2018ರ ಚುನಾವಣೆ, ಪಕ್ಷಾಂತರ ಮಾಡಲಿರುವ ಶಾಸಕರ ಪಟ್ಟಿ!
Recommended Video

ಬೆಂಗಳೂರು, ನವೆಂಬರ್ 17 : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ 6 ತಿಂಗಳು ಬಾಕಿ ಉಳಿದಿದೆ. ಈಗಾಗಲೇ ವಿವಿಧ ಪಕ್ಷಗಳಲ್ಲಿ ಪಕ್ಷಾಂತರದ ಪರ್ವ ಆರಂಭವಾಗಿದೆ. ಹಾಲಿ ಶಾಸಕರು ಸಹ ಪಕ್ಷಾಂತರ ಮಾಡಲು ಸಜ್ಜಾಗಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಕುಡಚಿ ಕ್ಷೇತ್ರದ ಪಿ.ರಾಜೀವ್ ಬಿಎಸ್ಆರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಜೆಡಿಎಸ್ ಪಕ್ಷದ ಆರು ಶಾಸಕರು ಪಕ್ಷದಿಂದ ಅಮಾನತುಗೊಂಡಿದ್ದು, ಕಾಂಗ್ರೆಸ್ ಸೇರುವುದು ಖಚಿತವಾಗಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವು ಹಾಲಿ ಶಾಸಕರು ಬೇರೆ-ಬೇರೆ ಪಕ್ಷಗಳ ಕಡೆ ವಲಸೆ ಹೋಗುವ ಸಾಧ್ಯತೆ ಇದೆ. ಪಕ್ಷೇತರ ಶಾಸಕರು ಇದಕ್ಕೆ ಹೊರತಾಗಿಲ್ಲ, ಕುಂದಾಪುರ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾ ಶೆಟ್ಟಿ ಬಿಜೆಪಿ ಸೇರಲಿದ್ದಾರೆ.
ಕಾಂಗ್ರೆಸ್ ಶಾಸಕರಾದ ಡಾ.ಎ.ಬಿ.ಮಾಲಕ ರೆಡ್ಡಿ, ಮಾಲೀಕಯ್ಯ ಗುತ್ತೇದಾರ್ ಪಕ್ಷ ತೊರೆಯುವುದು ಖಚಿತವಾಗಿದೆ. ಅಂಬರೀಶ್ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಮಂಡ್ಯದಿಂದ ಬೆಂಗಳೂರಿಗೆ ತಲುಪಿದೆ. ಯಾವ ಶಾಸಕರು ಪಕ್ಷಾಂತರ ಮಾಡಲಿದ್ದಾರೆ? ಚಿತ್ರಗಳಲ್ಲಿ ವಿವರಗಳು...

ಬಿಜೆಪಿ ಸೇರಲಿದ್ದಾರೆ ಪುಟ್ಟಣ್ಣ
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಜೆಡಿಎಸ್ ತೊರೆಯುವುದು ಬಹುತೇಕ ಖಚಿತವಾಗಿದೆ. ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರ ಉಳಿದಿರುವ ಪುಟ್ಟಣ್ಣ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, 'ಡಿಸೆಂಬರ್ 25ರ ನತರ ನಿರ್ಧಾರ ಪ್ರಕಟಿಸುತ್ತೇನೆ' ಎಂದು ಹೇಳಿದ್ದಾರೆ.

ಡಾ.ಎ.ಬಿ.ಮಾಲಕ ರೆಡ್ಡಿ ಬಿಜೆಪಿಗೆ?
ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಎ.ಬಿ.ಮಾಲಕ ರೆಡ್ಡಿ ಅವರು 'ನಿಮ್ಮ ಆಡಳಿತ ಅವಧಿಯಲ್ಲಿ ಆಗಿರುವ ಅವಮಾನ ಸಾಕು. ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಹೋಗುವೆ' ಎಂದು ಸಿದ್ದರಾಮಯ್ಯ ಮುಂದೆಯೇ ಹೇಳಿಕೆ ನೀಡಿದ್ದು, ಕಾಂಗ್ರೆಸ್ ತೊರೆಯಲಿದ್ದಾರೆ. ಅವರು ಬಿಜೆಪಿ ಸೇರಬಹುದು ಎಂಬುದು ಸದ್ಯದ ಸುದ್ದಿ.

ಶಾಸಕ ಮಾಲೀಕಯ್ಯ ಗುತ್ತೇದಾರ್
ಅಫಜಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಪಕ್ಷ ತೊರೆಯಲಿದ್ದಾರೆ. ಸಚಿವ ಸ್ಥಾನಕ್ಕಾಗಿ ಹಲವಾರು ಬಾರಿ ಪ್ರಯತ್ನ ನಡೆಸಿದ ಅವರು, ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಯಾವ ಪಕ್ಷ ಸೇರಲಿದ್ದಾರೆ? ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಜೆಡಿಎಸ್ ಸೇರಲಿದ್ದಾರೆ ಅಂಬರೀಶ್?
ಮಂಡ್ಯ ಕ್ಷೇತ್ರದ ಶಾಸಕ ಮತ್ತು ಮಾಜಿ ವಸತಿ ಸಚಿವ ಅಂಬರೀಶ್ ಜೆಡಿಎಸ್ ಸೇರಲಿದ್ದಾರೆ? ಎಂಬ ಸುದ್ದಿ ಮಂಡ್ಯ ರಾಜಕೀಯ ವಲಯದಲ್ಲಿ ಹಬ್ಬಿದೆ. ಕೆಲವರು ಇದನ್ನು ನಿರಾಕರಿಸಿದ್ದಾರೆ. ಮಂಡ್ಯದಲ್ಲಿ ಹರಿದಾಡುತ್ತಿದ್ದ ಈ ಸುದ್ದಿ ಬೆಂಗಳೂರು ತನಕವೂ ಬಂದು ತಲುಪಿದೆ.

ಕಾಂಗ್ರೆಸ್ ಸೇರಲಿದ್ದಾರೆ ಜಮೀರ್
ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಅವರು ಕಾಂಗ್ರೆಸ್ ಸೇರಲಿದ್ದಾರೆ.

ಜೆಡಿಎಸ್ ನಿಂದ ಅಮಾನತುಗೊಂಡಿದ್ದಾರೆ
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಜಮೀರ್ ಅಹಮದ್ ಖಾನ್ ಅವರ ಜೊತೆ ಇವರೂ ಡಿಸೆಂಬರ್ ಅಂತ್ಯದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.












Click it and Unblock the Notifications