ರಾಜ್ಯ ರಾಜಕೀಯದಲ್ಲಿ ಅಸಲಿ ಆಟ ಶುರು: ಗೆಲ್ಲುವ ಕುದುರೆಗೆ ಡಿಮ್ಯಾಂಡ್!
ರಾಜ್ಯ ರಾಜಕೀಯ ಕದನ ಕುತೂಹಲ ಘಟ್ಟ ತಲುಪಲಿದೆ. ಇಲ್ಲಿವರೆಗೆ ರಾಜ್ಯದಲ್ಲಿ ನಡೆದಿದ್ದು ಮತ್ತು ಮುಂದೆ ನಡೆಯುವುದು ಬೇರೆ ಬೇರೆಯಾಗಲಿದ್ದು, ಗೆಲ್ಲುವ ಕುದುರೆಗೆ ಹುಡುಕಾಟ ನಡೆಯುತ್ತಿದೆ.
ಬೆಂಗಳೂರು, ಮಾರ್ಚ್ 17: ರಾಜ್ಯ ರಾಜಕೀಯದಲ್ಲಿ ಅಸಲಿ ಆಟ ಶುರುವಾಗಬೇಕಾದರೆ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಾಗಿದೆ. ಆ ನಂತರ ರಾಜಕೀಯ ಕದನ ಕುತೂಹಲ ಘಟ್ಟ ತಲುಪಲಿದೆ. ಇಲ್ಲಿವರೆಗೆ ರಾಜ್ಯದಲ್ಲಿ ನಡೆದಿದ್ದು ಮತ್ತು ಮುಂದೆ ನಡೆಯುವುದು ಬೇರೆ ಬೇರೆಯಾಗಲಿದ್ದು, ಗೆಲ್ಲುವ ಕುದುರೆಗೆ ಹುಡುಕಾಟ ನಡೆಯುತ್ತಿದೆ.
2023ರ ವಿಧಾನಸಭಾ ಚುನಾವಣೆ ರಾಜ್ಯದ ಆಡಳಿತ ರೂಢ ಬಿಜೆಪಿ ಮತ್ತು ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ಗೆ ಪ್ರತಿಷ್ಠೆಯಾಗಿದೆ. ಹೀಗಾಗಿ ಕಳೆದೊಂದು ವರ್ಷದಿಂದ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೂರು ಪಕ್ಷಗಳು ಪ್ರಚಾರ, ಸಮಾವೇಶ, ಪ್ರತಿಭಟನೆ ಹೀಗೆ ಸದಾ ಒಂದಲ್ಲ ಒಂದು ರೀತಿಯ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲೂ ಕಳೆದ ಆರು ತಿಂಗಳಿನಿಂದ ಇದು ತಾರಕಕ್ಕೇರಿದೆ.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಪ್ರಾದೇಶಿಕ ಪಕ್ಷಗಳದ್ದೇ ಪ್ರಾಬಲ್ಯವಿದ್ದು, ಕರ್ನಾಟಕ ಹೊರತು ಪಡಿಸಿದರೆ ಉಳಿದ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ಆದ್ದರಿಂದ ಬೇರೆ ರಾಜ್ಯಗಳಲ್ಲಿ ಅಧಿಕಾರ ಪಡೆಯುವುದು ಕಷ್ಟವಾಗಿರುವ ದಿನಗಳಲ್ಲಿ ಕರ್ನಾಟಕದಲ್ಲಿ ಮಾತ್ರ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ಅಧಿಕಾರದ ಗದ್ದುಗೆ ಹಿಡಿಯುವ ಭರವಸೆಯಿರುವುದು. ಹೀಗಾಗಿ ಇದೆರಡು ಪಕ್ಷಗಳಿಗೆ ಕರ್ನಾಟಕ ಪ್ರತಿಷ್ಠೆಯ ಕಣವಾಗಿದೆ.

