ಕರ್ನಾಟಕಕ್ಕೆ 3 ದಿನ 'ಹೀಟ್ ವೇವ್-ಯೆಲ್ಲೋ ಅಲರ್ಟ್' ಘೋಷಣೆ: 4 ದಿನ ಮಳೆ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 03: ಕರ್ನಾಟಕ ರಾಜ್ಯದಲ್ಲಿ ಸದ್ಯಕ್ಕೆ ಬಿಸಿಲಿನ ಧಗೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ರಾಜ್ಯದಲ್ಲಿ ವಾಡಿಕೆಗಿಂತ ಅತೀ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ನಾಳೆ ಗುರುವಾರ ಏಪ್ರಿಲ್ 4ರಿಂದ ಮೂರು ದಿನಗಳ ಕಾಲ ಬಿಸಿಲಿನ ವ್ಯಾಪಕವಾಗಿ ಏರಿಕೆ ಆಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು 'ಶಾಖದ ಅಲೆಯ ಯೆಲ್ಲೋ ಅಲರ್ಟ್' ಘೋಷಣೆ ಮಾಡಿ 05 ಜಿಲ್ಲೆಗಳ ಜನರಿಗೆ ಶಾಕ್ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆ ವಾಡಿಕೆಗಿಂತ ಶೇಕಡಾ 1-3 ಡಿಗ್ರಿ ಸೆಲ್ಸಿಯಸ್ ನಷ್ಟು ಅಧಿಕ ಉಷ್ಣಾಂಶ ಕಂಡು ಬರುತ್ತಿದೆ. ಆದರೆ ಇದೀಗ ವಾಡಿಕೆಗಿಂತಲೂ 2-4 ರಷ್ಟು ಹೆಚ್ಚು ತಾಪಮಾನ ದಾಖಲಾಗುತ್ತಿದೆ.

ಈ ಜಿಲ್ಲೆಗಳಿಗೆ 'ಹೀಟ್ವೇವ್ ಯೆಲ್ಲೋ ಅಲರ್ಟ್'
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ ಮತ್ತು ವಿಜಯಪುರ ಸೇರಿ ಈ 05 ಜಿಲ್ಲೆಗಳಿಗೆ ನಾಳೆಯಿಂದ ಮೂರು ದಿನಗಳ (ಏಪ್ರಿಲ್ 4-6) ಕಾಲ ಶಾಖದ ಅಲೇ ವಿಪರೀತವಾಗಿರಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಅಷ್ಟು ದಿನ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಈ ಜಿಲ್ಲೆಗಳ ಜನರು ಹೊರ ಬರುವಾಗ ಎಚ್ಚರಿಕೆ ವಹಿಸಬೇಕಿದೆ.
ಉತ್ತರ ಒಳನಾಡಿನ ಈ 05 ಜಿಲ್ಲೆಗಳು ಮಾತ್ರವಲ್ಲದೇ ಹಾವೇರಿ, ಧಾರವಾಡ, ಬೆಳಗಾವಿ, ರಾಯಚೂರು, ವಿಜಯನಗರ ಸೇಇದಮತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚು ತಾಪಮಾನ ಸಹಿತ ಒಣಹವೆ ಕಂಡು ಬರುತ್ತಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲೂ ಅಧಿಕ ಬಿಸಿಲು ಕಂಡು ಬರಲಿದೆ.
4 ದಿನ ವ್ಯಾಪಕ ಮಳೆ ಮುನ್ಸೂಚನೆ
ಉರಿ ಬಿಸಿಲಿನ ಆರ್ಭಟ ತಗ್ಗಿದ ಮಾರನೇ ದಿನದಿಂದಲೇ ಅಂದರೆ ಏಪ್ರಿಲ್ 07ರಿಂದ ಏಪ್ರಿಲ್ 10ರವರೆಗೆ ನಾಲ್ಕು ದಿನಗಳ ಕಾಲ ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ವಿವಿಧೆಡೆ ವ್ಯಾಪಕ ಮಳೆ ಬರುವ ಮುನ್ಸೂಚನೆ ಇದೆ.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು, ಬಾಗಲಕೋಟೆ, ಬೀದರ್, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಮೂರು ದಿನ ಮಳೆ ಬರುವ ನಿರಿಕ್ಷೆ ಇದೆ. ಧಾರವಾಡ, ಗದಗ ಹಾವೇರಿ ಸೇರಿದಂತೆ ಒಂದೆರಡು ಜಿಲ್ಲೆಗಳಲ್ಲಿ ಒಂದು ದಿನ ಮಾತ್ರ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
06 ಜಿಲ್ಲೆಗಳಲ್ಲಿ ಅತೀ ಗರಿಷ್ಠ ತಾಪಮಾನ ದಾಖಲು
ರಾಜ್ಯದ ಅತೀ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 42.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯಪುರ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಚಿಕ್ಕನಹಳ್ಳಿಯಲ್ಲಿ ತಲಾ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ 8 ಗಂಟೆನಂತರವೇ ಬಿಸಿಲಿನ ಆರ್ಭಟ ಶುರುವಗುತ್ತದೆ. ಮಧ್ಯಾಹ್ನ 11ಗಂಟೆಯಿಂದ ಸಂಜೆ 5 ಗಂಟೆವೆರೆಗೂ ಮನೆ, ಕಚೇರಿಯಿಂದ ಹೊರಗೆ ಕಾಲಿಡದಂತ ಸ್ಥಿತಿ ನಿರ್ಮಾಣವಾಗಿದೆ.
ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಹೆಚ್ಚಾಗುತ್ತಿದೆ. ಹಗಲು ಹೆಚ್ಚಿನ ಶಾಖದ ಅಲೆ ಅನುಭವಿಸಿದರೆ, ರಾತ್ರಿ ಬೆಚ್ಚಗಿನ ವಾತಾವರಣ ಎದುರಿಸುತ್ತಿದ್ದಾರೆ. ತಂಪು ವಾತಾವರಣ ಮರೆಯಾಗಿದ್ದು, ಜನರಿಗೆ ಕಿರಿ ಕಿರಿ ಉಂಟಾಗುತ್ತಿದೆ.












Click it and Unblock the Notifications