ಕರವೇಯಿಂದ ಕನ್ನಡ ವಿವಿ ಉಳಿಸಿ, ಭಿತ್ತಿಪತ್ರ ಚಳವಳಿ, ಅಭಿಪ್ರಾಯ
ಕರ್ನಾಟಕ ರಕ್ಷಣಾ ವೇದಿಕೆಯು ನಡೆಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಸುವ ಆಂದೋಲನದ ಅಂಗವಾಗಿ ಭಿತ್ರಿಪತ್ರ ಚಳವಳಿಯನ್ನು ಹಮ್ಮಿಕೊಂಡಿದೆ. ಈ ಚಳವಳಿಗೆ ಮೊದಲ ದಿನವೇ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಶೋಧನಾ ಕ್ಷೇತ್ರದ ಗಣ್ಯರು ವ್ಯಾಪಕವಾಗಿ ಬೆಂಬಲಿಸಿದ್ದು, ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡವಿವಿಉಳಿಸಿ ಎಂಬ ಟ್ವಿಟರ್ ಅಭಿಯಾನ ನಡೆಸಿದ್ದಷ್ಟೇ ಅಲ್ಲದೆ, ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದ ನಿಯೋಗ ಉಪಮುಖ್ಯಮಂತ್ರಿ ಹಾಗು ಉನ್ನತಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಅವರನ್ನು ಭೇಟಿಯಾಗಿ ಹಂಪಿ ಕನ್ನಡ ವಿವಿಗೆ ಅಗತ್ಯ ಅನುದಾನ ಒದಗಿಸುವುದರ ಜತೆಗೆ, ವಿಶ್ವವಿದ್ಯಾಲಯ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಬೇಕೆಂದು ಒತ್ತಾಯಿಸಿದ್ದರು.
ಕನ್ನಡ ವಿವಿ ಉಳಿಸಿ ಹ್ಯಾಶ್ಟ್ಯಾಗ್ ಟ್ವಿಟ್ಟರ್ನಲ್ಲಿ ಫುಲ್ ಟ್ರೆಂಡಿಂಗ್
ಸಚಿವರು ಕೂಡಲೇ ಅನುದಾನ ನೀಡುವ ಭರವಸೆ ನೀಡಿದರೂ ಸಹ, ನಾಲ್ಕು ದಿನಗಳಾದರೂ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದಿನಿಂದ 'ಭಿತ್ತಿಪತ್ರ' ಚಳವಳಿ ಹಮ್ಮಿಕೊಂಡಿದೆ.
ಸಾವಿರಾರು ಕರವೇ ಕಾರ್ಯಕರ್ತರು ಗಣ್ಯರ ಹೇಳಿಕೆಗಳ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡರು.
ಪ್ರೊ, ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯ
ವಿಶ್ವಜ್ಞಾನವನ್ನು ಕನ್ನಡದಲ್ಲಿ ತಂದು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಂಬಂಧದ ವಿವೇಕವನ್ನು ವಿಸ್ತರಿಸಬೇಕಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನವನ್ನು ನೀಡದ ಇರುವ ನಡೆಯು ಕನ್ನಡ ಪರಂಪರೆಯ ಪ್ರಜ್ಞೆಗೆ ಮಾಡುವ ಅವಮಾನ, ಅಷ್ಟೇ ಅಲ್ಲ. ಆಳುವ ವರ್ಗವು ತನಗೆ ತಾನೇ ಮಾಡಿಕೊಳ್ಳುವ ಅವಮಾನ. ಕೂಡಲೇ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅವಮಾನದಿಂದ ಬಿಡುಗಡೆ ಹೊಂದಬೇಕೆಂದು ಒತ್ತಾಯಿಸುತ್ತೇನೆ. ಅನುದಾನ ಬಿಡುಗಡೆಯು ಆದ್ಯತೆಯ ಕೆಲಸವಾಗಬೇಕು. ಅನುಷ್ಠಾನವಾಗಬೇಕು. ಸಂವೇದನಾಶಿಲ ಸ್ವಾಭಿಮಾನವೂ ಅಧ್ಯಯನ ಪರ ಅಭಿಮಾನವೂ ಆಗಬೇಕು.