ರಾಜ್ಯದತ್ತ ಆಮ್ ಆದ್ಮಿ ಪಕ್ಷದ ಚಿತ್ತ
ರಾಜ್ಯಕ್ಕೊಂದು ಪ್ರಭಾವಿ ಪ್ರಾದೇಶಿಕ ಪಕ್ಷ ಬೇಕೆನ್ನುವ ಅಭಿಪ್ರಾಯ ಜನವಲಯದಲ್ಲಿದೆ. ಆದರೆ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಇನ್ನೂ ಕೂಡ ರಾಜ್ಯದಾದ್ಯಂತ ಗಟ್ಟಿಯಾಗಿ ನೆಲೆಯೂರಿಲ್ಲ. ರಾಜ್ಯದ ಕೆಲವು ಭಾಗಗಳಲ್ಲಿ ಅದರಲ್ಲೂ ಹಳೇ ಮೈಸೂರು ಹೊರತುಪಡಿಸಿ ಉತ್ತರ ಕರ್ನಾಟಕದ ಭಾಗದಲ್ಲಿ ಸದೃಢವಾಗಿಲ್ಲ. ಜೊತೆಗೆ ಪಕ್ಷದಲ್ಲಿದ್ದ ಒಂದಷ್ಟು ನಾಯಕರು ಗುಳೆಹೋಗುತ್ತಿರುವುದು, ಜೊತೆಗೆ ಕುಟುಂಬ ರಾಜಕಾರಣದ ಆರೋಪಗಳಿರುವುದು ಪಕ್ಷಕ್ಕೆ ಒಂದಿಷ್ಟು ಹಿನ್ನಡೆಯಾಗಿದೆ.
ಇದೆಲ್ಲದರ ನಡುವೆ ಜೆಡಿಎಸ್ ಪಕ್ಷ ಯಾವಾಗ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತದೆ ಎಂಬುದನ್ನು ಹೇಳಲಾಗುತ್ತಿಲ್ಲ. ಹೀಗಾಗಿ ಮತದಾರರು ಕೂಡ ಪಕ್ಷದ ಮೇಲೆ ಸಂಪೂರ್ಣವಾಗಿ ನಂಬಿಕೆಯಿಡಲಾರದ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಈ ಬಾರಿ ಎಎಪಿ ಪಕ್ಷವೂ ಕರ್ನಾಟಕದತ್ತ ದೃಷ್ಟಿ ನೆಟ್ಟಿದೆ. ಈಗಾಗಲೇ ದೆಹಲಿ ಮತ್ತು ಪಂಜಾಬ್ ನಲ್ಲಿ ಅಧಿಕಾರ ಹಿಡಿದಿರುವ ಪಕ್ಷ ರಾಜ್ಯದಲ್ಲಿ ಒಂದಷ್ಟು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಇನ್ನೊಂದಷ್ಟು ಕ್ಷೇತ್ರಗಳಲ್ಲಿ ಎಸ್ ಡಿಪಿಐ, ಬಿಎಸ್ ಪಿಯೂ ಸ್ಪರ್ಧೆ ಮಾಡಲಿದೆ. ಇದರಿಂದ ಒಂದಷ್ಟು ಮತಗಳು ವಿಭಜನೆಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. y

ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು
ಬಹಳಷ್ಟು ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಕೆಲವು ನಾಯಕರು ತಮ್ಮ ಕ್ಷೇತ್ರಕ್ಕೆ ಫಿಕ್ಸ್ ಆಗಿದ್ದಾರೆ. ಅವರು ಹಲವು ವರ್ಷಗಳಿಂದ ಗೆಲ್ಲುತ್ತಾ ಬರುತ್ತಿದ್ದು ಅವರನ್ನು ಅಲುಗಾಡಿಸಲಾಗದ ಪರಿಸ್ಥಿತಿಯಲ್ಲಿ ಮೂರು ಪಕ್ಷಗಳಿವೆ. ಅವರು ತಮ್ಮ ಸ್ಥಾನವನ್ನು ಎರಡನೇ ಹಂತದ ನಾಯಕರಿಗೆ ಬಿಟ್ಟುಕೊಡುವ ಮನಸ್ಥಿತಿಯಲ್ಲಿಲ್ಲ. ಬದಲಿಗೆ ತಮ್ಮ ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ತರುವ ಲೆಕ್ಕಾಚಾರದಲ್ಲಿದ್ದಾರೆ. ಇದು ಕೇವಲ ಒಂದು ಪಕ್ಷದ ಕಥೆಯಲ್ಲ. ಎಲ್ಲ ಪಕ್ಷದಲ್ಲಿಯೂ ಈ ಸಮಸ್ಯೆಯಿದೆ.
ಈಗಾಗಲೇ ಬಿಜೆಪಿ ಗುಜರಾತ್ ಮಾದರಿಯ ಬಗ್ಗೆ ಮಾತನಾಡುತ್ತಿದೆ. ಅಲ್ಲಿನ ಪ್ರಯೋಗ ಬಿಜೆಪಿಗೆ ಗೆಲುವು ತಂದುಕೊಟ್ಟಿರುವುದು ನಿಜವೂ ಹೌದು. ಆದರೆ ಮೊದಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿ ಬೀಸುತ್ತಿರುವ ಈ ವೇಳೆಯಲ್ಲಿ ಅಂತಹ ನಿರ್ಧಾರ ಬಿಜೆಪಿ ಹೈಕಮಾಂಡ್ ಮಾಡಿದರೆ ಶ್ಲಾಘನೀಯ ಕಾರ್ಯವಾಗಬಹುದು. ಆದರೆ ಹಾಗೆ ಮಾಡುವ ಧೈರ್ಯ ಹೈಕಮಾಂಡ್ ಇದೆಯಾ? ಮೂರು ಬಾರಿಗಿಂತಲೂ ಹೆಚ್ಚು ಸ್ಪರ್ಧಿಸಿ ಗೆಲುವು ಕಂಡಿರುವ ನಾಯಕರನ್ನು ಬದಲಾಯಿಸುವ ಮತ್ತು ವಯಸ್ಸಾದವರನ್ನು ಚುನಾವಣಾ ಕಣದಿಂದ ಹೊರಗಿಡುವ ಕೆಲಸಕ್ಕೆ ಕೈ ಹಾಕಿದರೆ ಬಹಳಷ್ಟು ಕ್ಷೇತ್ರಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಇದರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ.

