ಶನಿವಾರ ಕರ್ನಾಟಕ ಬಂದ್ : ಏನಿರುತ್ತೆ?, ಏನಿರಲ್ಲ?
ಬೆಂಗಳೂರು, ಸೆಪ್ಟೆಂಬರ್ 25 : ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡ ಒಕ್ಕೂಟ ಶನಿವಾರ ಕರ್ನಾಟಕ ಬಂದ್ಗೆ ಕರೆ ನೀಡಿದೆ. ಆಟೋ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕರು ಬಂದ್ಗೆ ಬೆಂಬಲ ನೀಡಿದ್ದು, ಬಸ್ ಮತ್ತು ಆಟೋ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ನಾಲಾ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಗೋವಾ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ. [ಕರ್ನಾಟಕ ಬಂದ್ ವಾಟಾಳ್ ನಾಗರಾಜ್ ಸಂದರ್ಶನ]
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಕುರಿತು ಶುಕ್ರವಾರ ನಿರ್ಧಾರ ಕೈಗೊಂಡು ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯೋಪಾಧ್ಯಯರ ಮೂಲಕ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಕೆ.ಎಸ್.ಸತ್ಯಮೂರ್ತಿ ಹೇಳಿದ್ದಾರೆ. [ಏನಿದು ಕಸಳಾ-ಬಂಡೂರಿ ಯೋಜನೆ]
ಬಂದ್ ದಿನ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಹಾಲು, ಔಷಧ, ಆಂಬ್ಯುಲೆನ್ಸ್, ಆಸ್ಪತ್ರೆ ಸೇವೆಗಳು ಎಂದಿನಂತೆ ಇರಲಿವೆ. ಕರ್ನಾಟಕ ಬಂದ್ ದಿನ ಏನಿರುತ್ತೆ, ಏನಿರಲ್ಲ? ಚಿತ್ರಗಳಲ್ಲಿ ನೋಡಿ........

ಬಂದ್ಗೆ ಬೆಂಬಲ ನೀಡಿದ ಸಂಘಟನೆಗಳು
ಜೆಡಿಎಸ್ ಮತ್ತು ಜೆಡಿಯು ಪಕ್ಷ, ಸ್ಯಾಂಡಲ್ವುಡ್ ಕಲಾವಿದರು, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಜಾಗೃತಿ ಸೇನೆ, ಕನ್ನಡ ಪರ ಹೋರಾಟಗಾರರ ಸಂಘ, ರೈತ ಸಂಘಟನೆಗಳು, ವಕೀಲರ ಸಂಘ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಸರ್ಕಾರಿ ನೌಕರರ ಸಂಘ, ಉತ್ತರ ಕರ್ನಾಟಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ಗೂಡ್ಸ್ ಟ್ರಕ್ ಓನರ್ಸ್ ಅಸೋಸಿಯೇಶನ್, ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಬಿಸಿಯೂಟ ನೌಕರರು ಸೇರಿದಂತೆ 800ಕ್ಕೂ ಅಧಿಕ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ.

ಆಟೋ ಚಾಲಕರ ಬೆಂಬಲ, ಸಂಚಾರವಿಲ್ಲ
ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬಂದ್ಗೆ ಬೆಂಬಲ ನೀಡಿದೆ. ಕರ್ನಾಟಕ ರಕ್ಷಣಾ ವೇದಿಕೆಯೂ ಬೆಂಬಲ ನೀಡಿರುವುದರಿಂದ ಕರವೇ ಆಟೋ ಚಾಲಕರ ಸಂಘವೂ ಸಂಚಾರ ಸ್ಥಗಿತಗೊಳಿಸಲಿದೆ. ಆದ್ದರಿಂದ, ಆಟೋಗಳು ರಸ್ತೆಗೆ ಇಳಿಯುವುದು ಅನುಮಾನ.

ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಸಿಲ್ಲ
ಎಐಟಿಯುಸಿ ಕಾರ್ಯದರ್ಶಿ ನಾಗರಾಜ್ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಬಸ್ ಸೇವೆ ಶನಿವಾರ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದಾರೆ. ಆದರೆ, ಈ ಬಗ್ಗೆ ಸಾರಿಗೆ ಸಂಸ್ಥೆಗಳು ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಸರ್ಕಾರಿ ನೌಕರರ ಬೆಂಬಲ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬಂದ್ಗೆ ಬೆಂಬಲ ನೀಡಿದೆ. ನೌಕರರು ತಮ್ಮ ಹಕ್ಕಿನ ರಜೆಯನ್ನು ಹಾಕಿ ಕರ್ನಾಟಕ ಬಂದ್ಗೆ ಬೆಂಬಲ ನೀಡಬೇಕು ಎಂದು ಸಂಘ ಮನವಿ ಮಾಡಿದೆ. ಆದ್ದರಿಂದ, ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವುದು ಅನುಮಾನ.

