ಮಾರ್ಚ್ 2 ರಿಂದ ಅಧಿವೇಶನ ಆರಂಭ, ಗದ್ದಲಕ್ಕೆ ವಿಪಕ್ಷ ಸಜ್ಜು
ಬೆಂಗಳೂರು, ಮಾರ್ಚ್ 01: ಬಜೆಟ್ ಅಧಿವೇಶನವು ಮಾರ್ಚ್ 2 ರಿಂದ ಆರಂಭವಾಗಲಿದ್ದು, ನಾಳಿನ ಅಧಿವೇಶನದಲ್ಲಿ ಭಾರಿ ಗದ್ದಲ ಆಗುವ ಮುನ್ಸೂಚನೆ ಇದೆ.
ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕರು ಲಘುವಾಗಿ ಮಾತನಾಡಿರುವ ಬಗ್ಗೆ ನಾಳಿನ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಶ್ನೆ ಮಾಡಲಿದೆ. ಈ ವಿಷಯವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ, ಹಾಗಾಗಿ ನಾಳಿನ ಅಧಿವೇಶನ ಗದ್ದಲದ ಗೂಡಾಗುವುದು ಖಚಿತ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ್ದ ಭಾಷಣದ ಮೇಲಿನ ನಿರ್ಣಯ ಉದ್ದೇಶಿಸಿ ಸಿಎಂ ನಾಳೆ ಮಾತನಾಡಲಿದ್ದಾರೆ. ಫೆಬ್ರವರಿ 20ರಂದು ಭಾಷಣಕ್ಕೆ ವಂದನಾರ್ಪಣೆಗೆ ಸಂಬಂಧಿಸಿದಂತೆ ಸರ್ಕಾರ ಉತ್ತರ ನೀಡಬೇಕಾಗಿತ್ತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮುಂದುವರೆಸಬೇಕೆಂದು ಶಾಸಕರು ಪಟ್ಟು ಹಿಡಿದಿದ್ದರಿಂದ ಚರ್ಚೆ ಮುಂದೂಡಲಾಯಿತು. ಫೆಬ್ರವರಿ 17ರಂದೇ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದ್ದರು.

ಈ ಬಾರಿಯ ಅಧಿವೇಶನ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ವಾಕ್ಸಮರ ಉಂಟುಮಾಡುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿದೆ. ದೊರೆಸ್ವಾಮಿ ಅವರಿಗೆ ಅವಮಾನಿಸಿರುವುದು, ಪಾಕ್ ಪರ ಘೋಷಣೆ, ಸಿಎಎ ಪರ-ವಿರೋಧಿ ಪ್ರತಿಭಟನೆಗಳು, ಬರ, ನೆರೆ ಪರಿಹಾರ, ಕೇಂದ್ರದಿಂದ ಅನುದಾನ, ಜಿಎಸ್ಟಿ ಪಾಲು ಕಡಿತ ಎಲ್ಲವೂ ಚರ್ಚೆಗೆ ಒಳಗಾಗಲಿದೆ.












Click it and Unblock the Notifications