ಬಿಜೆಪಿ ನಾಯಕರಿಗೆ ಪಕ್ಷಾಂತರದ ಸವಾಲ್
ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಎಬ್ಬಿಸಿರುವ ಕಾಂಗ್ರೆಸ್ ಅದನ್ನು ಜನಕ್ಕೆ ತಲುಪಿಸುವಲ್ಲಿ ಸಫಲವಾಗಿದೆ. ಹೀಗಿರುವಾಗ ಅಮಿತ್ ಶಾ, ಮೋದಿ, ನಡ್ಡಾ ಹೀಗೆ ಹಲವು ನಾಯಕರು ರಾಜ್ಯಕ್ಕೆ ಬಂದು ಹೋದರೂ ಮೇಲ್ನೋಟಕ್ಕೆ ಪ್ರಯೋಜನವಾದಂತೆ ಕಾಣುತ್ತಿಲ್ಲ. ಆಪರೇಷನ್ ಕಮಲಕ್ಕೆ ಪ್ರತ್ಯಾಸ್ತ್ರವಾಗಿ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಹೀಗಾಗಿ ಪಕ್ಷದ ನಾಯಕರನ್ನು ಹಿಡಿದಿಟ್ಟುಕೊಳ್ಳುವುದು ಬಿಜೆಪಿ ನಾಯಕರಿಗೆ ಸವಾಲ್ ಆಗಿ ಪರಿಣಮಿಸಿದೆ.
40ಪರ್ಷೆಂಟ್ ಕಮೀಷನ್ ಆರೋಪ ರಾಜ್ಯ ಸರ್ಕಾರವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಜತೆಗೆ ಕಾಂಗ್ರೆಸ್ ಮತದಾರರಿಗೆ ನೀಡುತ್ತಿರುವ ಆಶ್ವಾಸನೆ ಜನಪ್ರಿಯವಾಗುತ್ತಿದೆ. ಹೀಗಿರುವಾಗ ಬಿಜೆಪಿ ಗೆಲುವು ನಮ್ಮದೇ ಎಂದು ಪಕ್ಷದ ಕಾರ್ಯಕ್ರಮಗಳಲ್ಲಿ ಅಬ್ಬರಿಸುತ್ತಿದ್ದರೂ ಒಳಗೊಳಗೆ ಭಯವಂತು ಇದ್ದೇ ಇದೆ. ಭಾವನಾತ್ಮಕ, ಧರ್ಮಾಧಾರಿತ ಮತಗಳನ್ನು ಸೆಳೆಯುವುದು ಕಷ್ಟ ಎಂದರಿತ ಕೇಂದ್ರ ನಾಯಕರು ಇದೀಗ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದಾರೆ.

ಆಡಳಿತ ವಿರೋಧಿ ಅಲೆ ಎಬ್ಬಿಸಿದ ಕಾಂಗ್ರೆಸ್
ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯನ್ನು ಎಬ್ಬಿಸುವಲ್ಲಿ ಯಶಸ್ವಿಯಾಗಿದ್ದರೂ ಅದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ಹೇಳಲಾಗದು. ಒಂದಷ್ಟು ಪಕ್ಷಗಳು ರಾಜ್ಯದಲ್ಲಿ ಸ್ಪರ್ಧಿಸುತ್ತಿದ್ದು ಅವು ಕಾಂಗ್ರೆಸ್ ಮತಗಳನ್ನೇ ಸೆಳೆದರು ಅಚ್ಚರಿಯಿಲ್ಲ. ಎಸ್ ಡಿಪಿಐ ಅಲ್ಪಸಂಖ್ಯಾತರ, ಬಿಎಸ್ ಪಿ ಹಿಂದುಳಿದ ಮತ್ತು ದಲಿತರ ಮತದತ್ತ ಟಾರ್ಗೆಟ್ ಮಾಡುತ್ತಿರುವುದರಿಂದ ಅದು ಕಾಂಗ್ರೆಸ್ಗೆ ಮುಳುವಾದರೂ ಅಚ್ಚರಿಯಿಲ್ಲ.
ಈ ಬಾರಿ ಗೆಲುವು ಮೂರು ಪಕ್ಷಗಳಿಗೆ ಅಗತ್ಯವಾಗಿರುವುದರಿಂದ ಕೊನೆಗಳಿಗೆಯಲ್ಲಿ ಎಲ್ಲ ಸಿದ್ಧಾಂತಗಳನ್ನು ಬದಿಗೆ ಸರಿಸಿ ಗೆಲ್ಲುವ ಕುದುರೆಯ ಬಾಲ ಹಿಡಿಯುವುದಂತು ನಿಜ. ಅದು ಏನೇ ಇರಲಿ ಮುಂದೆ ನಡೆಯುವ ರಾಜಕೀಯದ ದೊಂಬರಾಟಕ್ಕೆ ವೇದಿಕೆಯಂತು ಸಿದ್ಧವಾಗುತ್ತಿದೆ.












Click it and Unblock the Notifications