Get Updates
Get notified of breaking news, exclusive insights, and must-see stories!

ಎಲ್ಲದ್ದಕ್ಕೂ ಬಂದ್ ಮಾಡುವುದೇ ಪರಿಹಾರವಲ್ಲ: ನಾರಾಯಣಗೌಡ

ಬೆಂಗಳೂರು, ಡಿಸೆಂಬರ್ 22: ಡಿಸೆಂಬರ್ 31ರಂದು ಕರ್ನಾಟಕ ಬಂದ್​ಗೆ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಸಭೆ ಸೇರಿ ಬಂದ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸುಮಾರು 35ಕ್ಕೂ ಅಧಿಕ ಸಂಘಟನೆಗಳಿಂದ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣ ಗೌಡ, ''ಎಲ್ಲದ್ದಕ್ಕೂ ಬಂದ್ ಮಾಡುವುದೇ ಪರಿಹಾರವಲ್ಲ, ಜನತೆ ಕೊರೊನಾ ಸಾಂಕ್ರಾಮಿಕದಿಂದ ಬಳಲಿದ್ದಾರೆ, ಪ್ರತಿಭಟನೆಗೆ ಬೇರೆ ಸ್ವರೂಪಗಳಿವೆ,'' ಎಂದಿದ್ದಾರೆ.

''ಎಂಇಎಸ್ ಸಂಘಟನೆ ನಿಷೇಧ ಹೇರಬೇಕು, ಇದು ಕರವೇ ಆಗ್ರಹವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ, ಬಂದ್ ಮಾಡಬೇಡಿ ಎಂದು ನಾನು ಹೇಳಲು ಸಾಧ್ಯವಿಲ್ಲ, ಎಲ್ಲದ್ದಕ್ಕೂ ಬಂದ್ ಮಾಡುವುದೇ ಪರಿಹಾರವಲ್ಲ. ಡಿಸೆಂಬರ್ 31ರಂದು ಕರವೇ ಬೇರೆ ರೀತಿಯಲ್ಲಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಿದೆ,
ಕಪ್ಪು ಬಾವುಟ ಪ್ರದರ್ಶನ, ರಾಜಭವನ ಮುತ್ತಿಗೆ, ಧಿಕ್ಕಾರ ಕೂಗುವುದು ಹೀಗೆ ಬೇರೆ ಬೇರೆ ಸ್ವರೂಪದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬಹುದು. ಎಲ್ಲಾ ಕನ್ನಡ ಸಂಘಟನೆಗಳ ನಿಲುವು ಒಂದೇ, ಪ್ರತಿಭಟನೆ ಸ್ವರೂಪ ಬೇರೆ,'' ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ ನಾರಾಯಣ ಗೌಡ ತಿಳಿಸಿದರು.

ಶಿವಕುಮಾರ್ ನಾಯಕ್ ವಿರೋಧ: ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಬಂದ್ ಮಾಡಲು ವಾಟಾಳ್ ನಾಗರಾಜ್ ಕರೆ ನೀಡಿದ ವೇಳೆ ಹೋರಾಟಗಾರ ಶಿವಕುಮಾರ್ ನಾಯಕ್ ವಿರೋಧ ವ್ಯಕ್ತಪಡಿಸಿದರು. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಂದ್ ಬೇಡ, ಬೇರೆ ದಿನಾಂಕ ಇರಲಿ ಎಂದು ಹೇಳಿದ್ದಾರೆ. ಆದರೆ, ಇದರಿಂದ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಘಟನಾ ಸ್ಥಳದಿಂದ ಶಿವಕುಮಾರ್ ನಾಯಕ್ ಅವರನ್ನು ದೂರಕ್ಕೆ ಕರೆದೊಯ್ದಿದ್ದಾರೆ.

Karave Narayana Gowda on Karnataka Bandh called by Vatal Nagaraj

ಸರ್ಕಾರಕ್ಕೆ ಡೆಡ್ ಲೈನ್: ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸದನದಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ, ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ. ಡಿಸೆಂಬರ್ 29ರೊಳಗೆ ಈ ಬಗ್ಗೆ ನಿರ್ಧಾರ ಪ್ರಕಟಿಸಲು ಡೆಡ್ ಲೈನ್ ನೀಡಲಾಗಿದೆ. ಡಿ.31ರಂದು ಸಿನಿಮಾ ಚಿತ್ರೀಕರಣ ಸೇರಿದಂತೆ ಎಲ್ಲಾ ಚಟುವಟಿಕೆಗಳು ಬಂದ್ ಆಗಲಿವೆ ಎಂದು ಸಾ.ರಾ ಗೋವಿಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರು ಉಪಸ್ಥಿತರಿದ್ದರು.

ಲಾರಿ ಮಾಲೀಕರ ಸಂಘ, ಆಟೋ ಚಾಲಕರು, ಟ್ಯಾಕ್ಸಿ ಮಾಲೀಕರು, ಹೋಟೆಲ್ ಮಾಲೀಕರು, ಶಿಕ್ಷಣ ಸಂಸ್ಥೆ, ದಲಿತ ಸಂಘರ್ಷ ಸಮಿತಿ, ಕೈಗಾರಿಕಾ, ಬೀದಿಬದಿ ವ್ಯಾಪರಿಗಳು, ಸಾರಿಗೆ ನೌಕರರು, ಸಿನಿಮಾ, ಅಂಗಡಿ ಮಾಲೀಕರು, ಗಾರ್ಮೆಂಟ್ಸ್ ನೌಕರರು, ಸರ್ಕಾರಿ ನೌಕರರು, ಅಖಿಲ ಭಾರತ ಚಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ ಸೇರಿದಂತೆ ಸುಮಾರು 35 ಸಂಘಟನೆಗಳಿಂದ ಕರ್ನಾಟಕ ಬಂದ್‌ಗೆ ಬೆಂಬಲ ಸಿಕ್ಕಿದೆ.

ಕರವೇ ಬೇಡಿಕೆಗಳು:
* ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ವಿರೂಪಗೊಳಿಸಿದ ಎಲ್ಲ ಭಯೋತ್ಪಾದಕರ ಮೇಲೂ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷಿಸಬೇಕು. ಎಲ್ಲರನ್ನೂ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕು.
* ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ಈ ಕೂಡಲೇ ಕರ್ನಾಟಕದಲ್ಲಿ ನಿಷೇಧಿಸಬೇಕು. ಈ ಸಂಘಟನೆಗಳ ಮುಖಂಡರನ್ನು ಗಡಿಪಾರು ಮಾಡಬೇಕು. * ಬೆಳಗಾವಿಯಲ್ಲಿ, ಬೆಂಗಳೂರಿನಲ್ಲಿ ಮತ್ತು ರಾಜ್ಯದ ವಿವಿಧೆಡೆ ಬಂಧನಕ್ಕೆ ಒಳಗಾಗಿರುವ ಎಲ್ಲ ಕನ್ನಡಪರ ಕಾರ್ಯಕರ್ತರನ್ನೂ ಕೂಡಲೇ ಬಿಡುಗಡೆ ಮಾಡಬೇಕು. * ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ, ಕನ್ನಡಿಗರ ಮೇಲೆ, ಕನ್ನಡಿಗರ ಆಸ್ತಿಪಾಸ್ತಿ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಒತ್ತಡ ಹೇರಬೇಕು.

"ರಾಜ್ಯ ಸರ್ಕಾರಕ್ಕೆ ಸ್ವಾಭಿಮಾನ ಎಂಬುವುದು ಇದೆ ಎಂದಾದರೆ ಸರ್ಕಾರ ಕೂಡಲೇ ಎಂಇಎಸ್ ನಿಷೇಧಿಸಲಿ. ಎಂಇಎಸ್ ಗೂಂಡಾಗಿರಿ ಮಾಡುತ್ತಿದೆ. ಕನ್ನಡಿಗರ ಸ್ವಾಭಿಮಾನವನ್ನು ಎಂಇಎಸ್ ಕೆರಳಿಸುತ್ತಿದೆ. ಕನ್ನಡಿಗರ ಮನೆಗೆ ಬೆಂಕಿ ಹಚ್ಚುತ್ತಿದ್ದಾರೆ. ಆದರೆ ಸರ್ಕಾರ ಎಲ್ಲನ್ನೂ ನೋಡಿಕೊಂಡು ಸುಮ್ಮನಿದೆ. ಇದು ರಣಹೇಡಿ ಸರ್ಕಾರ," ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಟೀಕೆ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+