Karnataka Assembly Elections: ಜೆಡಿಎಸ್‌ಗೆ ಅಸ್ತಿತ್ವದ ಹೋರಾಟ? ಮತ್ತೆ ಸರ್ಕಾರ ರಚನೆಯ ಕೀಲಿಕೈ? ವಿಶ್ಲೇಷಣೆ, ಅಂಕಿಅಂಶ, ವರದಿ

ಬೆಂಗಳೂರು, ಜನವರಿ 16: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನೇತೃತ್ವದ ಜೆಡಿಎಸ್‌ಗೆ ರಾಜಕೀಯ ಉಳಿವಿನ ಹೋರಾಟವಾಗಲಿದೆಯೇ ಅಥವಾ 2018 ರಲ್ಲಿ ನಡೆದಂತೆ ಮತ್ತೊಮ್ಮೆ ಕಿಂಗ್ ಮೇಕರ್ ಆಗಿ ಹೊರಹೊಮ್ಮುತ್ತದೆಯೇ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಪಕ್ಷಾಂತರಗಳು, ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಕುಟುಂಬ ರಾಜಕಾರಣದಲ್ಲಿ ಬಳಲುತ್ತಿರುವ ಜೆಡಿಎಸ್‌ನ ಎಲ್ಲ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರೇ ತೆಗೆದುಕೊಳ್ಳಬೇಕಿದೆ. ಜೆಡಿಎಸ್‌ನ ಒಳ ಸಮಸ್ಯೆಗಳನ್ನೂ ಅವರು ಏಕಾಂಗಿಯಾಗಿ ನಿಭಾಯಿಸಬೇಕಿದೆ. ಇದನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 ಸ್ವತಂತ್ರವಾಗಿ ಅಧಿಕಾರ ಹಿಡಿಯದ ಜೆಡಿಎಸ್‌

ಸ್ವತಂತ್ರವಾಗಿ ಅಧಿಕಾರ ಹಿಡಿಯದ ಜೆಡಿಎಸ್‌

1999 ರಲ್ಲಿ ಪಕ್ಷ ರಚನೆಯಾದಾಗಿನಿಂದ, ಜೆಡಿಎಸ್ ಎಂದಿಗೂ ಸ್ವಂತವಾಗಿ ಸರ್ಕಾರವನ್ನು ರಚಿಸಲಿಲ್ಲ. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳೊಂದಿಗೆ ಸಮ್ಮಿಶ್ರವಾಗಿ ಎರಡು ಬಾರಿ ಅಧಿಕಾರದಲ್ಲಿತ್ತು. ಫೆಬ್ರವರಿ 2006 ರಿಂದ 20 ತಿಂಗಳು ಬಿಜೆಪಿಯೊಂದಿಗೆ ಮತ್ತು ನಂತರ 14 ತಿಂಗಳು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದಿತ್ತು. ಮೇ 2018 ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು.

ಈ ಬಾರಿ ಮೇ ತಿಂಗಳೊಳಗೆ ಚುನಾವಣೆ ನಡೆಯಲಿದೆ. ಒಟ್ಟು 224 ಸ್ಥಾನಗಳಲ್ಲಿ ಕನಿಷ್ಠ 123 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಭರವಸೆಯನ್ನು ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ 'ಮಿಷನ್ 123' ಎಂಬ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಕನ್ನಡಿಗರ ಅಸ್ಮಿತೆಯ ಕುರಿತು ಕುಮಾರಸ್ವಾಮಿ ಪದೇ ಪದೇ ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ತಮ್ಮ ಪಕ್ಷವೊಂದೇ ಒಂದೇ ಕನ್ನಡಿಗರ ಪಕ್ಷ ಎಂದು ಪ್ರತಿಪಾದಿಸುತ್ತಿದ್ದಾರೆ.

 ಜೆಡಿಎಸ್‌ಗೆ ಸರ್ಕಾರ ರಚನೆಯ ಕೀಲಿಕೈ?

ಜೆಡಿಎಸ್‌ಗೆ ಸರ್ಕಾರ ರಚನೆಯ ಕೀಲಿಕೈ?

