ಕನ್ನಡಿಗರಿಗೆ ಶೇ.50ರಷ್ಟು ಮೀಸಲಾತಿ ದೊರೆಯಬೇಕು: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು, ನ.16: "ರಾಜ್ಯದಲ್ಲಿ ಐಟಿ -ಬಿಟಿಗಳಲ್ಲಿ ಹೊರರಾಜ್ಯದವರಿಗೆ ಸಿಗುವ ಮಾನ್ಯತೆ ಕನ್ನಡಿಗರಿಗೆ ಸಿಗುತ್ತಿಲ್ಲ, ಯುವಕರಿಗೆ ಅದರಲ್ಲೂ ಕನ್ನಡಿಗರಿಗೆ ಶೇ.50ರಷ್ಟು ಮೀಸಲಾತಿ ದೊರೆಯಬೇಕು" ಎಂದು ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಹೆಚ್. ಎಂ. ಟಿ ಮೈದಾನದಲ್ಲಿ ಆಯೋಜಿಸಿದ್ದ ಹೆಬ್ಬಾಳ ಚಿಣ್ಣರ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಮಕ್ಕಳ ಸರ್ವತೋಮುಖ ಅಭಿವೃದ್ಧಿಯಿಂದ ಸಮರ್ಥ ದೇಶ ನಿರ್ಮಾಣ ಸಾಧ್ಯ. ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ಅದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ" ಎಂದರು.
"35 ಶಾಲೆಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಜೆಡಿಎಸ್ ಅಭ್ಯರ್ಥಿ ಡಾ. ಸೈಯದ್ ಅಲ್ತಾಫ್ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ಅದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಮಕ್ಕಳು ದೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದ್ದಾರೆ. ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಬೇಕು. ಅವರ ಸರ್ವತೋಮುಖ ಅಭಿವೃದ್ದಿಯಿಂದ ಸಮರ್ಥ ದೇಶವನ್ನು ನಿರ್ಮಾಣ ಮಾಡಲು ಸಾಧ್ಯ" ಎಂದು ತಿಳಿಸಿದರು.
ಐಟಿ ಬಿಟಿಗಳಲ್ಲಿ ಕನ್ನಡಿಗರಿಗೆ ಮಾನ್ಯತೆ ಸಿಗುತ್ತಿಲ್ಲ
"ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದು. ಐಟಿ ಬಿಟಿಗಳಲ್ಲಿ ಹೊರರಾಜ್ಯದವರಿಗೆ ಸಿಗುವ ಮಾನ್ಯತೆ ಕನ್ನಡಿಗರಿಗೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಯುವಕರಿಗೆ ಅದರಲ್ಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ ದೊರೆಯಬೇಕು. ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಬೇಕು" ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
'ಜೆಡಿಎಸ್ಗೆ ಅಧಿಕಾರ ನೀಡಿ ನಿರುದ್ಯೋಗ ಹೋಗಲಾಡಿಸುತ್ತೇವೆ'