ಡಾ. ಸಿಎಸ್ ದ್ವಾರಕನಾಥ್ ಅವರು ಏನೆಂದರು
ಕನ್ನಡದ ಜಾನಪದ, ಇತಿಹಾಸ, ಪರಂಪರೆಗಳೊಂದಿಗೆ ಈ ನೆಲಮೂಲದ ಆದಿವಾಸಿ, ಅಲೆಮಾರಿಗಳಂತಹ ತಬ್ಬಲಿ ತಳಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ, ಸಂಶೋಧನೆ ಕುರಿತಂತೆ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಡುವ ಮಹತ್ವದ ಕೆಲಸ ಮಾಡುತ್ತಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದೆ ನಿರ್ಲಕ್ಷಿಸುತ್ತಿರುವುದು ಅಕ್ಷಮ್ಯ. ಇದು ಕನ್ನಡಕ್ಕೆ ಮಾಡುತ್ತಿರುವ ದ್ರೋಹ ಮಾತ್ರವಲ್ಲ, ಕನ್ನಡ ನಾಡು, ನುಡಿ, ಜನತೆಗೆ ಮಾಡುತ್ತಿರುವ ದ್ರೋಹ. ಸರ್ಕಾರಕ್ಕೆ ಕನ್ನಡ ನಾಡಿನ ಬಗ್ಗೆ ಕನಿಷ್ಟ ಕಾಳಜಿ, ಗೌರವವಿದ್ದರೆ ಒಂದು ಕ್ಷಣವೂ ತಡಮಾಡದೆ ಕನ್ನಡ. ವಿ.ವಿ.ಗೆ ಅನುದಾನ ಬಿಡುಗಡೆ ಮಾಡಬೇಕು.
ಸಂಸ್ಕೃತಿ ಚಿಂತಕರ ಅಭಿಪ್ರಾಯ
ಕನ್ನಡ ವಿವಿ ಕನ್ನಡ ಅಸ್ಮಿತೆಯನ್ನು ಕಟ್ಟುವ ಕೆಲಸದ ಒಂದು ಭಾಗ. ಕನ್ನಡ ಸಂಸ್ಕೃತಿಯ ಪರಂಪರೆಯ ಸಂಶೋಧನೆ ಹಾಗೂ ವರ್ತಮಾನದ ಚಿಂತನೆ ನಡೆಸುವುದಕ್ಕಾಗಿ, ದೇಸೀ ಜ್ಞಾನ ಕೋಶವನ್ನು ನಿರ್ಮಿಸುವುದಕ್ಕಾಗಿ ಇರುವ ಕನ್ನಡ ವಿವಿಗೆ ಅನುದಾನದ ಕೊರತೆಯುಂಟಾಗಿರುವುದು ಖಂಡನೀಯ. ಕನ್ನಡ ವಿವಿ ಪೋಷಣೆಗೆ ಸರ್ಕಾರ ತಕ್ಷಣ ಅನುದಾನ ಒದಗಿಸಬೇಕು. ಸಂಸ್ಕೃತ ವಿವಿಗೆ ಇಲ್ಲದ ಅನುದಾನದ ಕೊರತೆ ಕನ್ನಡ ವಿವಿಗೆ ಇದೆಯೆಂದರೆ ಏನರ್ಥ?-ಬಂಜಗೆರೆ ಜಯಪ್ರಕಾಶ್
ಡಾ.ಕೆ.ವಿ.ನಾರಾಯಣ ಭಾಷಾಶಾಸ್ತ್ರಜ್ಞರ ಅಭಿಪ್ರಾಯ
ಭಾರತ ಸರಕಾರ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನವನ್ನು ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ ಬದಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಕನ್ನಡ ವಿಶ್ವವಿದ್ಯಾಲಯದ ಸ್ವರೂಪವನ್ನು ಬದಲಿಸುವ ಯತ್ನಕ್ಕೆ ಮುಂದಾಗಿರುವಂತೆ ತೋರುತ್ತದೆ. ಇದು ನನ್ನ ಅನಿಸಿಕೆ. ಕನ್ನಡ ವಿಶ್ವವಿದ್ಯಾಲಯದ ಏಕಘಟಿಕೀಯ(ಯೂನಿಟರಿ) ಸ್ವರೂಪವನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಸಂಲಗ್ನ(ಅಫಿಲಿಯೇಟಿಂಗ್) ವಿಶ್ವವಿದ್ಯಾಲಯವನ್ನಾಗಿ ಬದಲಿಸುವುದು ಸರಿಯಲ್ಲ.
ಮನೆಮನೆ ಮಾತಾದ ಗೋಲ್ಡ್ ವಿನ್ನರ್ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