ಈ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪುವುದು ಜೆಡಿಎಸ್‌ಗೆ ಸಾಧ್ಯವಾಗದು ಎಂಬುದು ರಾಜಕೀಯ ವಿಶ್ಲೇಷಕರ ವಾದವಾಗಿದೆ. ಇದು ಪಕ್ಷದ ನಾಯಕರಿಗೆ ತಿಳಿದಿರುವ ವಿಚಾರವಾಗಿದೆ. ಏಕೆಂದರೆ 2004 ರ ವಿಧಾನಸಭಾ ಚುನಾವಣೆಯಲ್ಲಿ 58 ಸ್ಥಾನಗಳು ಮತ್ತು 2013 ರ ಚುನಾವಣೆಯಲ್ಲಿ 40 ಸ್ಥಾನಗಳನ್ನು ಜೆಡಿಎಸ್‌ ಗೆದ್ದುಕೊಂಡಿತ್ತು. ಇದು ಪಕ್ಷದ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ. ಇದು ಎರಡನೇ ಅತ್ಯುತ್ತಮವಾಗಿತ್ತು.

2018ರ ಚುನಾವಣೆಯಲ್ಲಿ ಜೆಡಿಎಸ್ 37 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ, ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಮತ್ತೊಮ್ಮೆ ಅಧಿಕಾರ ರಾಜಕಾರಣದಲ್ಲಿ ಕೈಚಳಕ ಬಳಸಿಬೇಕು. ಸರ್ಕಾರ ರಚನೆಯ ಕೀಲಿಕೈ ಹಿಡಿದು ಜೆಡಿಎಸ್ ಅಧಿಕಾರಕ್ಕೆ ಬರುಬೇಕು ಎಂಬ ನಿರೀಕ್ಷೆಯಲ್ಲಿ ಪಕ್ಷದ ಅಗ್ರ ಮುಖಂಡರು ಇದ್ದಾರೆ.

 ಕುಮಾರಣ್ಣ ಮತ್ತೊಮ್ಮೆ ಸಿಎಂ ಆಗುವ ನಿರೀಕ್ಷೆಯಲ್ಲಿ ಜೆಡಿಎಸ್‌

ಕುಮಾರಣ್ಣ ಮತ್ತೊಮ್ಮೆ ಸಿಎಂ ಆಗುವ ನಿರೀಕ್ಷೆಯಲ್ಲಿ ಜೆಡಿಎಸ್‌

ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಹೋದಾಗ, ನಾವು ಖಂಡಿತವಾಗಿಯೂ ನಮ್ಮ ಕುಮಾರಣ್ಣ ಅವರನ್ನು ಮುಖ್ಯಮಂತ್ರಿಯಾಗಬೇಕೆಂದು ಒತ್ತಾಯಿಸುತ್ತೇವೆ. ಆದರೆ ಕಳೆದ ಬಾರಿಯ ಕೆಟ್ಟ ಅನುಭವವಾಗಿದೆ. ಈ ಬಾರಿ ನಮ್ಮ ಆಯ್ಕೆ ಮತ್ತು ಸಂಭವನೀಯ ಮೈತ್ರಿ ಪ್ರಕ್ರಿಯೆಯಲ್ಲಿ ನಾವು ಹೆಚ್ಚು ಜಾಗರೂಕರಾಗಿರುತ್ತೇವೆ ಎಂದು ಹೆಸರು ಹೇಳಲು ಇಚ್ಛಿಸದ ಪದಾಧಿಕಾರಿಯೊಬ್ಬರು ಹೇಳಿದರು. 'ನಾವು 123 ಸ್ಥಾನಗಳನ್ನು ಗೆಲ್ಲದೇ ಹೋಗಬಹುದು. ಆದರೆ, ಪಕ್ಷವು ಈ ಬಾರಿ ಕಳೆದ ಸಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಶತಸಿದ್ಧ' ಎಂದು ಅವರು ಸಮರ್ಥಿಸಿಕೊಂಡರು.

