ವಿಧಾನಸಭೆ ಕಲಾಪ; ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ
ಬೆಂಗಳೂರು, ಸೆಪ್ಟೆಂಬರ್ 24: ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಗಂಡಿ ವಿಧಿವಶರಾಗಿದ್ದಾರೆ. ನಾಲ್ಕನೇ ದಿನದ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸಚಿವರ ಸಾವಿಗೆ ಸಂತಾಪವನ್ನು ಸೂಚಿಸಲಾಯಿತು. ಇಂದು ಸಂಜೆ ದೆಹಲಿಯಲ್ಲಿ ಸುರೇಶ್ ಅಂಗಡಿ ಅಂತ್ಯಕ್ರಿಯೆ ನಡೆಯಲಿದೆ.
ಗುರುವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸುರೇಶ್ ಅಂಗಡಿ (66) ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಸಿ. ಟಿ. ರವಿ, ಕೆ. ಎಸ್. ಈಶ್ವರಪ್ಪ ಸಂತಾಪವನ್ನು ಸೂಚಿಸಿದರು.
ಸಂಸದ ಸುರೇಶ್ ಅಂಗಡಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು
ಕೋವಿಡ್ ಸೋಂಕು ತಗುಲಿದ್ದ ಸುರೇಶ್ ಅಂಗಡಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ರಾತ್ರಿ ಮೃತಪಟ್ಟಿದ್ದರು. ಕರ್ನಾಟಕ ಸರ್ಕಾರ ಸೆಪ್ಟೆಂಬರ್ 24ರಂದು ರಾಜ್ಯಾದ್ಯಂತ ಶೋಕಾಚರಣೆ ಘೋಷಣೆ ಮಾಡಿದೆ.
ನವದೆಹಲಿಯಲ್ಲೇ ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ
ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ದೆಹಲಿಯಲ್ಲಿಯೇ ನಡೆಯಲಿದೆ. ಬೆಳಗಾವಿಯಲ್ಲಿರುವ ಸಚಿವರ ಕುಟುಂಬಸ್ಥರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಗುರುವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ವಿಧಿವಶ
ಜೆ. ಸಿ. ಮಾಧುಸ್ವಾಮಿ ಸಂತಾಪ
ವಿಧಾನಸಭೆಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿದರು. "ನಿನ್ನೆ ಸದನ ಮುಗಿಸಿ ಮನೆಗೆ ಹೋಗಿ ಕುಳಿತು ಟಿವಿ ಆನ್ ಮಾಡುತ್ತಿದ್ದಂತೆ ನಿಧನದ ಸುದ್ದಿ ಬಂತು. ಅದನ್ನು ನೋಡಿಯೇ ನಾನು ಶಾಕ್ ಆದೆ, ಎ ದರ್ಜೆಯ ಆಸ್ಪತ್ರೆಯಲ್ಲೇ ಈ ಸೋಂಕನ್ನು ಎದುರಿಸಲಾಗಲಿಲ್ಲ" ಎಂದರು.
"ಸುರೇಶ್ ಅಂಗಡಿ ಕೃಷಿ ಕುಟುಂಬದಿಂದ ಬಂದವರು. ದೆಹಲಿಯಲ್ಲಿ ಕುಳಿತು ರಾಜ್ಯದ ಕೆಲಸ ಮಾಡಿಸಿಕೊಡುತ್ತಿದ್ದರು. ದೆಹಲಿ ಮತ್ತು ನಮಗೆ ಒಂದು ಕೊಂಡಿಯಂತಿದ್ದರು. ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆಯನ್ನು ತುಮಕೂರು, ಶಿವಮೊಗ್ಗ ಮಾರ್ಗದಲ್ಲಿ ಮಾಡಿಸಿ ಕೊಟ್ಟಿದ್ದರು. ಅವರ ನಿಧನ ತುಂಬಲಾರದ ನಷ್ಟ" ಎಂದು ಮಾಧುಸ್ವಾಮಿ ಹೇಳಿದರು.
ಆನಂದ್ ಮಾಮನಿ ಸಂತಾಪ
ವಿಧಾನಸಭೆ ಉಪಾಧ್ಯಕ್ಷ ಆನಂದ್ ಮಾಮನಿ ಅವರು ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. "ಬೆಳಗಾವಿಯಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಒಂದು ವರ್ಷದಿಂದ ಕೇಂದ್ರ ರೈಲ್ವೆ ಖಾತೆ ನಿಭಾಯಿಸುತ್ತಿದ್ದರು. ಅನೇಕ ರೈಲ್ವೆ ಯೋಜನೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಲಸದ ಮೂಲಕ ತಮ್ಮ ಛಾಪು ಮೂಡಿಸಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ" ಎಂದರು.
ಕೆ. ಎಸ್. ಈಶ್ವರಪ್ಪ ಹೇಳಿಕೆ
ಕೆ. ಎಸ್. ಈಶ್ವರಪ್ಪ ಅವರು ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿದರು. "ಮರಾಠಿಗರು, ಕನ್ನಡಿಗರು ಬೆಳಗಾವಿಯಲ್ಲಿ ಹೊಂದಾಣಿಕೆಯಿಂದ ಇರಬೇಕು ಅನ್ನೋ ಭಾವನೆ ಅವರದ್ದಾಗಿತ್ತು. ಹಾಗೇ ನಡೆದುಕೊಂಡರು, ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ದೆಹಲಿಗೆ
ಸುರೇಶ್ ಅಂಗಡಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಟೊಂಕ ಕಟ್ಟಿ ನಿಂತು ಸುರೇಶ್ ಅಂಗಡಿ ಮತ್ತು ರಮೇಶ್ ಜಾರಕಿಹೊಳಿ ಕಾರ್ಯ ನಿರ್ವಹಿಸುತ್ತಿದ್ದರು. ಇಬ್ಬರು ಸಹ ಆಪ್ತ ಸ್ನೇಹಿತರು.
Recommended Video
ಸಿದ್ದರಾಮಯ್ಯ ಸಂತಾಪ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿದರು. "ಅವರು ಸಜ್ಜನ, ಸ್ನೇಹಜೀವಿ. ಕೊರೊನಾಗೆ ಬಲಿಯಾಗಿದ್ದು ದುರ್ದೈವ. ಪ್ರಖ್ಯಾತ ಆಸ್ಪತ್ರೆಯಲ್ಲೇ ನಿಧನರಾಗಿದ್ದು ಆಶ್ಚರ್ಯ ತಂದಿದೆ. ಸುರೇಶ್ ಅಂಗಡಿ ನಾಲ್ಕು ಬಾರಿ ಎಂಪಿಯಾಗಿದ್ದರು. ಎಲ್ಲರೂ ಇಮ್ಯುನಿಟಿ ಡೆವಲಪ್ ಮಾಡಿಕೊಳ್ಳಬೇಕು. ಬಂದವರು, ಬರದಿದ್ದವರು ಬಹಳ ಎಚ್ಚರಿಕೆ ವಹಿಸಬೇಕು. ಅಂಗಡಿ ನಿಧನದ ನಂತರ ಮತ್ತಷ್ಟು ಆತಂಕವಾಗಿದೆ. ಭಯ ಪಡೋದು ಬೇಡ, ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು" ಎಂದರು.