Get Updates
Get notified of breaking news, exclusive insights, and must-see stories!
Live

ವಿಶ್ವಾಸಮತ ಯಾಚನೆ: ಸಿಎಂಗೆ ಗುಡುವು ಕೊಟ್ಟ ರಾಜ್ಯಪಾಲರು

Recommended Video

      Karnataka Assembly Live: ಮೈತ್ರಿ ಸರ್ಕಾರ ಉಳಿಯುತ್ತಾ? ಉರುಳುತ್ತಾ?

      ಬೆಂಗಳೂರು, ಜುಲೈ18: ಮೈತ್ರಿ ಸರ್ಕಾರ ಪತನದ ತುದಿಗೆ ಬಂದು ತಲುಪಿದೆ. ಇಂದು ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದು, ಸರ್ಕಾರ ಉಳಿಯುತ್ತದೆಯೋ? ಉರುಳುತ್ತದೆಯೋ? ನಿರ್ಧಾರವಾಗಲಿದೆ.

      ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರದ 15 ಶಾಸಕರು ರಾಜೀನಾಮೆ ನೀಡಿದ್ದಾರೆ, ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಹೀಗಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

      Karnataka Assembly floor test live updates

      ಮೇಲ್ನೋಟಕ್ಕೆ ಬಿಜೆಪಿಯು ಕೆಲವು ಶಾಸಕರ ಬೆಂಬಲವನ್ನು ಹೆಚ್ಚಿಗೆ ಹೊಂದಿದ್ದು, ಬಹುಮತವನ್ನು ಹೊಂದಿರುವಂತೆ ತೋರುತ್ತಿದೆ. ಆದರೆ ನಿನ್ನೆ ರಾತ್ರಿಯಷ್ಟೆ ರಾಮಲಿಂಗಾ ರೆಡ್ಡಿ ಅವರ ಅತೃಪ್ತತೆ ನಿವಾರಿಸಿ ಪಕ್ಷಕ್ಕೆ ವಾಪಸ್ ಕರೆದುಕೊಳ್ಳುವಂತೆ ಮಾಡಿರುವ ಮೈತ್ರಿ ನಾಯಕರು ತಾವು ಸುಲಭದಲ್ಲಿ ಸೋಲೊಪ್ಪಿಕೊಳ್ಳುವುದಿಲ್ಲವೆಂದು ಸೂಚ್ಯಗೊಳಿಸಿದ್ದಾರೆ.

      Jul 18, 2019, 9:56 pm IST

      ವಿಶ್ವಾಸಮತಯಾಚನೆ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿದರು. ಶುಕ್ರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತು ಪಡಿಸಿ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ನಿರ್ದೇಶನ ನೀಡಿದರು. ಈ ಕುರಿತು 3 ಪುಟಗಳ ಪತ್ರವನ್ನು ಬರೆದಿದ್ದಾರೆ.
      Jul 18, 2019, 6:27 pm IST

      ಕಾಂಗ್ರೆಸ್ ಸದಸ್ಯರು ಅಪೇಕ್ಷಿಸಿದ್ದಂತೆಯೇ ಇಂದಿನ ಕಲಾಪ ಕಾಲಹರಣದಲ್ಲಿ ಕಳೆದಿದೆ. ಕಾಂಗ್ರೆಸ್‌-ಜೆಡಿಸ್‌ಗೆ ಒಂದು ದಿನ ಹೆಚ್ಚಿನ ಕಾಲಾವಕಾಶ ದೊರೆತಂತಾಗಿದೆ.
      Jul 18, 2019, 6:25 pm IST

      ನಾಳೆ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದೆ. ನಾಳೆಯಾದರೂ ಕಲಾಪ ಸುಗಮವಾಗಿ ನಡೆದು, ವಿಶ್ವಾಸಮತ ಯಾಚನೆ ಆಗುತ್ತದೆಯೋ ಎಂದು ಕಾದು ನೋಡಬೇಕಿದೆ.
      Jul 18, 2019, 6:23 pm IST

