ಅಕ್ಟೋಬರ್ 10 ಕ್ಕೆ ಅಧಿವೇಶನ: ಮೂರು ದಿನಕ್ಕೆ ಚರ್ಚೆ ಮೊಟಕು
ತುಮಕೂರು, ಸೆಪ್ಟೆಂಬರ್ 28: ಉಪಚುನಾವಣೆ ಇದ್ದ ಕಾರಣ ಚಳಿಗಾಲದ ಅಧಿವೇಶನವನ್ನು ಮುಂದೂಡುವ ಒತ್ತಡ ಬಂದಿದೆ. ಆದರೆ ಅದನ್ನು ತಳ್ಳಿ ಹಾಕಿರುವ ಸರ್ಕಾರ ಈ ಹಿಂದೆ ನಿಗದಿಯಾದಂತೆ ಅಕ್ಟೋಬರ್ 10 ರಂದೇ ಅಧಿವೇಶನ ನಡೆಸಲು ತೀರ್ಮಾನಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ, 'ಚಳಿಗಾಲದ ಅಧಿವೇಶನವನ್ನು ಮುಂದೂಡಲು ಸಮಯವಿಲ್ಲ, ಅಧಿವೇಶನ ಅಕ್ಟೋಬರ್ 10ರಂದೇ ನಡೆಯಲಿದೆ' ಎಂದು ಹೇಳಿದ್ದಾರೆ.
ಈ ಬಾರಿಯ ಚಳಿಗಾಲದ ಅಧಿವೇಶನವು ಬೆಳಗಾವಿಯ ಬದಲಿಗೆ ಬೆಂಗಳೂರಲ್ಲಿ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಬಂದ ನೆರೆಯನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದ್ದು ಪ್ರತಿಭಟನೆಯ ಭಯದಿಂದ ಈ ಅಧಿವೇಶನವನ್ನು ವಿಧಾನಸೌಧಕ್ಕೆ ಬದಲಾಯಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
'ಉಪಚುನಾವಣೆ ದಿನಾಂಕ ಮರುಘೋಷಣೆ ಆಗಿರುವ ಕಾರಣ ಅಧಿವೇಶನದ ಅವಧಿಯನ್ನು ಮೂರು ದಿನಗಳಿಗೆ ನಿಗದಿಪಡಿಸಲಾಗಿದೆ' ಎಂದು ಮಾಧುಸ್ವಾಮಿ ಹೇಳಿದರು. ಈ ಹಿಂದೆ ನಿಶ್ಚಯಿಸಿದಂತೆ ಹತ್ತು ದಿನಗಳು ಅಧಿವೇಶನ ನಡೆಯಬೇಕಿತ್ತು, ಆದರೆ ಈಗ ಅವಧಿ ಮೊಟಕುಗೊಳಿಸಲಾಗಿದೆ.
ಸಂಸದೀಯ ವ್ಯವಹಾರಗಳ ಸಲಹಾ ಸಮಿತಿ ಮೂರು ದಿನಗಳಿಗಿಂತಲೂ ಹೆಚ್ಚು ದಿನ ಅಧಿವೇಶನ ನಡೆಸಬಹುದು ಎಂದು ಅಭಿಪ್ರಾಯ ಕೊಟ್ಟರೆ ಅಧಿವೇಶನ ಮುಂದುವರೆಸುತ್ತೇವೆ. ಇದಕ್ಕೆ ಎಲ್ಲರ ಸಲಹೆ ಬೇಕು ಎಂದು ಮಾಧುಸ್ವಾಮಿ ಹೇಳಿದರು.
'ಶಾಸಕರ ಅನರ್ಹತೆ ಮತ್ತು ಉಪಚುನಾವಣೆ ಬಗ್ಗೆ ಮಾತನಾಡಿದ ಮಾಧುಸ್ವಾಮಿ, ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇರುವಾಗ ಚುನಾವಣೆ ಘೋಷಣೆ ಮಾಡಿದ್ದ ತಪ್ಪು, ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಸಹ ತಪ್ಪು ಹೇಳಿಕೆಯಿಂದ ದಾರಿ ತಪ್ಪಿಸುವ ಕಾರ್ಯ ಮಾಡಿದರು' ಎಂದರು.