ಕಾರ್ಯಕ್ರಮದಲ್ಲಿ ನಿರುದ್ಯೋಗ ಮತ್ತು ಕನ್ನಡಿಗರಿ ಮಾನ್ಯತೆ ಸಿಗುತ್ತಿಲ್ಲ ಎಂಬ ವಿಷಯಗಳನ್ನು ಪ್ರಸ್ತಾಪಿಸಿರುವ ನಿಖಿಲ್ ಕುಮಾರಸ್ವಾಮಿ, "ಕನ್ನಡಿಗರ ಪ್ರಾದೇಶಿಕ ಪಕ್ಷ ಜೆಡಿಎಸ್ ಮಾತ್ರ. ಒಂದು ಬಾರಿ ಕುಮಾರಣ್ಣನಿಗೆ ಐದು ವರ್ಷದ ಕಾಲ ಅಧಿಕಾರ ಕೊಟ್ಟು ನೋಡಿ, ನಿರುದ್ಯೋಗ ಸಮಸ್ಯೆಯನ್ನು ದೂರಮಾಡುವುದು ಖಂಡಿತ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದುವರಿದು, ಹಲವು ಪ್ರಶ್ನೆಗಳಿಗೆ ಉತ್ತರ ಕೊಡುವಂತಹ ನಾಯಕತ್ವದ ಕೊರತೆಯನ್ನು ನಾವು ನೀಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕನ್ನಡ ಹಬ್ಬ ರಾಕಧಾನಿಯಲ್ಲಿ ಹೊಸ ಆಶಾಕಿರಣ
ಕಾರ್ಯಕ್ರಮದ ಆಯೋಜಕರಾದ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಸೈಯದ್ ಮೋಹಿದ್ ಅಲ್ತಾಫ್ ಮಾತನಾಡಿ, "ರಾಜಧಾನಿಯಲ್ಲಿ ಕನ್ನಡ ಮಾಯವಾಗುತ್ತಿದೆ ಅನ್ನೋ ಕೊರಗಿನ ಮಧ್ಯೆ ಈ ಕನ್ನಡ ಹಬ್ಬ ಹೊಸ ಆಶಾಕಿರಣವಾಗಲಿದೆ. ಮಕ್ಕಳಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿ ಮೂಡಿಸಲು ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ" ಎಂದಿದ್ದಾರೆ.
"ನಮ್ಮ
ನಾಯಕರು,
ಮಾಜಿ
ಮುಖ್ಯಮಂತ್ರಿ
ಕುಮಾರಸ್ವಾಮಿ
ಅವರ
ಸಂದೇಶದಂತೆ
ಕನ್ನಡ
ನೆಲ,
ಕನ್ನಡ
ಭಾಷೆಯನ್ನು
ಬೆಳೆಸುವುದೇ
ನಮ್ಮ
ನಮ್ಮ
ಪ್ರಾದೇಶಿಕ
ಪಕ್ಷ
ಜೆಡಿಎಸ್ನ
ಪ್ರಥಮ
ಆದ್ಯತೆ.
ಹಾಗಾಗಿ
ನಾವು
ಈ
ವಿಶಿಷ್ಟ
ಕನ್ನಡ
ಉತ್ಸವವನ್ನು
ಆಚರಿಸುತ್ತಿದ್ದೇವೆ"
ಎಂದು
ಮಾಹಿತಿ
ನೀಡಿದ್ದಾರೆ.
ಕನ್ನಡದ 28ಕ್ಕೂ ಹೆಚ್ಚು ಉಪಾಧ್ಯಾಯರಿಗೆ ಸನ್ಮಾನ
ಚಿಣ್ಣರ ಕನ್ನಡ ಹಬ್ಬದಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮೂವತ್ತಕ್ಕೂ ಹೆಚ್ಚಿನ ಶಾಲೆಗಳ ಐನ್ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳಿಗೆ ಸಮೂಹ ನೃತ್ಯ ಸ್ಪರ್ಧೆ ಹಾಗೂ ಮಾದರಿ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಿಖಿಲ್ ಕುಮಾರಸ್ವಾಮಿ ನಗದು ಬಹುಮಾನ ಹಾಗೂ ಟ್ರೋಫಿ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸೇವೆ ಸಲ್ಲಿಸುತ್ತಿರುವ ವಿವಿಧ ಶಾಲೆಗಳ ಕನ್ನಡದ 28ಕ್ಕೂ ಹೆಚ್ಚು ಉಪಾಧ್ಯಾಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೆ. ಎ. ತಿಪ್ಪೇಸ್ವಾಮಿ, ಹಾಗೂ ವಿಧಾನಪರಿಷತ್ ಸದಸ್ಯ ಡಾ. ಟಿ. ಎ. ಶರವಣ ಉಪಸ್ಥಿತರಿದ್ದರು.