ಸಿದ್ದರಾಮಯ್ಯ ಕ್ಷೇತ್ರದ ಹುಡುಕಾಟದ ನಡುವೆಯೂ ಬಿಜೆಪಿ ಮಣಿಸಲು ಕೈ ರಣತಂತ್ರ
2023ರ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳಷ್ಟೆ ಬಾಕಿಯಿದೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ದಿನಕಳೆಯುತ್ತಿದ್ದಂತೆಯೇ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಲಿವೆ. ಇದುವರೆಗೆ ಎಲ್ಲ ರಾಜಕೀಯ ಪಕ್ಷಗಳು ತಮ್ಮದೇ ಆದ ರಾಜಕೀಯ ಆಟ ಆಡುತ್ತಾ ಬಂದಿದ್ದರೂ ಕೂಡ ಇನ್ಮುಂದೆ ನಡೆಯುವುದೇ ರಾಜಕೀಯದ ಅಸಲಿ ಆಟವಾಗಿದೆ.
ಈಗಾಗಲೇ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಿದೆ. ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ಗೆ ಚುರುಕು ಮುಟ್ಟಿಸಿ ಹೋಗಿದ್ದಾರೆ. ಅದರ ಜತೆ ಜತೆಗೆ ಕಾಂಗ್ರೆಸ್ ಬಿಜೆಪಿ ವಿರುದ್ಧ ಮಾಡುತ್ತಿರುವ ಆರೋಪಗಳು, ಅಭಿಯಾನಗಳು ಸಂಚಲನ ಮೂಡಿಸಿವೆ. ಪೇ ಸಿಎಂ ಮತ್ತು ಸೇ ಸಿಎಂ ಅಭಿಯಾನಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮುಜುಗರ ತರಿಸಿದ್ದಂತು ನಿಜ. ಇದರ ಜತೆ ಜತೆಗೆ ಕಾಂಗ್ರೆಸ್ ನಾಯಕರು ಗೆಲುವಿಗಾಗಿ ತಂತ್ರಗಳನ್ನು ಆರಂಭಿಸಿದ್ದಾರೆ.
ಆಪ್ತ ಸ್ನೇಹಿತ ಜನಾರ್ದನ ರೆಡ್ಡಿ ಪರ ಬ್ಯಾಟ್ ಬೀಸಿದ ಬಿ. ಶ್ರೀರಾಮುಲು
ಇತ್ತೀಚೆಗೆ ನಡೆದ ರಾಹುಲ್ ಗಾಂಧಿಯವರ ಐಕ್ಯತಾ ಯಾತ್ರೆಗೆ ಸೇರಿದ್ದ ಕಾರ್ಯಕರ್ತರು ಮತ್ತು ಜನರನ್ನು ನೋಡಿದ ನಾಯಕರು ರೋಮಾಂಚನಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದಾರೆ. ಜತೆಗೆ ಪಕ್ಷದಲ್ಲಿದ್ದ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ರಾಹುಲ್ ಗಾಂಧಿ ಅವರು ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಈ ನಡುವೆ ಮುನಿಸಿಕೊಂಡಿದ್ದ ಹಿರಿಯ ನಾಯಕ ಮುನಿಯಪ್ಪ ಅವರನ್ನು ಸಮಾಧಾನಿಸುವ ಕೆಲಸವೂ ನಡೆದಿದೆ.
ಡಿಕೆಶಿ-ಸಿದ್ದು ಪ್ರತ್ಯೇಕ ಯಾತ್ರೆ
ಇದೀಗ ಕಾಂಗ್ರೆಸ್ನ ಇಬ್ಬರು ದಿಗ್ಗಜ ನಾಯಕರಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವು ಒಗ್ಗಟ್ಟಾಗಿದ್ದೇವೆ. ಇದೆಲ್ಲ ವಿರೋಧ ಪಕ್ಷಗಳ ಸುಳ್ಳು ಆರೋಪ ಎಂದು ಹೇಳುತ್ತಲೇ ಇಬ್ಬರು ನಾಯಕರು ಪಕ್ಷ ಸಂಘಟನೆಗೆ ಇಳಿದಿದ್ದಾರೆ. ಆದರೆ ಇವರಿಬ್ಬರು ನಾಯಕರು ಒಟ್ಟಾಗಿ ಹೋಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರತ್ಯೇಕವಾಗಿ ಸಮಾವೇಶಗಳನ್ನು, ಯಾತ್ರೆಗಳನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯಗೆ ಕ್ಷೇತ್ರದ ಸಮಸ್ಯೆ
ಕಾಂಗ್ರೆಸ್ನಲ್ಲಿ ಸಾಮಾನ್ಯವಾಗಿ ಘಟಾನುಘಟಿ ನಾಯಕರೆಲ್ಲರಿಗೂ ತಮ್ಮದೇ ಆದ ಭದ್ರವಾಗಿ ನೆಲೆಯೂರಿದ ಕ್ಷೇತ್ರಗಳಿವೆ. ತಮ್ಮ ಕ್ಷೇತ್ರದಲ್ಲಿ ಪ್ರಭಾವ ಬೀರಿರುವುದಲ್ಲದೆ, ಪಕ್ಷದ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಮಟ್ಟಿಗೆ ಸಾಮರ್ಥ್ಯ ಹೊಂದಿದ ನಾಯಕರಿದ್ದಾರೆ. ಆದರೆ ಈಗ ಸಮಸ್ಯೆ ಉದ್ಭವಿಸಿರುವುದು ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಎಂದರೆ ತಪ್ಪಾಗಲಾರದು. ತಮ್ಮ ವರುಣ ಕ್ಷೇತ್ರವನ್ನು ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಡುವ ಮೂಲಕ ಪುತ್ರನನ್ನು ರಾಜಕೀಯಕ್ಕೆ ಎಳೆದು ತಂದ ಸಿದ್ದರಾಮಯ್ಯ ಅವರು ತಾವು ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಬಹುದೆಂದು ನಂಬಿದ್ದರು.
