Kiccha Sudeep: ಕಿಚ್ಚ ಸುದೀಪ್ಗೆ ಕಾಂಗ್ರೆಸ್ ಗಾಳ: ರಮ್ಯಾ ಮೂಲಕ ರಾಜಕೀಯಕ್ಕೆ ಕರೆತರಲು ಕೈ ಕಸರತ್ತು
ಬೆಂಗಳೂರು, ಜ. 10: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದು ಚರ್ಚೆಗಳನ್ನು ಆರಂಭಿಸಿವೆ. ಇದರ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಅವರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬ ವರದಿಗಳು ಬಹಿರಂಗವಾಗಿವೆ.
ವಿಧಾನಸಭಾ ಚುನಾವಣೆ ಇನ್ನೇರಡು ತಿಂಗಳಲ್ಲಿ ನಡೆಯಲಿದ್ದು, ಬಿಜೆಪಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಮತ್ತು ಕಾಂಗ್ರೆಸ್ಗೆ ಮತ್ತೆ ಅಧಿಕಾರ ಪಡೆಯುವ ಕನಸುಗಳಿವೆ. ಇಬ್ಬರ ನಡುವೆ ಕಿಂಗ್ ಮೇಕರ್ ಆಗುವ ಪ್ರಯತ್ನದಲ್ಲಿ ಜೆಡಿಎಸ್ ಇದೆ.
31 ಗೋವು ದತ್ತು ಪಡೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್
ಹೀಗಾಗಿ ನಟ ಸುದೀಪ್ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡರೇ ಪಕ್ಷಕ್ಕೆ ಆನೆ ಬಲ ಬರಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರು ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಕಾತುರದಲ್ಲಿದ್ದಾರೆ. ನಟಿ ರಮ್ಯಾ ಅವರ ಮೂಲಕ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ.
ನಟ ಸುದೀಪ್ ವಾಲ್ಮೀಕಿ ಸಮುದಾಯದವರಾಗಿದ್ದು, ರಾಜ್ಯ ಮೀಸಲಾತಿಯಲ್ಲಿ ಈ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿ ಬಿಜೆಪಿ ಸಮುದಾಯದ ಒಲೈಕೆ ಮಾಡಿಕೊಂಡಿದೆ. ಇದು ಕಾಂಗ್ರೆಸ್ ಭಾರಿ ಮುಳುವಾಗುವ ಅಂಶ. ಇದನ್ನು ಸರಿದೂಗಿಸಲು ನಟ ಕಿಚ್ಚ ಸುದೀಪ್ ಅವರನ್ನು ಕಣಕ್ಕೆ ಇಳಿಸಿದರೇ ಈ ಸಮುದಾಯದ ಮತಗಳು ಕಾಂಗ್ರೆಸ್ ಪಾಲಾಗಬಹುದು ಎಂಬ ವಿಚಾರದಲ್ಲಿದ್ದಾರೆ ಕಾಂಗ್ರೆಸ್ ನಾಯಕರು.
ಈ ಬಗ್ಗೆ ಈಗಾಗಲೇ ಸ್ಯಾಂಡಲ್ವುಡ್ ಕ್ವೀನ್, ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಅವರು ನಟ ಸುದೀಪ್ ಅವರನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಕಿಚ್ಚ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಕೈ ಹಿಡಿಯುತ್ತಾರಾ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಆದರೆ, ಇತ್ತಿಚೇಗೆ ನಟ ಸುದೀಪ್ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದನ್ನು ಗಮನಿಸಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಸುಧಾಕರ್ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು. ಇದು ಕೂಡ ಬಿಜೆಪಿಗೆ ಎಸ್ಟಿ ಮತಗಳನ್ನು ಸೆಳೆಯುವಲ್ಲಿ ವರದಾನವಾಗಿ ಕಾರ್ಯನಿರ್ವಹಿಸಬಹುದು.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಟ ಕಿಚ್ಚ ಸುದೀಪ ಅವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ನಾಯಕರು ಯೋಜಿಸಿದ್ದಾರೆ. ನಟ ಸುದೀಪ್ ಕೈ ಹಿಡಿದು ರಾಜಕೀಯಕ್ಕೆ ಎಂಟ್ರಿಯಾದರೇ ಈ ಬಾರಿಯ ವಿಧಾನಸಭಾ ಚುನಾವಣೆಗೆ ತಾರಾ ಮೆರುಗು ಬರುವುದರಲ್ಲಿ ಸಂಶಯವಿಲ್ಲ.