      ನಮಗೆ ನ್ಯಾಯ ಸಿಗುವವರೆಗೂ ನಾವು ಸದನದಲ್ಲೇ ಉಳಿಯಲಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು. ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಐದೇ ನಿಮಿಷದಲ್ಲಿ ತಡೆದು, ಅನವಶ್ಯಕ ವಿಷಯವನ್ನು ಪ್ರಸ್ತಾಪ ಮಾಡಿ ಉದ್ದೇಶಪೂರ್ವಕವಾಗಿ ವಿಶ್ವಾಸಮತ ಯಾಚನೆ ವಿಳಂಬ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದರು.
      Jul 18, 2019, 6:21 pm IST

      ಸದನ ಪುನರರಾಂಭವಾಗುತ್ತಿದ್ದಂತೆ ಮತ್ತೆ ಆಡಳಿತ ಪಕ್ಷದ ಸದಸ್ಯರು ಗದ್ದಲ ಆರಂಭಿಸಿದ್ದಾರೆ. ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಅವರು ಸದನವನ್ನು ನಾಳೆಗೆ ಮುಂದೂಡಿದರು.
      Jul 18, 2019, 6:19 pm IST

      ಬಿಜೆಪಿಯ ನಮ್ಮೆಲ್ಲ ಶಾಸಕರು ರಾತ್ರಿ ವಿಧಾನಸೌಧದಲ್ಲೇ ಉಳಿಯುತ್ತೇವೆ ಎಂದು ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದರು. ಆಡಳಿತ ಪಕ್ಷದ ವಿರುದ್ಧ ಅಹೋರಾತ್ರಿ ಧರಣಿಯನ್ನು ಸದನದಲ್ಲಿ ಬಿಜೆಪಿ ನಡೆಸುವ ನಿರ್ಣಯ ತೆಗೆದುಕೊಂಡಿರುವ ಬಗ್ಗೆ ಬಿಎಸ್‌ವೈ ಹೇಳಿದರು.
      Jul 18, 2019, 6:16 pm IST

      ಸದನ ಪುನರರಾಂಭವಾಗುತ್ತಿದ್ದಂತೆ ಮತ್ತೆ ಆಡಳಿತ ಪಕ್ಷದ ಸದಸ್ಯರು ಗದ್ದಲ ಆರಂಭಿಸಿದ್ದಾರೆ.
      Jul 18, 2019, 5:49 pm IST

      ಗದ್ದಲ ಹೆಚ್ಚಾದ ಕಾರಣ ಸದನವನ್ನು ಹತ್ತು ನಿಮಿಷಗಳ ಕಾಲ ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಅವರು ಮುಂದೂಡಿದರು.
      Jul 18, 2019, 5:46 pm IST

      ಆಡಳಿತ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದರು. ಶ್ರೀಮಂತ ಪಾಟೀಲ್ ಅವರು ಆಸ್ಪತ್ರೆಯಲ್ಲಿ ಮಲಗಿರುವ ಚಿತ್ರಗಳನ್ನು ಪ್ರದರ್ಶಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಅವರ ಮನವಿಗೆ ಯಾರೂ ಪುರಸ್ಕಾರ ನೀಡಲಿಲ್ಲ.
      Jul 18, 2019, 5:42 pm IST

      ಆಡಳಿತ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ತಮ್ಮ ಕುರ್ಚಿಗಳಿಂದ ಎದ್ದು, ಶಾಸಕ ಶ್ರೀಮಂತ ಪಾಟೀಲ್ ಅವರು ಆಸ್ಪತ್ರೆಯಲ್ಲಿ ಮಲಗಿರುವ ಮತ್ತು ಬಿಜೆಪಿ ಸದಸ್ಯರು ಕೈ ಶಾಸಕರನ್ನು ವಿಮಾನ ನಿಲ್ದಾಣದಲ್ಲಿ ಕರೆದುಕೊಂಡು ಹೋಗುತ್ತಿರುವ ಚಿತ್ರಗಳನ್ನು ಪ್ರದರ್ಶಿಸಿದರು.
      Jul 18, 2019, 5:38 pm IST

      ವಿಶ್ವಾಸಮತ ಯಾಚನೆ ಚರ್ಚೆಗೆ ಬಿಜೆಪಿ ಸದಸ್ಯರು ಒತ್ತಾಯವನ್ನು ತೀವ್ರಗೊಳಿಸಿದ್ದಾರೆ. ಸಿಟಿ.ರವಿ, ಬೊಮ್ಮಾಯಿ, ಮಾಧುಸ್ವಾಮಿ, ಈಶ್ವರಪ್ಪ ಅವರುಗಳು ಸ್ಪೀಕರ್ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.
      Jul 18, 2019, 5:29 pm IST

