ದಿವ್ಯಾಂಗರಿಗೆ 5.86 ಲಕ್ಷ ಯುಡಿಐಡಿ ವಿತರಣೆಯಲ್ಲಿ ಕರ್ನಾಟಕ ಸಾಧನೆ
ಬೆಂಗಳೂರು, ನವೆಂಬರ್ 22: ರಾಜ್ಯ ಸರ್ಕಾರದಿಂದ ವಿಶೇಷ ಚೇತನರಿಗೆ ನೀಡುವ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ)ಯನ್ನು ಈವರೆಗೆ 5.86 ಲಕ್ಷ ದಿವ್ಯಾಂಗರಿಗೆ ನೀಡುವ ಮೂಲಕ ಕರ್ನಾಟಕ ಅದ್ಭುತ ಸಾಧನೆ ಮಾಡಿದೆ. ದಿವ್ಯಾಂಗರು ಕೂಡಲೇ ಈ ಕಾರ್ಡಿಗಾಗಿ ಹೆಸರು ನೋಂದಾಯಿಸಿಕೊಳ್ಳಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮಂಗಳವಾರ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಯುಡಿಐಡಿ ಕಾರ್ಡ್ ವಿತರಣೆ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಸಚಿವರು, ವಿಕಲಚೇತನರ ಸಬಲೀಕರಣ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ, ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ನೀಡಲಾಗುತ್ತಿದೆ.
ಈ ಪೈಕಿ ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ವಿಶಿಷ್ಟ ಗುರುತಿನ ಕಾರ್ಡ್ಗಳು ವಿತರಣೆಯಾಗಿವೆ. ಚಿಕ್ಕಮಗಳೂರು ಎರಡನೇ ಸ್ಥಾನದಲ್ಲಿದ್ದು, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಹಾಗೂ ಮಂಡ್ಯ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ ಎಂದು ಸಚಿವರು ತಿಳಿಸಿದರು. ಇದಕ್ಕೆ ಕಾರಣರಾದ ಈ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಅಭಿನಂದಿಸಿದರು.
ವಿಕಲಚೇತನರ ನೋಂದಣಿ ಕಡ್ಡಾಯ
ವಿಶೇಷ ಚೇತನರು ಕಡ್ಡಾಯವಾಗಿ ಯುಡಿಐಡಿ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಒಮ್ಮೆ ಲಾಗಿನ್ ಆದ ನಂತರ ಯುಡಿಐಡಿ ಕಾರ್ಡ್ ಪಡೆಯಬಹುದಾಗಿದೆ. ಇದು ಸರ್ಕಾರಗಳ ಅನೇಕ ಉಪಯುಕ್ತ ಸೌಲಭ್ಯಗಳನ್ನು ನೆರವಾಗಲಿದೆ. ಯುಡಿಐಡಿ ಕಾರ್ಡ್ನಿಂದ ಬ್ಲಾಕ್ ಮತ್ತು ಜಿಲ್ಲಾ ಮಟ್ಟ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಎಲ್ಲಾ ಹಂತದ ಅನುಷ್ಠಾನ ಶ್ರೇಣಿಯಲ್ಲಿ ಫಲಾನುಭವಿಯ ಸೌಲಭ್ಯಗಳನ್ನು ಟ್ರ್ಯಾಕ್ ಮಾಡಲಾಗುವುದು. ಕಟ್ಟ ಕಡೆಯ ವಿಶೇಷಚೇತನರಿಗೂ ಯುಡಿಐಡಿ ಕಾರ್ಡ್ಗಳನ್ನು ವಿತರಿಸುವುದೇ ಸರ್ಕಾರದ ಗುರಿ ಆಗಿದೆ. ಇದಕ್ಕಾಗಿ ಎಲ್ಲಾ ವಲಯಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಶೇ.2.21 ರಷ್ಟು ವಿಶೇಷ ಚೇತನರಿದ್ದಾರೆ
ಯುಡಿಐಡಿ ನೋಂದಣಿಗೆ ಮೊದಲು ವಿಕಲ ಚೇತನರಲ್ಲಿ 7 ಬಗೆಯ ನ್ಯೂನತೆಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ 2016ರ ಆರ್.ಪಿ.ಡಬ್ಲ್ಯೂ.ಡಿ ಕಾಯ್ದೆಗೆ ತಿದ್ದುಪಡಿ ತಂದ ನಂತರ 21 ರೀತಿಯ ನ್ಯೂನತೆಗಳನ್ನು ಗುರುತಿಸಲಾಗಿದೆ. ವಿಶೇಷಚೇತನರ ವೈಯಕ್ತಿಕ ಮತ್ತು ದೈಹಿಕ ನ್ಯೂನತೆಗಳ ಬಗ್ಗೆ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಶೈಕ್ಷಣಿಕ, ಉದ್ಯೋಗ ವಿವರಗಳನ್ನು ಸಹ ಒಳಗೊಂಡಿವೆ.
ಒಟ್ಟು ಶೇ.40 ರಷ್ಟು ದೈಹಿಕ ನ್ಯೂನತೆ ಹೊಂದಿರುವವರನ್ನು ವಿಶೇಷ ಚೇತನರು ಎಂದು ಗುರುತಿಸಲಾಗುತ್ತಿದೆ. 2011 ರ ಜನಗಣತಿ ವರದಿಯಂತೆ, ದೇಶದಲ್ಲಿ ಶೇ.2.21 ರಷ್ಟು ಮಂದಿ ಇಂತಹ ಸಮಸ್ಯೆಗಳನ್ನು ಹೊಂದಿದವರಾಗಿದ್ದಾರೆ. ಇವರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಲು ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಅವರು ವಿವರಿಸಿದರು.