 ಕುಂಠಿತಗೊಂಡ ಜೆಡಿಎಸ್‌ ಮತ ಪ್ರಮಾಣ

ಕುಂಠಿತಗೊಂಡ ಜೆಡಿಎಸ್‌ ಮತ ಪ್ರಮಾಣ

ಪಕ್ಷದ ಮತಗಳ ಪ್ರಮಾಣ ತೀವ್ರ ಮಟ್ಟದಲ್ಲಿ ಕುಗ್ಗದಿದ್ದರೂ ಕುಂಠಿತವಂತೂ ಆಗಿದೆ. ಇದು 18-20 ಪ್ರತಿಶತದ ನಡುವೆ ಓಲಾಡುತ್ತಿದೆ. ಪಕ್ಷವು ಗಣನೀಯ ಸಂಖ್ಯೆಯ ಕ್ಷೇತ್ರಗಳಲ್ಲಿ ತನ್ನ ಹಿಡಿತವನ್ನು ಮುಂದುವರೆಸುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಹಳೆಯ ಮೈಸೂರು ಪ್ರದೇಶದ ವೊಕ್ಕಲಿಗರ ಪ್ರಾಬಲ್ಯವಿರುವ ಜಾಗಗಳಲ್ಲಿ ಜೆಡಿಎಸ್‌ ಲಾಭ ಗಿಟ್ಟಿಸಿಕೊಂಡಿದೆ. 61 ಸ್ಥಾನಗಳನ್ನು (ಬೆಂಗಳೂರಿನ 28 ಕ್ಷೇತ್ರಗಳನ್ನು ಹೊರತುಪಡಿಸಿ) ಒಳಗೊಂಡಿರುವ ಹಳೆಯ ಮೈಸೂರು ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವ ಒಕ್ಕಲಿಗ ಸಮುದಾಯದ ಮೇಲೆ ದೇವೇಗೌಡ ಕುಟುಂಬದ ಹಿಡಿತವಿದೆ. ಈ ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಜೆಡಿಎಸ್‌ ಪ್ರಬಲ ಪೈಪೋಟಿ ನೀಡುವ ಪಕ್ಷವಾಗಿದೆ.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸಾಕಷ್ಟು ಪ್ರಬಲವಾಗಿದೆ. ಈ ಪ್ರದೇಶದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ ಸಾಂಪ್ರದಾಯಿಕ ಪ್ರತಿಸ್ಪರ್ಧಿಯಾಗಿದೆ. ಇಲ್ಲಿ ಬಿಜೆಪಿ ದುರ್ಬಲವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂದು ಬಿಜೆಪಿ ಆಶಿಸುತ್ತಿದೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತಮ್ಮ ಪಕ್ಷದ ನಾಯಕರಿಗೆ ಹಳೇ ಮೈಸೂರು ಪ್ರದೇಶದ ಮೇಲೆ ಹೆಚ್ಚು ಕೇಂದ್ರೀಕರಿಸುವಂತೆ ಕೇಳಿಕೊಂಡಿದ್ದರು.

 ರಾಜಕೀಯ ವಿಶ್ಲೇಷಕರ ವಾದವೇನು?

ರಾಜಕೀಯ ವಿಶ್ಲೇಷಕರ ವಾದವೇನು?

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ರಾಜಕೀಯ ವಿಶ್ಲೇಷಕ ಎ ನಾರಾಯಣ ಪ್ರಕಾರ, 'ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ನಂತರವೇ ಜೆಡಿಎಸ್ ಎಷ್ಟು ಪ್ರಬಲವಾಗಿದೆ ಅಥವಾ ದುರ್ಬಲವಾಗಿದೆ ಎಂಬುದನ್ನು ನಿರ್ಧರಿಸಬಹುದು. ಏಕೆಂದರೆ ಅದರ ಉಳಿವು ಇತರ ಪಕ್ಷಗಳಿಂದ ತಿರಸ್ಕರಿಸಲ್ಪಟ್ಟ ಪ್ರಬಲ ಆಕಾಂಕ್ಷಿಗಳ ಮೇಲೆ ನಿಂತಿದೆ. ಆ ಪ್ರಬಲ ಆಕಾಂಕ್ಷಿಗಳು ಜೆಡಿಎಸ್‌ನೊಂದಿಗೆ ಯಾವ ರೀತಿಯಲ್ಲಿ ಕೈಜೋಡಿಸಲಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