      ಅಡ್ವೋಕೇಟ್ ಜನರಲ್ ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಎಜೆ ಅವರನ್ನು ಭೇಟಿಯಾಗಿ ಪಾಯಿಂಟ್ ಆಫ್ ಆರ್ಡರ್‌ ನಲ್ಲಿ ಉಲ್ಲೇಖಿತವಾದ ಸಾಂವಿಧಾನಿಕ ಸಮಸ್ಯೆಯ ಬಗ್ಗೆ ಸಲಹೆ ಪಡೆಯಲಿದ್ದಾರೆ.
      Jul 18, 2019, 5:28 pm IST

      ಸುರೇಶ್ ಕುಮಾರ್ ಅವರ ಮಾತಿಗೆ ಉತ್ತರಿಸಿದ ದಿನೇಶ್ ಗುಂಡೂರಾವ್ ಅವರು, ಸಿಎಂ ಅವರು ವಿಶ್ವಾಸಮತ ಯಾಚನೆ ಮಾಡುವುದಾಗಿ ಶುಕ್ರವಾರ ಹೇಳಿದ್ದರು, ಗುರುವಾರಕ್ಕೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಅಂದು ಸುಪ್ರೀಂಕೋರ್ಟ್ ತೀರ್ಪು ಇರಲಿಲ್ಲ, ಆದರೆ ಈಗ ತೀರ್ಪು ಇದೆ. ಈ ತೀರ್ಪಿನ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಎತ್ತಿದ್ದಾರೆ, ಅದಕ್ಕೆ ಉತ್ತರಕೊಂಡ ನಂತರ ವಿಶ್ವಾಸಮತ ಯಾಚನೆಗೆ ಹೋಗಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.
      Jul 18, 2019, 5:20 pm IST

      ಸದನಕ್ಕೆ ಸಂದೇಶ ಕಳಿಸುವ ಅಧಿಕಾರವನ್ನು ಸಂವಿಧಾನ ರಾಜ್ಯಪಾಲರಿಗೆ ನೀಡಿಲ್ಲ. ರಾಜ್ಯಪಾಲರು ಸದನದ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎಂದು ಸಚಿವ ಎಚ್‌.ಕೆ.ಪಾಟೀಲ್ ವಾದಿಸಿದರು.
      Jul 18, 2019, 5:17 pm IST

      ಕೃಷ್ಣಬೈರೇಗೌಡ ಹಾಗೂ ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರ ನಡುವೆ ಬಿರುಸಿನ ಚರ್ಚೆ ನಡೆಯುತ್ತಿದೆ. ಅಧಿಕಾರಕ್ಕಾಗಿ ಬಿಜೆಪಿಯವರು ರಾಜ್ಯಪಾಲರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೃಷ್ಣಬೈರೇಗೌಡ ಆರೋಪಿಸಿದರು. ಇದಕ್ಕೆ ಈಶ್ವರಪ್ಪ, ಜಗದೀಶ್ ಶೆಟ್ಟರ್ ವಿರೋಧ ವ್ಯಕ್ತಪಡಿಸಿದರು.
      Jul 18, 2019, 5:11 pm IST

      ಯಡಿಯೂರಪ್ಪ ಅವರು ಮಧ್ಯೆಪ್ರವೇಶಿಸಿ, ಆಡಳಿತ ಪಕ್ಷದವರು ಯಾರು ಮಾತನಾಡಬೇಕು ಎಲ್ಲರಿಗೂ ಅವಕಾಶ ಕೊಡಿ, ಮಧ್ಯರಾತ್ರಿ 12 ಗಂಟೆ ಆದರೂ ಪರವಾಗಿಲ್ಲ, ಆದರೆ ರಾಜ್ಯಪಾಲರ ಸಂದೇಶದಂತೆ ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಿ ಎಂದು ಯಡಿಯೂರಪ್ಪ ಅವರು ಹೇಳಿದರು.
      Jul 18, 2019, 5:09 pm IST

      ಅಟಾರ್ನಿ ಜನರಲ್ ಅವರನ್ನು ಭೇಟಿ ಮಾಡಿಲ್ಲ, ಅವರು ಬರುವುದು ಸ್ವಲ್ಪ ತಡವಾಗಿದೆ. ದೇಶವೇ ನಮ್ಮನ್ನು ನೋಡುತ್ತಿದೆ ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
      Jul 18, 2019, 5:05 pm IST

