ಮಾತಲ್ಲೇ ಮಂಡಕ್ಕಿ ತಿನ್ನಿಸುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು: ಬಿಜೆಪಿ ವಾಗ್ದಾಳಿ
ಬೆಂಗಳೂರು, ಆಗಸ್ಟ್ 23: ಮಾತಲ್ಲೇ ಮಂಡಕ್ಕಿ ತಿನ್ನಿಸುವುದರಲ್ಲಿ ಸಿದ್ದರಾಮಯ್ಯ ಅವರು ನಿಸ್ಸೀಮರು. ಅವರ ಮಾತು ಬರೀ ಮಂಡಕ್ಕಿ ಎಂಬುದು ಅವರು ಕೊಡದೆ ಕೈಯೆತ್ತಿದ ಹತ್ತು ಕೆಜಿ ಅಕ್ಕಿ ಹೇಳುತ್ತದೆ. ಆದರೂ, 13 ಬಾರಿ ರಾಜ್ಯ ಬಜೆಟ್ ಮಂಡಿಸಿ ಅನುಭವ ಇರುವ ಕಾರಣ, ಅಂಕಿ ಸಂಖ್ಯೆಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚಿ ಗೊಂದಲ ಸೃಷ್ಟಿಸಿ ಬಿಡುತ್ತಾರೆ ಎಂದು ರಾಜ್ಯ ಬಿಜೆಪಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಾತಲ್ಲೇ ಮಂಡಕ್ಕಿ ತಿನ್ನಿಸುವುದರಲ್ಲಿ @siddaramaiah ಅವರು ನಿಸ್ಸೀಮರು. ಅವರ ಮಾತು ಬರೀ ಮಂಡಕ್ಕಿ ಎಂಬುದು ಅವರು ಕೊಡದೆ ಕೈಯೆತ್ತಿದ ಹತ್ತು ಕೆಜಿ ಅಕ್ಕಿ ಹೇಳುತ್ತದೆ. ಆದರೂ, 13 ಬಾರಿ ರಾಜ್ಯ ಬಜೆಟ್ ಮಂಡಿಸಿ ಅನುಭವ ಇರುವ ಕಾರಣ, ಅಂಕಿ ಸಂಖ್ಯೆಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿರುಚಿ ಗೊಂದಲ ಸೃಷ್ಟಿಸಿ ಬಿಡುತ್ತಾರೆ.
— BJP Karnataka (@BJP4Karnataka) August 23, 2023
ಕೊಟ್ಟ ಭರವಸೆ…
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕೊಟ್ಟ ಭರವಸೆ ಈಡೇರಿಸುವ ಬದಲಾಗಿ ಆರೋಪಗಳನ್ನು ಮಾಡುತ್ತಾ ದಿನಗಳೆಯುವುದು ಸಿದ್ದರಾಮಯ್ಯರವರ ಐತಿಹಾಸಿಕ ಜಾಯಮಾನ. ತಾವೇ ಕೊಟ್ಟ ಗ್ಯಾರಂಟಿಗಳಲ್ಲಿ ಒಂದನ್ನೂ ಸರಿಯಾಗಿ ಅನುಷ್ಠಾನ ಮಾಡಲಾಗದೆ ಎಲ್ಲಾ ತೆರಿಗೆಗಳನ್ನೂ ಏರಿಸಿ ಜನರ ಮೇಲೆ ಹೊರೆ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ.

ಈ ಮೂಲಕ ತಮ್ಮ ಅಸಾಮರ್ಥ್ಯಗಳನ್ನು ಮರೆಮಾಚಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಅವರ ಹುನ್ನಾರ. ಏಕೆಂದರೆ ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಬಾಬ್ತು ಈ ಹಿಂದಿನ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಗಿಂತ ದುಪ್ಪಟ್ಟು ಮಾತ್ರವಲ್ಲ, 2.5 ಪಟ್ಟು ಹೆಚ್ಚಾಗಿದೆ ಎಂಬುದು ವಾಸ್ತವ.
2014 ರಿಂದ 2019ರ ಅವಧಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದ ತೆರಿಗೆ ಪಾಲು ₹1,35,000 ಕೋಟಿ. ಆದರೆ ಈ ಬಗ್ಗೆ ಏನೂ ಹೇಳದೆ 4.2, 4.71, 3.64 ಎಂದು ಜನಸಾಮಾನ್ಯರಿಗೆ ಅರ್ಥವೇ ಆಗದಂತೆ ಅಪ್ರಸ್ತುತ ಅಂಕಿ ಅಂಶಗಳನ್ನು ಪ್ರಸ್ತಾಪಿಸಿ ಜನಸಾಮಾನ್ಯರು ಮತ್ತು ಮಾಧ್ಯಮಗಳ ದಿಕ್ಕು ತಪ್ಪಿಸಲು ಸಿದ್ದರಾಮಯ್ಯ ಅವರು ಹವಣಿಸುತ್ತಿದ್ದಾರೆ.
ವಾಸ್ತವದಲ್ಲಿ 2019 ರಿಂದ 2024 ರ ಅವಧಿಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಸಂದಾಯವಾಗಿರುವ ತೆರಿಗೆ ಬಾಬ್ತು ₹1,58,000 ಕೋಟಿ. ಒಟ್ಟಾರೆಯಾಗಿ ಕಳೆದ ಎರಡು ಅವಧಿಗಳಲ್ಲಿ ಸೇರಿದಂತೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಕರ್ನಾಟಕಕ್ಕೆ ನೀಡಿರುವ ತೆರಿಗೆ ಪಾಲು ಹತ್ತಿರ ಹತ್ತಿರ 3 ಲಕ್ಷ ಕೋಟಿ ರೂಪಾಯಿ. ಇದರ ಎದುರು ಕಾಂಗ್ರೆಸ್ ದವರಿಗೆ ಯುಪಿಎ ಸರ್ಕಾರ ನೀಡಿದ್ದ ಪಾಲನ್ನು ನಮೂದಿಸಲೂ ನಾಚಿಕೆಯಾಗಬಹುದು.
ಅವರು ಹೇಳದ ಸತ್ಯ ಮತ್ತೊಂದಿದೆ, 2014 ರಿಂದ 19ರ ಅವಧಿಯಲ್ಲಿಯೇ ಮೋದಿ ಸರ್ಕಾರ ರಾಜ್ಯಕ್ಕೆ ನೀಡಿದ ಇತರೆ ಅನುದಾನಗಳು ₹91,374 ಕೋಟಿ. ಯುಪಿಎ ಇತಿಹಾಸ ತಿರುವಿ ನೋಡಿದರೆ ಸಂಖ್ಯೆ ಇದರ ಅರ್ಧದಷ್ಟಕ್ಕೂ ಬರುವುದಿಲ್ಲ. ಇದಲ್ಲದೆ 2019 ರಿಂದ ಇದುವರೆಗೆ ₹1.17 ಲಕ್ಷ ಕೋಟಿ ಈಗಾಗಲೇ ಕೇಂದ್ರದಿಂದ ರಾಜ್ಯಕ್ಕೆ ಬಂದಾಗಿದೆ. 2023-24ರ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಘೋಷಣೆಯಾಗಿ ಈ ವರ್ಷ ಬರಲಿರುವ ಬಾಬ್ತು ₹18,000 ಕೋಟಿಯನ್ನೂ ಸೇರಿಸಿದರೆ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಿಂದ ₹1.35 ಲಕ್ಷ ಕೋಟಿ ಬಂದಂತಾಗುತ್ತದೆ.
ವಾಸ್ತವ ಹೀಗಿರುವಾಗ 15ನೇ ಹಣಕಾಸು ಆಯೋಗ ನೀಡಿದ ಅಭಿಪ್ರಾಯಗಳನ್ನಷ್ಟೇ ಕ್ರೋಢೀಕರಿಸಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಅವರು ಬೊಬ್ಬೆ ಹೊಡೆದು ಸಮಾಜದ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.












Click it and Unblock the Notifications