ಡಿಕೆಶಿ, ಬೇಗ್ ಮೇಲಿನ ಆರೋಪಗಳಿಗೆ ಸಿಬಲ್ ಕ್ಲೀನ್ ಚಿಟ್!
ಬೆಂಗಳೂರು, ಡಿ. 18 : ಲೋಕಸಭೆಗೆ ಚುನಾವಣೆಗೆ ಮುನ್ನ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದು ಕುಳಿತಿದ್ದಾರೆ. ಆದರೆ, ರೋಷನ್ ಬೇಗ್ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಮತ್ತು ವಿಧಾನಸಭೆಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಬೇಕು ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಸಿಎಂಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ ಮೇಲೆ ಹಲವು ಆರೋಪಗಳಿದ್ದವು. ಆದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದರು. ಸದ್ಯ ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಉಭಯ ನಾಯಕರ ಮೇಲಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ ವಿರುದ್ಧ ದಾಖಲಾಗಿರುವುದು ಖಾಸಗಿ ದೂರು, ಇವುಗಳು ರಾಜಕೀಯ ಪ್ರೇರಿತವಾಗಿ ದಾಖಲಾಗಿರುವಂತಹವು ಆದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದು ಕಪಿಲ್ ಸಿಬಲ್ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ. [ಡಿಕೆಶಿ, ರೋಷನ್ ಬೇಗ್ ಗೆ ಸಚಿವ ಸ್ಥಾನ]
ಸಚಿವ ಸಂಪುಟ ವಿಸ್ತರಣೆ ದಿನಾಂಕವನ್ನು ನಿರ್ಧರಿಸುವ ತೀರ್ಮಾನವನ್ನು ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ. ಆದರೆ, ಆದಷ್ಟು ಬೇಗ ವಿಸ್ತರಣೆ ನಡೆಯಬೇಕು ಎಂದು ಸಿಬಲ್ ಸಿದ್ದರಾಮಯ್ಯ ಅವರಿಗೆ ನೀಡಿರುವ ಸೂಚನೆಯಲ್ಲಿ ತಿಳಿಸಿದ್ದಾರೆ. ಸಂಪುಟ ವಿಸ್ತರಣೆಯೊಂದಿಗೆ ವಿಧಾನಸಭೆ ನಾಮ ನಿರ್ದೇಶಿತ ಸದಸ್ಯರಾಗಿ ಮಹಿಳೆಯೊಬ್ಬರನ್ನು ನೇಮಕ ಮಾಡುವಂತೆಯೂ ತಿಳಿಸಲಾಗಿದೆ.
ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ ಸಂದರ್ಭದಲ್ಲಿ ಸೂಚನೆ ನೀಡಲಾಗಿತ್ತು. ಆದರೆ, ಅವರ ಮೇಲೆ ಹಲವಾರು ಆರೋಪಗಳಿವೆ ಎಂದು ಸಿಎಂ ಹಿಂದೇಟು ಹಾಕಿದ್ದರು. ಸದ್ಯ ಅವುಗಳಿಗೂ ಕಪಿಲ್ ಸಿಬಲ್ ಕ್ಲಿನ್ ಚಿಟ್ ನೀಡಿದ್ದು, ಸಂಪುಟ ವಿಸ್ತರಣೆಗೆ ಇದ್ದ ಅಡೆ-ತಡೆಗಳು ಬಗೆಹರಿದಂತಾಗಿದೆ.












Click it and Unblock the Notifications