      ಸದನದಲ್ಲಿ ನನ್ನ (ಶಾಸಕ) ದನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿ ನಾವು ರಾಜ್ಯಪಾಲರ ಸಂದೇಶವನ್ನು ನೋಡಬೇಕಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
      Jul 18, 2019, 5:02 pm IST

      ರಾಜ್ಯಪಾಲರು ಸದನಕ್ಕೆ ಯಾವಾಗೆಲ್ಲಾ ಸೂಚನೆ ನೀಡಬಹುದು ಎಂದು ಎಚ್‌.ಕೆ.ಪಾಟೀಲ್ ಮತ್ತು ಕೃಷ್ಣಬೈರೇಗೌಡ ಅವರು ಕಲಾಪಕ್ಕೆ ಮಾಹಿತಿ ನೀಡಿದರು ಮತ್ತು ರಾಜ್ಯಪಾಲರು ಹೀಗೆ ಸೂಚನೆ ನೀಡುವಂತಿಲ್ಲ ಎಂದು ವಾದಿಸಿದರು.
      Jul 18, 2019, 4:59 pm IST

      ದಿನದ ಅಂತ್ಯಕ್ಕೆ ವಿಶ್ವಾಸಮತ ಸಾಬೀತು ಮಾಡಿರೆಂದು ರಾಜ್ಯಪಾಲರು ಸ್ಪೀಕರ್ ಅವರಿಗೆ ಸಂದೇಶ ರವಾನಿಸಿದ್ದಾರೆ.
      Jul 18, 2019, 4:11 pm IST

      ಬಿಜೆಪಿಯ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ ಕಾರಣ, ರಾಜ್ಯಪಾಲರ ಪ್ರತಿನಿಧಿಯಾಗಿ ಅಧಿಕಾರಿಯೊಬ್ಬರು ಬಂದು ಕಲಾಪ ವೀಕ್ಷಿಸಿ ವರದಿ ಪಡೆದುಕೊಂಡು ತೆರಳಿದ್ದಾರೆ. ರಾಜ್ಯಪಾಲರಿಗೆ ಅವರು ವರದಿ ಸಲ್ಲಿಸಲಿದ್ದಾರೆ.
      Jul 18, 2019, 3:56 pm IST

      ಸದನದಲ್ಲಿ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ವಿರುದ್ಧ ತೀವ್ರ ಆಕ್ಷೇಪ ಎತ್ತಿ ಗದ್ದಲ ಎಬ್ಬಿಸಿದರು. ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು ಅರ್ಧ ಗಂಟೆ ಕಾಲ ಮುಂದೂಡಿದರು.
      Jul 18, 2019, 3:49 pm IST

      ಬಿಜೆಪಿ ಸದಸ್ಯ ವಿ.ಸೋಮಣ್ಣ ಮಾತನಾಡಿ, ಅಜೆಂಡಾ ಬಿಟ್ಟು ಚರ್ಚೆ ಹೋಗುತ್ತಿದೆ. 'ನೀವು, ನಮ್ಮ ರಮೇಶ್ ಕುಮಾರ್ ಅಂತೆ ವರ್ತಿಸ ಬೇಕು' ಎಂದು ಸೋಮಣ್ಣ ಹೇಳಿದರು. ಸೋಮಣ್ಣ, 'ನಮ್ಮ ರಮೇಶ್ ಕುಮಾರ್' ಎಂದ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
      Jul 18, 2019, 3:47 pm IST

      ಶ್ರೀಮಂತ ಪಾಟೀಲ್ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಅವರ ಪ್ರಕ್ರಿಯೆ ಪಡೆದುಕೊಂಡು, ಅವರನ್ನು ಅಪಹರಿಸಿದ್ದಾರೋ ಅಥವಾ ಅವರಿಚ್ಛೆಯಂತೆ ಹೋಗಿದ್ದಾರೋ ಎಂದು ತಿಳಿದುಕೊಂಡು ನನಗೆ ವರದಿ ನೀಡಿ ಎಂದು ಗೃಹ ಸಚಿವರಿಗೆ ರಮೇಶ್ ಕುಮಾರ್ ಸೂಚನೆ ನೀಡಿದರು.
      Jul 18, 2019, 3:42 pm IST

