ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ಕೇಳಿದ 10 ಪ್ರಶ್ನೆಗಳು
ಬೆಂಗಳೂರು, ಜೂನ್ 24 : ಕರ್ನಾಟಕ ಬಿಜೆಪಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ 10 ಪ್ರಶ್ನೆಗಳನ್ನು ಕೇಳಿದೆ. ಮುಖ್ಯಮಂತ್ರಿಗಳ 'ಗ್ರಾಮ ವಾಸ್ತವ್ಯ ಶೂನ್ಯ ಸಾಧನೆ' ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ.
ಪ್ರತಿಪಕ್ಷ ಬಿಜೆಪಿ ಸೋಮವಾರ ಕರ್ನಾಟಕ ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸುವ ಸೂಚನೆ ನೀಡಿದೆ. ಬಿ.ಎಸ್.ಯಡಿಯೂರಪ್ಪ ಅವರು ಮೈತ್ರಿ ಸರ್ಕಾರದ 13 ತಿಂಗಳ ಆಡಳಿತದ ಅವಧಿಯಲ್ಲಿನ ವೈಫಲ್ಯಗಳ ಕುರಿತು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.
ಬರ ಪರಿಸ್ಥಿತಿ, ಐಎಂಎ ಹಗರಣ, ಗ್ರಾಮ ವಾಸ್ತವ್ಯ, ಜಿಂದಾಲ್ಗೆ ಭೂಮಿ ನೀಡುವುದು ಸೇರಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ 10 ಪ್ರಶ್ನೆಗಳನ್ನು ಕೇಳಲಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ ಅವರು, 'ಕರ್ನಾಟಕದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು ಈ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಮಾಡುವುದು ಸರಿಯೇ?' ಎಂದು ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು...

ಪ್ರಶ್ನೆ - 1
13 ತಿಂಗಳು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಿಲಾಸಿ ಜೀವನ ನಡೆಸುವಾಗ ರಾಜ್ಯದಲ್ಲಿ 1200 ರೈತರು ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ನಿಮ್ಮ ಬಳಿ ಉತ್ತರವಿದೆಯೇ? ಎಂದು ಕರ್ನಾಟಕ ಬಿಜೆಪಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದೆ.

ಪ್ರಶ್ನೆ - 2
ಅಧಿಕಾರಕ್ಕೆ ಬರುವ ಮೊದಲೇ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು. ಸಾಲ ಮನ್ನಾ ಮಾಡಿ ಋಣ ಮುಕ್ತ ಪತ್ರ ಕೊಡುತ್ತೇವೆ ಎಂದು ಹೇಳಿದಿರಿ. ನಿಮ್ಮ ಮಾತನ್ನು ನಂಬಬೇಕಾ?.

ಪ್ರಶ್ನೆ - 3
ರಾಜ್ಯದಲ್ಲಿ ಭೀಕರ ಬರಗಾಲವಿದೆ. ರಾಜ್ಯದ ಜನರು ಬರದಿಂದಾಗಿ ಗುಳೆ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಬೇಕೆ?.

ಪ್ರಶ್ನೆ - 4
ಐಎಂಎ ಹಗರಣದ ರೂವಾರಿ ಮನ್ಸೂರ್ ಜೊತೆ ಬಿರಿಯಾನಿ ತಿಂದ ನೀವು ಈಗ ಹಗರಣವನ್ನು ಸಿಬಿಐಗೆ ವಹಿಸದೆ ಮೌನವಾಗಿ ಯಾಕೆ ಇದ್ದೀರಿ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಪ್ರಶ್ನೆ - 5
ಕಳೆದ 4 ತಿಂಗಳಿನಿಂದ ಶಿಕ್ಷಕರ ವೇತನವನ್ನು ಏಕೆ ನೀಡಿಲ್ಲ?. ಶಿಕ್ಷಣ ಖಾತೆಯನ್ನು ನಿಮ್ಮ ಬಳಿ ಇಟ್ಟುಕೊಂಡಿರುವ ನೀವು ಇದಕ್ಕೆ ಉತ್ತರ ಕೊಡಿ.

ಪ್ರಶ್ನೆ - 6
ಬಳ್ಳಾರಿಯ ಜಿಲ್ಲೆಯಲ್ಲಿ ಜಿಂದಾಲ್ಗೆ 3667 ಎಕರೆ ಭೂಮಿ ಮಾರಾಟ ಮಾಡಿದ್ದಕ್ಕೆ ಎಷ್ಟು ಕಿಕ್ ಬ್ಯಾಕ್ ಅನ್ನು ನೀವು ಪಡೆದಿರಿ.

ಪ್ರಶ್ನೆ - 7, 8,9, 10
ಪ್ರಶ್ನೆ -7 : ಮೊದಲು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಇದ್ದ ಮುಖ್ಯಮಂತ್ರಿಗಳು ಈಗ ಗ್ರಾಮ ವಾಸ್ತವ್ಯ ಮಾಡುತ್ತಿದ್ದೀರಿ. ಗ್ರಾಮ ವಾಸ್ತವ್ಯದ ಗಿಮಿಕ್ ಏಕೆ?. ಶಾಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂಬ ಜ್ಞಾನೋದಯ ಆಯಿತಾ?.
ಪ್ರಶ್ನೆ - 8 :ಈಗ ನೀವು ಗ್ರಾಮ ವಾಸ್ತವ್ಯ ಮಾಡುತ್ತಿದ್ದೀರಿ. ಹಿಂದಿನ ಗ್ರಾಮ ವಾಸ್ತವ್ಯದ ಬಗ್ಗೆ ಶ್ವೇತ ಪತ್ರವನ್ನು ನೀಡುತ್ತೀರಾ?.
ಪ್ರಶ್ನೆ - 9 :ಉತ್ತರ ಕರ್ನಾಟಕದ ಭಾಗದಲ್ಲಿ ಈಗ ಗ್ರಾಮ ವಾಸ್ತವ್ಯ ಮಾಡುತ್ತಿದ್ದೀರಿ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಎಷ್ಟು ಹಣವನ್ನು ಇಟ್ಟಿದ್ದೀರಿ?.
ಪ್ರಶ್ನೆ - 10 :ಸರ್ಕಾರದ ಇಲಾಖೆಯಲ್ಲಿ ಹಗಲು ಲೂಟಿ ಮಾಡಿದರೂ ಉತ್ತಮ ಆಡಳಿತದ ಭರವಸೆ ನೀಡುತ್ತೀರಿ. ಭ್ರಷ್ಟಾಚಾರಕ್ಕೆ, ನಿಮ್ಮ ಮೈತ್ರಿ ಸರ್ಕಾರದ ಕಿತ್ತಾಟದಿಂದ ಜನರಿಗೆ ಮುಕ್ತಿ ಯಾವಾಗ?.












Click it and Unblock the Notifications