ಆಗಸ್ಟ್ ನಲ್ಲಿ ಕರ್ನಾಟಕಕ್ಕೆ ಅಮಿತ್ ಶಾ
ಬೆಂಗಳೂರು, ಜು. 14 : ಕರ್ನಾಟಕ ಬಿಜೆಪಿ ಘಟಕ ಪಕ್ಷದ ಕಾರ್ಯಕಾರಣಿ ಸಭೆಗೆ ನೂತನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಆಹ್ವಾನಿಸಲು ತೀರ್ಮಾನಿಸಿದೆ. ಆಗಸ್ಟ್ ತಿಂಗಳಿನಲ್ಲಿ ಈ ಸಭೆ ನಡೆಯಲಿದ್ದು, ಸ್ಥಳ ಮತ್ತು ದಿನಾಂಕ ನಿಗದಿಯಾಗಬೇಕಾಗಿದೆ.
ಜು.12 ಮತ್ತು 13ರಂದು ರಾಜ್ಯ ಕಾರ್ಯಕಾರಣಿ ಸಭೆಯನ್ನು ಮೈಸೂರಿನಲ್ಲಿ ನಡೆಸಲು ಬಿಜೆಪಿ ಘಟಕ ತೀರ್ಮಾನಿಸಿತ್ತು. ಆದರೆ, ಅಷ್ಟರಲ್ಲಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಆಯ್ಕೆಯಾಗಿದ್ದರಿಂದ ಸಭೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದ್ದು, ಅದಕ್ಕೆ ಶಾ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

ಅಮಿತ್ ಶಾ ಅವರಿಗೆ ಆಹ್ವಾನ ನೀಡುವ ಕುರಿತು ಮಾಹಿತಿ ನೀಡಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ವಿಧಾನಸಭೆ ಅಧಿವೇಶನ ಮುಗಿದ ಅಂದರೆ ಜು.30ರ ಬಳಿಕ ನವದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಆಹ್ವಾನಿಸಲಾಗುವುದು ಎಂದು ಹೇಳಿದ್ದಾರೆ. [ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾ ಆಯ್ಕೆ]
ಕಾರ್ಯಕಾರಣಿ ಸಭೆಯ ದಿನಾಂಕ ಮತ್ತು ಸ್ಥಳಗಳನ್ನು ಇನ್ನು ನಿಗದಿ ಮಾಡಿಲ್ಲ. ಅಮಿತ್ ಶಾ ಅವರು ಬರಲು ಒಪ್ಪಿಕೊಂಡರೆ ಅವರು ಬರುವ ದಿನಾಂಕ ನೋಡಿಕೊಂಡು ಸಭೆಯನ್ನು ಸಂಘಟಿಸಲಾಗುವುದು ಎಂದು ತಿಳಿಸಿದ್ದಾರೆ. ಹೊಸದಾಗಿ ಆಯ್ಕೆಯಾದ ಅಧ್ಯಕ್ಷರನ್ನು ರಾಜ್ಯಕ್ಕೆ ಆಹ್ವಾನಿಸಿ, ಪಕ್ಷ ಸಂಘಟನೆ ಬಗ್ಗೆ ಸಲಹೆ ಪಡೆಯಲಾಗುವುದು ಎಂದು ಈಶ್ವರಪ್ಪ ಹೇಳಿದರು. [ಆಧುನಿಕ ಚಾಣಾಕ್ಯ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ]
ರಾಜಕೀಯ ಬೇಡ : ಲೋಕಸಭೆಯ ಪ್ರತಿಪಕ್ಷ ಸ್ಥಾನವನ್ನು ರಾಜಕೀಯಗೊಳಿಸುವುದು ಬೇಡ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಅವರು, ಪ್ರತಿಪಕ್ಷ ಸ್ಥಾನ ನೀಡುವಂತೆ ಕಾಂಗ್ರೆಸ್ ನಾಯಕರು ಸ್ಪೀಕರ್ ಅವರಿಗೆ ಮನವಿ ಮಾಡದೆ ಸರ್ಕಾರವನ್ನು ಟೀಕಿಸುತ್ತಿದ್ದರು.
ಸದ್ಯ ಪ್ರತಿಪಕ್ಷ ಸ್ಥಾನ ನೀಡುವಂತೆ ಪತ್ರ ಬರೆದಿದ್ದಾರೆ. ಜವಾಹರಲಾಲ್ ನೆಹರೂ ಸೇರಿದಂತೆ ಇಂದಿರಾಗಾಂಧಿ ಅಧಿಕಾರದ ಅವಧಿಯಲ್ಲೂ ಅಧಿಕೃತ ಪ್ರತಿಪಕ್ಷ ಇರಲಿಲ್ಲ. ಇದನ್ನು ಕಾಂಗ್ರೆಸ್ಸಿಗರು ಅರ್ಥಮಾಡಿಕೊಳ್ಳಬೇಕು. ಟೀಕಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications