ಆರ್.ಅಶೋಕ್ ಭವಿಷ್ಯ, ಸಂಖ್ಯಾಸಾಸ್ತ್ರವನ್ನು ಹೇಳುತ್ತಾರೆ: ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯ
"ಅವಾಂತರ, ಹಗರಣಗಳ ಹೊಲಸು ಮೆತ್ತಿಕೊಂಡಿರುವ ನೀವು, ನಮ್ಮನ್ನು 20 ಸೀಟಿಗೇ ಕಟ್ಟಿ ಹಾಕಬಲ್ಲಿರಾ?.. ʼ40% ನಾಯಕʼರಾದ ನಿಮ್ಮಲ್ಲಿ ಆ ಧಮ್ಮು ತಾಕತ್ತು ಇದೆಯಾ..? "
ಬೆಂಗಳೂರು, ಮಾರ್ಚ್ 16: ಮುಂಬರುವ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಪಕ್ಷಕ್ಕೆ 20 ಸ್ಥಾನಗಳು ಸಿಗುತ್ತವೆ ಎಂದು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅಶೋಕ್ ಸಾಹೇಬರು 'ವಿಜಯ ಸಂಕಲ್ಪ'ಕ್ಕೆ ಬದಲಾಗಿ 'ಸುಳ್ಳುಸಂಕಲ್ಪ' ಮಾಡಿಕೊಂಡೇ ರಾಜ್ಯವನ್ನು ಸುತ್ತುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಸನ್ಮಾಶ್ರೀ ಆರ್.ಅಶೋಕ್ ಅವರು ಭವಿಷ್ಯವನ್ನು, ಸಂಖ್ಯಾಸಾಸ್ತ್ರವನ್ನು ಹೇಳುತ್ತಾರೆ ಎಂದು ನನಗೆ ಗೊತ್ತಾಗಿದ್ದು ಈಗಲೇ. ಅವರಲ್ಲೂ ಒಬ್ಬರು 'ಕಾಲಜ್ಞಾನಿ', 'ಸಂಖ್ಯಾಜ್ಞಾನಿ' ಇದ್ದಾರೆನ್ನುವ ಸೋಜಿಗ ನನಗೆ ಬೆಕ್ಕಸ ಬೆರಗುಂಟು ಮಾಡಿದೆ. ಚುನಾವಣೆ ನಂತರ ತಮ್ಮ ದುಡಿಮೆಗೆ ದೋಖಾ ಇಲ್ಲ ಎನ್ನುವ ಆತ್ಮವಿಶ್ವಾಸ ಅಶೋಕ್ ಅವರಲ್ಲಿದೆ, ಸಂತೋಷ" ಎಂದು ವ್ಯಂಗ್ಯವಾಡಿದ್ದಾರೆ.