      ಅಡ್ವೋಕೇಟ್ ಜನರಲ್ ಅವರು ನಾಲ್ಕು ಗಂಟೆಗೆ ಬರಲಿದ್ದಾರೆ. ಅವರೊಂದಿಗೆ ಚರ್ಚೆ ನಡೆಸಿ ಸಿದ್ದರಾಮಯ್ಯ ಅವರು ಎತ್ತಿರುವ ವಿಚಾರದ ಬಗ್ಗೆ ಸಲಹೆ ಪಡೆದು ತೀರ್ಪು ನೀಡುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
      Jul 18, 2019, 3:39 pm IST

      ಕಾಂಗ್ರೆಸ್‌ ಗೆ ಕೈ ಕೊಟ್ಟಿರುವ ಶ್ರೀಮಂತ ಪಾಟೀಲ್ ಅವರು ಸ್ಪೀಕರ್‌ ಅವರಿಗೆ ಪತ್ರ ಬರೆದಿದ್ದಾರೆ. ನನಗೆ ಹೃದಯಾಘಾತ ಸಮಸ್ಯೆ ಇರುವ ಕಾರಣ, ಮುಂಬೈನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ಎಂದು ಹಾಗಾಗಿ ಅಧಿವೇಶನಕ್ಕೆ ಬರುತ್ತಿಲ್ಲವೆಂದು ಹೇಳಿದ್ದಾರೆ.
      Jul 18, 2019, 3:36 pm IST

      ರವಿ ಅವರಿಗೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ, 'ಅಧಿಕಾರಕ್ಕೆ ಅಂಟಿಕೊಂಡು ಕೂತುಕೊಳ್ಳುವವನು ನಾನಲ್ಲ, ಆದರೆ ನಮ್ಮ ಶಾಸಕರನ್ನು ವ್ಯಾಪಾರ ಮಾಡಿ ಕೊಂಡುಕೊಳ್ಳಲಾಗುತ್ತಿದೆ, ಅದರ ಬಗ್ಗೆ ಇಲ್ಲಿ ಚರ್ಚೆ ಆಗಬೇಕು' ಎಂದು ಸಿಎಂ ಕುಮಾರಸ್ವಾಮಿ.
      Jul 18, 2019, 3:34 pm IST

      ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ, ಇವರ ಬಳಿ ಬಹುಮತ ಇಲ್ಲ ಅದಕ್ಕೆ ವಿಶ್ವಾಸಮತ ವಿಳಂಬ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಆಡಳಿತ ಪಕ್ಷದ ಮೇಲೆ ಹರಿಹಾಯ್ದರು.
      Jul 18, 2019, 3:29 pm IST

      ಅನಾರೋಗ್ಯದ ಎಂದು ಹೇಳಿದ ಶ್ರೀಮಂತ ಪಾಟೀಲ್ ಅವರು ರಾತ್ರೋರಾತ್ರಿ ಚೆನ್ನೈಗೆ ಹೋಗಿದ್ದಾರೆ, ಅಲ್ಲಿಂದ ಮುಂಬೈಗೆ ಹೋಗುತ್ತಾರೆ. ಆಸ್ಪತ್ರೆಯ ಹೊರಗೆ ಪೊಲೀಸ್ ಬಂದೋಬಸ್ತ್ ಇರಿಸಲಾಗಿದೆ ಇದೆಲ್ಲಾ ಸ್ಪಷ್ಟವಾಗಿ ತೋರಿಸುತ್ತದೆ ಬಿಜೆಪಿಯ ಕೈವಾಡ ಇದರ ಹಿಂದೆ ಎಂಬುದು ಸ್ಪಷ್ಟ ಎಂದು ದಿನೇಶ್ ಗುಂಡೂರಾವ್ ಹೇಳಿದರು.
      Jul 18, 2019, 3:26 pm IST

      ಶ್ರೀಮಂತ ಪಾಟೀಲ್ ಅವರು ಆರೋಗ್ಯವಾಗಿಯೇ ಇದ್ದರು, ಆದರೆ ಅವರನ್ನು ಬಿಜೆಪಿಯವರು ಉದ್ದೇಶಪೂರ್ವಕವಾಗಿ ಬಲವಂತದಿಂದ ಆಸ್ಪತ್ರೆಯಲ್ಲಿ ಮಲಗಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
      READ MORE

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+