ಐದಾರು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಒತ್ತಾಯ
ಯಾವಾಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮಗಿಂತಲೂ ಹೆಚ್ಚು ಪ್ರಭಾವವನ್ನು ಜೆಡಿಎಸ್ನ ಶಾಸಕ, ಒಕ್ಕಲಿಗ ಸಮುದಾಯದ ನಾಯಕ ಜಿ.ಟಿ.ದೇವೇಗೌಡರು ಹೊಂದಿದ್ದಾರೆ ಎಂಬುದು ಕಳೆದ ಚುನಾವಣೆಯಲ್ಲಿ ಸಾಬೀತಾದ ಬಳಿಕ ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುವುದು ಎಂಬುದೇ ಸಿದ್ದರಾಮಯ್ಯ ಅವರಿಗೆ ಸವಾಲ್ ಆಗಿ ಪರಿಣಮಿಸಿದೆ. ಮೇಲುನೋಟಕ್ಕೆ ರಾಜ್ಯದಲ್ಲಿ ಐದಾರು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಜನ ಒತ್ತಾಯಿಸುತ್ತಿದ್ದಾರೆ. ಇನ್ನೂ ಎಲ್ಲಿಂದ ಸ್ಪರ್ಧೆ ಮಾಡಬೇಕೆಂದು ತೀರ್ಮಾನ ಮಾಡಿಲ್ಲ ಎಂಬುದಾಗಿ ಸಿದ್ದರಾಮಯ್ಯ ಅವರು ಹೇಳುತ್ತಿದ್ದರೂ ಕೂಡ. ಅಷ್ಟು ಸುಲಭವಾಗಿ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗದ ಮಾತಾಗಿದೆ.
ಕೊಲಾರದಿಂದ ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರ
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕೋಲಾರದಲ್ಲಿ ಕುರುಬ ಸಮುದಾಯದ ಮತದಾರರು ಹೆಚ್ಚಿದ್ದು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತದಾರರು ಕೈಹಿಡಿದರೆ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಇರುವುದರಿಂದ ಆ ಕ್ಷೇತ್ರದತ್ತ ಒಲವಿದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೂ ಸಿದ್ದರಾಮಯ್ಯ ಅವರು ಮಾತ್ರ ಯಾವುದನ್ನೂ ದೃಢಪಡಿಸಿಲ್ಲ. ಆದರೆ ಸಿದ್ದರಾಮಯ್ಯ ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಕೂಡ ಅಲ್ಲಿ ಭಾರೀ ಪೈಪೋಟಿ ನಡೆಯುವುದಂತು ಖಚಿತ. ಕೊನೆಗಳಿಗೆಯಲ್ಲಿ ಅವರನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ಬಿದ್ದು ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ತಂತ್ರ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ.
ರಾಜಕೀಯ ಪ್ರಚಾರದ ವೇಳೆ ಮೂರು ಪಕ್ಷಗಳ ನಾಯಕರು ತಮ್ಮದೇ ಗೆಲುವು ಎಂಬಂತೆ ಬೀಗುತ್ತಿದ್ದಾರೆ. ಜತೆಗೆ ಮ್ಯಾಜಿಕ್ ಸಂಖ್ಯೆಯನ್ನು ಮೀರಿ ಗೆಲುವಿನ ವಿಶ್ವಾಸ ತೋರುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಮತದಾರರನ್ನು ಸೆಳೆಯಲು ಏನೆಲ್ಲ ತಂತ್ರಗಳನ್ನು ಬಳಸಬಹುದೋ ಅದೆಲ್ಲವನ್ನು ಮೂರು ಪಕ್ಷಗಳು ಮಾಡುತ್ತಿವೆ. ಜತೆಗೆ ನಾಯಕರ ಬಾಯಿಯಿಂದ ಎಲ್ಲೆ ಮೀರಿದ ಮಾತುಗಳು ಹೊರಬರುತ್ತಿವೆ. ದಿನಕಳೆದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಲಿದ್ದು, ಅಸಲಿ ಆಟ ಶುರುವಾಗಲಿದೆ. ಆದರೆ ರಾಜಕೀಯ ನಾಯಕರು ಎಷ್ಟೇ ಅಬ್ಬರಿಸಿದರೂ ಅವರ ಭವಿಷ್ಯ ನಿರ್ಧಾರ ಮಾಡುವವರು ಮತದಾರರು ಎಂಬುದನ್ನು ಮರೆಯುವಂತಿಲ್ಲ.