'ಇದು ಎರಡು ವಿಷಯಗಳನ್ನು ನಿರ್ಧರಿಸುತ್ತದೆ. ಜೆಡಿಎಸ್‌ಗೆ ಮತದಾನ ಮಾಡಲಿರುವ ಶೇಕಡಾವಾರು ಮತಗಳು ಮತ್ತು ಅವರು ಗೆಲ್ಲುವ ಸ್ಥಾನಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿದೆ. ಪ್ರಬಲ ಅಭ್ಯರ್ಥಿಗಳನ್ನು ಹೊಂದಿರದ ಕ್ಷೇತ್ರಗಳಲ್ಲಿ, ಇತರ ಪಕ್ಷಗಳಿಂದ ತಿರಸ್ಕಾರಗೊಂಡ ಆಕಾಂಕ್ಷಿಗಳ ಮೇಲೆ ಜೆಡಿಎಸ್ ಅವಲಂಬಿತವಾಗಲಿದೆ' ಎಂದು ಅವರು ಹೇಳಿದರು. .

'ಇದಲ್ಲದೆ, 2018 ಕ್ಕೆ ಹೋಲಿಸಿದರೆ ಹಳೆಯ ಮೈಸೂರಿನಲ್ಲಿ ಜೆಡಿಎಸ್ ಪ್ರಬಲವಾಗಿದೆಯೇ ಅಥವಾ ದುರ್ಬಲವಾಗಿದೆಯೇ ಎಂಬ ಪ್ರಶ್ನೆಯೂ ಇದೆ' ಎಂದು ಅವರು ಹೇಳಿದರು.

 ಜೆಡಿಎಸ್‌ ದುರ್ಬಲವಾಗಿರುವುದಕ್ಕೆ ಎರಡು ಕಾರಣಗಳು

ಜೆಡಿಎಸ್‌ ದುರ್ಬಲವಾಗಿರುವುದಕ್ಕೆ ಎರಡು ಕಾರಣಗಳು

'ಈಗ ಎರಡು ಕಾರಣಗಳಿಗಾಗಿ ಜೆಡಿಎಸ್‌ ದುರ್ಬಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಒಂದು 2018 ರಿಂದ ಹಲವು ಪ್ರಬಲ ನಾಯಕರು ಪಕ್ಷವನ್ನು ತೊರೆದು ಹೋಗಿದ್ದಾರೆ. ಎರಡನೆಯದಾಗಿ, ಒಕ್ಕಲಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಉತ್ತಮ ಕೆಲಸ ಮಾಡುತ್ತಿದೆ. ಇದಕ್ಕೆ ಕಾರಣ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಅವರೂ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಾರೆ' ಎಂದು ತಿಳಿಸಿದರು.

 ಸಿದ್ದರಾಮಯ್ಯ ಮೇಲೆ ಒಕ್ಕಲಿಗರ ಸಿಟ್ಟು

ಸಿದ್ದರಾಮಯ್ಯ ಮೇಲೆ ಒಕ್ಕಲಿಗರ ಸಿಟ್ಟು

2018ರ ಚುನಾವಣೆಯಲ್ಲಿ ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್‌ ಗೆದ್ದಿದ್ದು ಸಿದ್ದರಾಮಯ್ಯನವರ ಮೇಲಿನ ಒಕ್ಕಲಿಗ ಸಿಟ್ಟಿನಿಂದಲೇ ಎಂಬುದು ರಾಜಕೀಯ ವಿಶ್ಲೇಕರ ವಾದವಾಗಿದೆ. ಆ ಸಿಟ್ಟು ಈಗ ತಣ್ಣಗಾಗಿದೆಯೇ ಎಂಬುದು ತಿಳಿಯದ ಪ್ರಶ್ನೆಯಾಗಿ ಉಳಿದಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳಲಿದೆಯೇ ಎಂಬುದೂ ಯಕ್ಷಪ್ರಶ್ನೆಯಾಗಿದೆ.

