯ ಅಧ್ಯಕ್ಷ ಕಂ ಸಿಎಂ ಇಲ್ಲ, ಕರ್ನಾಟಕದ ಯಾವೊಬ್ಬ ನಾಯಕರೂ ಇಲ್ಲ. ದೆಹಲಿಯ ವೇದಿಕೆಯಲ್ಲಿ ಕೂರಲು ಕರ್ನಾಟಕದ ಬಿಜೆಪಿ ನಾಯಕರಿಗೆ ಯೋಗ್ಯತೆ ಇರಲಿಲ್ಲವೇ. ಮೊ-ಶಾ ಜೋಡಿಯ "ಗುಲಾಮಗಿರಿ" ಒಗ್ಗಿ ನಡುಬಗ್ಗಿಸಿ ನಿಲ್ಲುವವರು ಬಿಜೆಪಿ ನಾಯಕರೇ ಅಲ್ಲವೇ?' ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಯ ಇಬ್ಬರು ಎಂಎಲ್ಸಿಗಳು ಪಕ್ಷವನ್ನು ತೊರೆದಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಎಂಎಲ್ಸಿ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಅವರಿಗೆ ಬೆಳಗಾವಿ ಜಿಲ್ಲೆಯ ಅಥಣಿಯಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ನಿನ್ನ ತಡರಾತ್ರಿ ಬಿಡುಗಡೆಯಾದ 23 ಸ್ಥಾನಗಳ 2ನೇ ಪಟ್ಟಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಏಳು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ಶುಕ್ರವಾರ ಉಳಿದ 12 ಸ್ಥಾನಗಳಿಗೆ ಹೆಸರುಗಳನ್ನು ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications