ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಎಲ್ಲಿಗೆ ಬಂತು?
ಬೆಂಗಳೂರು, ಜುಲೈ, 01: ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಭಿನ್ನಮತ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಒಂದೆಡೆ ನವದೆಹಲಿಗೆ ತೆರಳಿರುವ ಈಶ್ವರಪ್ಪ ಆಂಡ್ ಟೀಂ ಬಿಜೆಪಿ ವರಿಷ್ಠರು ಮತ್ತು ಆರ್ ಎಸ್ ಎಸ್ ನಾಯಕರ ಬಳಿ ಬಿಎಸ್ ವೈ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ದೂರು ಹೇಳಿದ್ದು ಕೆಲ ಬೇಡಿಕೆಯನ್ನು ಶುಕ್ರವಾರ ಮುಂದಿಟ್ಟಿದೆ.
ಭಿನ್ನಮತ ಶಮನ ಮತ್ತು ಚರ್ಚೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶನಿವಾರ(ಜೂನ್ 2) ಕರೆದಿರುವ ಸಭೆಗೆ ಈಶ್ವರಪ್ಪ ಗೈರು ಹಾಜಾರಾಗಲಿದ್ದಾರೆ ಎಂದು ಹೇಳಲಾಗಿದೆ.[ದೆಹಲಿಗೆ ಹೊರಟ ಬಿಜೆಪಿ ಅತೃಪ್ತ ನಾಯಕರು?]
ಬಿಎಸ್ ಯಡಿಯೂರಪ್ಪ ಜಿಲ್ಲಾ ಘಟಕಕ್ಕೆ ಹೊಸ ಪದಾಧಿಕಾರಿಗಳ ನೇಮಕ ಮಾಡಿದಾಗಿನಿಂದ ಹುಟ್ಟಿಕೊಂಡ ಭಿನ್ನಮತ ಇದೀಗ ಬೀದಿಗೆ ಬಂದಿದೆ. ಮೂಲ ಬಿಜೆಪಿ ಮತ್ತು ವಲಸೆ ಬಿಜೆಪಿ ನಡುವಿನ ಗಲಾಟೆ ದೆಹಲಿ ತಲುಪಿದೆ.
ಬಿಎಸ್ ವೈ ಯೋಜನೆ ಏನು?
ಶನಿವಾರ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮತ್ತೊಂದು ಯತ್ನ ಮಾಡಲಿದ್ದಾರೆ. ಪದಾಧಿಕಾರಿಗಳ ಹುದ್ದೆ ಬದಲಾವಣೆ ಸಂಬಂಧವೂ ಶನಿವಾರದ ಸಭೆಯಲ್ಲಿ ಚರ್ಚೆ ಆಗಲಿದೆ.
ಭಿನ್ನಾಭಿಪ್ರಾಯವೇ ಇಲ್ಲ!
ರಾಜ್ಯ ಬಿಜೆಪಿಯಲ್ಲಿ ಯಾವ ಭಿನ್ನಾಭಿಪ್ರಾಯ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತ ಬಂದಿದ್ದರೂ ಭಿನ್ನಮತ ಇರುವುದು ಜಗಜ್ಜಾಹೀರಾಗಿದೆ.
ದೂರ ಉಳಿದ ನಾಯಕರು
ಭಿನ್ನರ ಬಣದಲ್ಲಿ ಈಶ್ವರಪ್ಪ ಪ್ರಮುಖವಾಗಿ ಕಾಣಿಸಿಕೊಂಡಿದ್ದರೂ ಉಳಿದ ಪ್ರಮುಖ ನಾಯಕರು ರಾಜಕೀಯ ಚಟುವಟಿಕೆಯಿಂದ ದೂರ ಇದ್ದಾರೆ.
ಕೋರ್ ಕಮಿಟಿ ಚರ್ಚೆ ಆಗಿಲ್ಲ
ಪದಾಧಿಕಾರಿಗಳ ನೇಮಕ ಕೋರ್ ಕಮಿಟಿ ಯಲ್ಲಿ ಚರ್ಚೆ ನಡೆದ ನಂತರ ತೀರ್ಮಾನ ತೆಗೆದುಕೊಳ್ಳಬೇಕಾಗಿತ್ತು. ಆದರೆ ಈ ಬಾರಿ ಸಂಪ್ರದಾಯ ಮುರಿಯಲಾಗಿದೆ. ಕೋರ್ ಕಮಿಟಿ ಸಭೆ ಕರೆದರೆ ಈ ಎಲ್ಲ ಗೊಂದಲ ಬಗೆಹರಿಯಲಿದೆ ಎಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಶೋಭಾ ವಿರುದ್ಧ ಆಕ್ರೋಶ
ನಾಳೆ ನಡೆಯಲಿರುವ ಬಿಜೆಪಿ ಪದಾಧಿಕಾರಿಗಳ ಸಭೆಗೆ ಹಾಜರಾಗಿ, ಸಂಸದೆ ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿಯನ್ನು ಪ್ರಶ್ನಿಸುವುದು ಈಶ್ವರಪ್ಪ ಬಣದ ಪ್ರಮುಖ ಅಂಶ.