ಹೋಟೆಲ್ ಮಾಲೀಕರ ಸಂಘ
ಬಂದ್ಗೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡುವಂತೆ ಕನ್ನಡ ಒಕ್ಕೂಟ ಮನವಿ ಮಾಡಿದೆ. ಹೋಟೆಲ್ ಮಾಲೀಕರ ಸಂಘ ಬಂದ್ಗೆ ಬೆಂಬಲ ನೀಡಿದೆ. ಆದ್ದರಿಂದ, ಹೋಟೆಲ್ಗಳು ಬಾಗಿಲು ತೆರೆಯುವುದು ಅನುಮಾನ.

ಹಾಲು, ಔಷಧ, ಆಸ್ಪತ್ರೆಗೆ ಬಂದ್ನಿಂದ ವಿನಾಯಿತಿ
ಆಂಬ್ಯುಲೆನ್ಸ್, ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ಎಟಿಎಂ ಸೇರಿದಂತೆ ಅಗತ್ಯ ವಸ್ತುಗಳ ಸೇವೆಗೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ.

ಟ್ಯಾಕ್ಸಿಗಳ ಸಂಚಾರವಿಲ್ಲ
ಲಾರೀ ಮಾಲೀಕರು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ನೀಡಿವೆ. ಆದ್ದರಿಂದ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಅಂಚೆ ಕಚೇರಿ, ಬ್ಯಾಂಕ್ ಕಥೆ ಏನು?
ಅಂಚೆ ಕಚೇರಿಗಳು ಎಂದಿನಂತೆ ತೆರೆದಿರುತ್ತವೆ. ಆದರೆ, ಸಾರಿಗೆ ಸಂಚಾರ ಸ್ಥಗಿತಗೊಂಡರೆ ಉದ್ಯೋಗಿಗಳು ಕಚೇರಿಗೆ ಬರುವುದು ಕಷ್ಟವಾಗಲಿದೆ. ಇನ್ನು ಕೇಂದ್ರ ಸರ್ಕಾರ ಬ್ಯಾಂಕ್ಗಳಲ್ಲಿ ತಿಂಗಳ 2 ಮತ್ತು 4 ನೇ ಶನಿವಾರವನ್ನು ಸಂಪೂರ್ಣ ರಜಾ ದಿನವನ್ನಾಗಿ ಘೋಷಿಸಲು ಒಪ್ಪಿಗೆ ನೀಡಿದೆ. ಆದ್ದರಿಂದ ಬ್ಯಾಂಕ್ ತೆರೆಯುವುದಿಲ್ಲ. [2 ಮತ್ತು 4 ನೇ ಶನಿವಾರ ಬ್ಯಾಂಕ್ ಬಾಗಿಲು ತೆರೆಯಲ್ಲ]

ಶಾಲೆಗಳ ಕಥೆ ಏನು?
ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಕುರಿತು ಶುಕ್ರವಾರ ನಿರ್ಧಾರ ಕೈಗೊಂಡು ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯೋಪಾಧ್ಯಯರ ಮೂಲಕ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಕೆ.ಎಸ್.ಸತ್ಯಮೂರ್ತಿ ಹೇಳಿದ್ದಾರೆ. ಖಾಸಗಿ ಶಾಲೆಗಳು ಇದುವರೆಗೂ ರಜೆ ಘೋಷಣೆ ಮಾಡಿಲ್ಲ.

ಪೆಟ್ರೋಲ್ ಬಂಕ್ ತೆರೆಯೋಲ್ಲ
ಕರ್ನಾಟಕ ಬಂದ್ಗೆ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಬೆಂಬಲ ಕೊಟ್ಟಿದೆ. ಆದ್ದರಿಂದ, ಬಂಕ್ ಬಾಗಿಲು ತೆರೆಯೋಲ್ಲ. ವಾಹನಗಳಿಗೆ ಇಂಧನವನ್ನು ಇಂದೇ ತುಂಬಿಕೊಳ್ಳಿ.











Click it and Unblock the Notifications