"ನಮ್ಮ ಜಾತ್ಯಾತೀತ ಜನತಾದಳ ಪಕ್ಷಕ್ಕೆ 20 ಸ್ಥಾನಗಳು ಬರುತ್ತವೆ ಎಂದು ಚಿಕ್ಕಬಳ್ಳಾಪುರದಲ್ಲಿ ಗಿಣಿಭವಿಷ್ಯ ಹೇಳಿರುವ ಅವರು, ತಮ್ಮ ಕರ್ನಾಟಕ ಬಿಜೆಪಿ ಅದೆಷ್ಟು ಸೀಟು ಗೆಲ್ಲುತ್ತದೆ ಎನ್ನುವುದನ್ನು ಹೇಳಲು ಮರೆತಿದ್ದಾರೆ! ಮರೆತಿದ್ದಾರೆಯೋ ಅಥವಾ ಬೇಕೆಂದೇ ಹೇಳಲಿಲ್ಲವೋ..? ಅವರೇ ಹೇಳಬೇಕು. ಎಷ್ಟೇ ಆಗಲಿ, ಅವರ ಜಾಣತನ ಜಗಜ್ಜಾಹೀರು!!" ಎಂದು ಟ್ವಿಟರ್ನಲ್ಲಿ ಆರ್ ಅಶೋಕ್ ವಿರುದ್ಧ ಲೇವಡಿ ಮಾಡಿದ್ದಾರೆ.
"ಅಶೋಕ್ ಸಾಹೇಬರು 'ವಿಜಯ ಸಂಕಲ್ಪ'ಕ್ಕೆ ಬದಲಾಗಿ 'ಸುಳ್ಳುಸಂಕಲ್ಪ' ಮಾಡಿಕೊಂಡೇ ರಾಜ್ಯವನ್ನು ಸುತ್ತುತ್ತಿದ್ದಾರೆ. ಅವರ 'ಸುಳ್ಳುಸಂಕಲ್ಪ ಯಾತ್ರೆ'ಗೆ ನನ್ನ ಶುಭಾಶಯಗಳು ಹಾಗೂ ಗಾಢ ಸಾಂತ್ವನಗಳು. ಆದರೆ, ಅವರ ಕಾಮಾಲೆ ಮನಸ್ಸಿನ, ಅದರ ಅರೆಬೆಂದ ಲೆಕ್ಕದ ಬಗ್ಗೆ ನನ್ನ ಅನುಕಂಪವಿದೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಕಂಡವರ ತಟ್ಟೆಯಲ್ಲಿ ನೊಣ ಹುಡುಕುವುದು ಬಿಜೆಪಿಗೆ ಅಂಟಿದ ಜಾಡ್ಯ ಮತ್ತು ಆಜನ್ಮಪರ್ಯಂತ ಬಂದಿರುವ ಚಾಳಿ" ಎಂದು ಕಿಡಿಕಾರಿದ್ದಾರೆ.
ಅಶೋಕ್ ಸಾಹೇಬರು 'ವಿಜಯ ಸಂಕಲ್ಪ'ಕ್ಕೆ ಬದಲಾಗಿ 'ಸುಳ್ಳುಸಂಕಲ್ಪ' ಮಾಡಿಕೊಂಡೇ ರಾಜ್ಯವನ್ನು ಸುತ್ತುತ್ತಿದ್ದಾರೆ. ಅವರ 'ಸುಳ್ಳುಸಂಕಲ್ಪ ಯಾತ್ರೆ'ಗೆ ನನ್ನ ಶುಭಾಶಯಗಳು ಹಾಗೂ ಗಾಢ ಸಾಂತ್ವನಗಳು. ಆದರೆ, ಅವರ ಕಾಮಾಲೆ ಮನಸ್ಸಿನ, ಅದರ ಅರೆಬೆಂದ ಲೆಕ್ಕದ ಬಗ್ಗೆ ನನ್ನ ಅನುಕಂಪವಿದೆ. 3/7
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 16, 2023
"ನಮ್ಮ ಪಕ್ಷ ಬಿಡೋರ ಮಾತು ಹಾಗಿರಲಿ, ನಿಮ್ಮ ಪಕ್ಷದಲ್ಲಿ ವಾರದೊಪ್ಪತ್ತಿನಿಂದ ನಿರಂತರವಾಗಿ ಕೇಳಿಬರುತ್ತಿರುವ ಅರುಣರಾಗ, ವಿಜಯನಾದ ಕಥನಗಳ ಕಥೆ ಎನು ಅಶೋಕ್ ಅವರೇ.. ? ನಿನ್ನೆ ದಿನ ನಿಮ್ಮ ಕೇಂದ್ರ ಗೃಹ ಸಚಿವರು ಅಮಿತ್ ಶಾ ಅವರು ಮಾಡಿದ ಪಂಚಾಯಿತಿ ಕಟ್ಟೆ ಪುರಾಣದ ಅಸಲಿಯೆತ್ತೇನು..? ಈ ಬಿಜೆಪಿಯ ಗೃಹಭಂಗದಿಂದ ಯಾರಿಗೆ ದುಃಖ..? ಯಾರಿಗೆ ʼಸಂತೋಷʼ..!? ಕೊಂಚ ಹೇಳಬಲ್ಲಿರಾ ಅಶೋಕ್ ಅವರೇ..?" ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಮುಂದುವರಿದು, "ಇಷ್ಟೆಲ್ಲಾ ಅವಾಂತರ, ಹಗರಣಗಳ ಹೊಲಸು ಮೆತ್ತಿಕೊಂಡಿರುವ ನೀವು, ನಮ್ಮನ್ನು 20 ಸೀಟಿಗೇ ಕಟ್ಟಿ ಹಾಕಬಲ್ಲಿರಾ?.. ʼ40% ನಾಯಕʼರಾದ ನಿಮ್ಮಲ್ಲಿ ಆ ಧಮ್ಮು ತಾಕತ್ತು ಇದೆಯಾ..? ಹಾಗಿದ್ದರೆ, ವಿಶ್ವವಂದ್ಯ ಪ್ರಧಾನಿಗಳು ಅಷ್ಟು ಬಿಡುವಾಗಿ ಕರ್ನಾಟಕಕ್ಕೆ ಪದೇಪದೆ ಓಡೋಡಿ ಬರುತ್ತಾರೇಕೆ..? ಅಮಿತ್ ಶಾರವರ ಅಪರಿಮಿತ ಭೇಟಿಗಳು ಯಾಕೋ..?? ಪಾಪ.. ನಿಮ್ಮ ಫಜೀತಿ!!" ಎಂದು ಛೇಡಿಸಿದ್ದಾರೆ.

"ಚುನಾವಣೆ ಆಗಲಿ, ಫಲಿತಾಂಶ ಬರಲಿ. ಓಡು ಮಗಾ, ಓಡು ಮಗಾ ಸರದಿ ಯಾರದ್ದೆನ್ನುವುದು ಜನಕ್ಕೇ ಗೊತ್ತಾಗುತ್ತದೆ. ಎಷ್ಟಾದರೂ ಓಡು ಮಗಾ ರೇಸ್ʼನಲ್ಲಿ ನಿಮ್ಮನ್ನು ಸರಿಗಟ್ಟುವ ವೀರರೂ ಶೂರರೂ ಕರ್ನಾಟಕದಲ್ಲಿ ಇದ್ದಾರೆಯೇ..? ʼಆಪರೇಷನ್ ಕಮಲಕಾಂಡʼದಲ್ಲಿ ನಿಮ್ಮದೂ ಒಂದು ತುಕ್ಕುಹಿಡಿದ ಅಧ್ಯಾಯವಿದೆಯಲ್ಲಾ..? ಸಾಮ್ರಾಟ್ ಅಶೋಕೂ ಮತ್ತು ಆಪರೇಷನ್ ಕಮಲವೂ.." ಎಂದು ಟೀಕಿಸಿದ್ದಾರೆ.












Click it and Unblock the Notifications