ಅತೀಯಾದ ಕುಟುಂಬ ಕೇಂದ್ರಿತ ರಾಜಕಾರಣ ಜೆಡಿಎಸ್‌ನ ಪ್ರಮುಖ ನ್ಯೂನತೆಗಳಲ್ಲಿ ಒಂದಾಗಿದೆ ಎಂಬ ಅಭಿಪ್ರಾಯಗಳನ್ನೂ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.

 ಸಕ್ರಿಯ ರಾಜಕಾರಣದಲ್ಲಿ ಗೌಡರ ಕುಟುಂಬದ ಎಂಟು ಮಂದಿ

ಸಕ್ರಿಯ ರಾಜಕಾರಣದಲ್ಲಿ ಗೌಡರ ಕುಟುಂಬದ ಎಂಟು ಮಂದಿ

ಗೌಡರ ಕುಟುಂಬದ ಎಂಟು ಮಂದಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಜೆಡಿಎಸ್ ವರಿಷ್ಠರಾಗಿರುವ ಗೌಡರು ಕರ್ನಾಟಕದಿಂದ ರಾಜ್ಯಸಭಾ ಸದಸ್ಯರೂ ಆಗಿದ್ದರೆ, ಅವರ ಪುತ್ರ ಕುಮಾರಸ್ವಾಮಿ ಚನ್ನಪಟ್ಟಣದ ಮಾಜಿ ಸಿಎಂ ಮತ್ತು ಶಾಸಕರಾಗಿದ್ದಾರೆ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ರಾಮನಗರ ಕ್ಷೇತ್ರದ ಶಾಸಕಿಯಾಗಿದ್ದು, ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿರುವ ಅವರ ಪುತ್ರ ನಿಖಿಲ್ 2019 ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸೋತಿದ್ದರು. ಈಗ ರಾಮನಗರ ಕ್ಷೇತ್ರದ ವಿಧಾನಸಭೆಯ ಅಭ್ಯರ್ಥಿಯೂ ಆಗಿದ್ದಾರೆ. ದೇವೇಗೌಡರ ಹಿರಿಯ ಪುತ್ರ ಎಚ್‌ ಡಿ ರೇವಣ್ಣ ಹೊಳೆನರಸೀಪುರದ ಮಾಜಿ ಸಚಿವ ಮತ್ತು ಶಾಸಕರಾಗಿದ್ದರೆ, ಅವರ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಅವರ ಮಕ್ಕಳಾದ ಪ್ರಜ್ವಲ್ ಮತ್ತು ಸೂರಜ್ ಕ್ರಮವಾಗಿ ಹಾಸನದಿಂದ ಎಂಪಿ ಮತ್ತು ಎಂಎಲ್‌ಸಿಯಾಗಿದ್ದಾರೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಎಲ್ಲಾ ನಾಲ್ಕು ಪ್ರಮುಖ ಸಾರ್ವಜನಿಕ ಪ್ರತಿನಿಧಿಗಳ ಸದನಗಳಲ್ಲಿ ಗೌಡರ ಕುಟುಂಬವು ತನ್ನ ಪ್ರಾತಿನಿಧ್ಯವನ್ನು ಹೊಂದಿದೆ.

 ಕುಟುಂಬ ಕೇಂದ್ರಿತ ರಾಜಕೀಯದಿಂದ ಅಸಮಾಧಾನ

ಕುಟುಂಬ ಕೇಂದ್ರಿತ ರಾಜಕೀಯದಿಂದ ಅಸಮಾಧಾನ

ಕರ್ನಾಟಕದ ರಾಜಕೀಯದ ವೀಕ್ಷಕರಾಗಿರುವ ಲಂಡನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇಮ್ಸ್ ಮ್ಯಾನರ್ ಅವರು ಇತ್ತೀಚೆಗೆ ವೆಬ್‌ನಾರ್‌ನಲ್ಲಿ ಜೆಡಿಎಸ್‌ ಕುರಿತು ಮಾತನಾಡಿದ್ದಾರೆ. ಕುಟುಂಬ ಕೇಂದ್ರಿತ ರಾಜಕೀಯವು ಅಸಮಾಧಾನವನ್ನು ಉಂಟುಮಾಡುತ್ತದೆ. ನಾಯಕರು ಪಕ್ಷವನ್ನು ತ್ಯಜಿಸಲು ಕಾರಣವಾಗುತ್ತದೆ ಎಂದು ತಿಳಿಸಿದ್ದರು.

'ಅತಿಯಾದ ಕುಟುಂಬ ರಾಜಕಾರಣ ಮತ್ತು ಆಂತರಿಕ ಸರ್ವಾಧಿಕಾರಿ ನಾಯಕತ್ವದಿಂದ ಜೆಡಿಎಸ್‌ ಬಳಲುತ್ತಿದೆ' ಎಂದಿದ್ದರು. ಪಕ್ಷವು 'ಕುಟುಂಬ ಕೇಂದ್ರಿತ' ಎಂಬುದನ್ನು ಜನರು ಗ್ರಹಿಸಿದ್ದಾರೆ. ಒಕ್ಕಲಿಗ ಸಹ ನಾಯಕರು ಪಕ್ಷವನ್ನು ತೊರೆಯಲು ಇದು ಕಾರಣವಾಯಿತು ಎಂದು ಹೇಳಿದ್ದರು.

'2019 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಇದು ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ' ಎಂದರು.

ಕೆಲವು ರಾಜಕೀಯ ವೀಕ್ಷಕರ ಪ್ರಕಾರ, ಉತ್ತರ ಕರ್ನಾಟಕದ ಕೆಲವು ಆಯ್ದ ಕ್ಷೇತ್ರಗಳನ್ನು ಹೊರತುಪಡಿಸಿ, ಒಕ್ಕಲಿಗ ಪ್ರಾಬಲ್ಯದ ಹಳೆಯ ಮೈಸೂರು ಪ್ರದೇಶವನ್ನು ಮೀರಿ ಬೆಳೆಯಲು ಜೆಡಿಎಸ್ ಅಸಮರ್ಥವಾಗಿದೆ. ಇದು ಸಹ ಪಕ್ಷದ ಬಹುದೊಡ್ಡ ನ್ಯೂನತೆಯಾಗಿದೆ.

 ಕುಮಾರಸ್ವಾಮಿ ವಿಶ್ವಾಸವೇನು?

ಕುಮಾರಸ್ವಾಮಿ ವಿಶ್ವಾಸವೇನು?

ಆದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ತನ್ನ ಸಾಂಪ್ರದಾಯಿಕ ಹಳೆಯ ಮೈಸೂರು ಪ್ರದೇಶವನ್ನು ಮೀರಿ ಬೆಳೆದು ಕರ್ನಾಟಕದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ ಎಂದು ಕುಮಾರಸ್ವಾಮಿ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ಉಳಿವು ಮತ್ತು ಸಕ್ರಿಯ ನಾಯಕರ ಕೊರತೆಯ ನಡುವೆ, ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ 'ಪಂಚರತ್ನ ರಥ ಯಾತ್ರೆ' ಕೈಗೊಂಡಿದ್ದಾರೆ.

ಗುಣಮಟ್ಟದ ಶಿಕ್ಷಣ, ರೈತ ಕಲ್ಯಾಣ ಮತ್ತು ಉದ್ಯೋಗ ಸೇರಿದಂತೆ ಅಧಿಕಾರಕ್ಕೆ ಬಂದ ಮೇಲೆ ಜೆಡಿಎಸ್‌ ಜಾರಿಗೊಳಿಸಲು ಉದ್ದೇಶಿಸಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು 'ಪಂಚರತ್ನ' ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ವಿಧಾನಸಭಾ ಚುನಾವಣೆಗೆ ಈಗಾಗಲೇ 93 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಮುಂದಿನ 10 ದಿನಗಳಲ್ಲಿ 50-60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಿದೆ. 'ನಾನು ಹೊಸ ಮುಖಗಳಿಗೆ ಅವಕಾಶ ನೀಡಲು ಬಯಸುತ್ತೇನೆ. ಪಕ್ಷದಲ್ಲಿ ಎರಡನೇ ಸಾಲಿನ ನಾಯಕತ್ವವನ್ನು ನಿರ್ಮಿಸಲು ಬಯಸುತ್ತೇನೆ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+