ನೆರೆರಾಜ್ಯದಂತೆ ಇಲ್ಲಿ ಕನ್ನಡ ಕಡ್ಡಾಯ ಕಾನೂನು ಜಾರಿ ಆಗಲಿ: ಕಸಾಪ ಪತ್ರ
ಬೆಂಗಳೂರು, ಜನವರಿ 19: ತಮಿಳುನಾಡು ರಾಜ್ಯದಲ್ಲಿ ಸ್ಥಳಿಯ ಭಾಷೆ ತಮಿಳು ಕಡ್ಡಾಯವಾದಂತೆ ಕರ್ನಾಟಕದ ಈ ನೆಲ್ಲದಲ್ಲು ಕನ್ನಡ ಕಡ್ಡಾಯ ಮಾಡಬೇಕು. ಅದಕ್ಕಾಗಿ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ - 2022' ವನ್ನು ಕಾನೂನು ಮಾಡುವುದಕ್ಕೆ ಸುಗ್ರಿವಾಜ್ಞೆಯ ಮೂಲಕ ಜಾರಿ ತರುವಂತೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಆಗ್ರಹಿಸಿದೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ - 2022' ಜಾರಿಗೆ ತರುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಕಳೆದ ಎರಡು ಅಧಿವೇಶನದಲ್ಲಿ ಕನ್ನಡ ಭಾಷೆ ಕುರಿತು ಎಲ್ಲ ಶಾಸಕರು, ನಾಯಕರು ಪಕ್ಷ ಬೇಧ ಮರೆತು ಚರ್ಚಿಸಲಿಲ್ಲ. ಜಾರಿಗೆ ಆಗ್ರಹಿಸಲಿಲ್ಲ ಎಂದು ಪತ್ರದಲ್ಲಿ ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲಂಚದ ಆರೋಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಸಾಕಷ್ಟು ಭಾರಿ ಕನ್ನಡಕ್ಕಾಗಿ, ಈ ನಾಡಿನ ಜನತೆಗಾಗಿ ಕನ್ನಡ ಕಡ್ಡಾಯಗೊಳಿಸುವಂತೆ ಆಗ್ರಹಿಸುತ್ತಲೇ ಬಂದಿದ್ದೇವೆ. ಭಾಷೆಯ ಉಳಿವಿಗೆ ಹೋರಾಡುತ್ತಾ ಬಂದರೂ ಇನ್ನೂ ಕಾನೂನು ಆಗಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಸುಗ್ರಿವಾಜ್ಞೆ ತರುವ ಮೂಲಕ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ - 2022' ಅನುಷ್ಠಾನಕ್ಕೆ ತರುವಂತೆ ಅವರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.
ತಮಿಳುನಾಡಿನಲ್ಲಿ ಭಾಷೆ ಕಡ್ಡಾಯ, ಅದರ ಲಾಭವೇನು?
ತಮಿಳುನಾಡು ಸರ್ಕಾರ 2016ರಲ್ಲಿ ತಮಿಳುನಾಡು ರಾಜ್ಯ ಸಾರ್ವಜನಿಕ ಸೇವಾ ಕಾಯಿದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಅಲ್ಲಿನ ವಿಧಾನಸಭೆ ಶುಕ್ರವಾರ ಧ್ವನಿ ಮತದ ಮೂಲಕ ಅನುಮೋದಿಸಿದೆ. ಜೊತೆಗೆ ತಮಿಳುನಾಡು ರಾಜ್ಯ ಸರ್ಕಾರಿ ಸೇವೆಗಳ ನೇಮಕಾತಿಗೆ ತಮಿಳು ಭಾಷಾ ಪತ್ರಿಕೆಯಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯ ಮಾಡಲಾಗಿದೆ. ಈ ತಿದ್ದುಪಡಿಯ ಅನುಸಾರ, ತಮಿಳು ಭಾಷೆಯ ಅಗತ್ಯ ಜ್ಞಾನವಿದ್ದರೂ, ಅಂತಹ ವ್ಯಕ್ತಿ ನೇರ ನೇಮಕಾತಿ ಮೂಲಕ ಯಾವುದೇ ಸೇವೆಗೆ ಅರ್ಹನಾಗಿರುವುದಿಲ್ಲ. ಬದಲಿಗೆ ತಮಿಳು ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಸರ್ಕಾರಿ ಸೇವೆ ಮತ್ತು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕೆಲಸ ಮಾಡಲು ಅರ್ಹರು ಎಂದು ತಮಿಳುನಾಡು ಸರ್ಕಾರ ಕಾನೂನು ಮಾಡಿ ಪ್ರಕಟಣೆ ಹೊರಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ತಮಿಳುನಾಡಿನಲ್ಲಿ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ವೇಳೆ ತಮಿಳು ಭಾಷೆ ಬಗ್ಗೆ ಜ್ಞಾನವಿಲ್ಲದವರು ಒಂದು ವೇಳೆ ಅರ್ಹರಾಗುತ್ತಾರೆ ಎಂದು ಭಾವಿಸೋಣ. ಆಗ ಅವರು ನೇಮಕಾತಿಯ ದಿನಾಂಕದಿಂದ ಎರಡು ವರ್ಷಗಳ ಒಳಗೆ ತಮಿಳಿನಲ್ಲಿ 'ದ್ವಿತೀಯ ತರಗತಿ ಭಾಷೆ ಪರೀಕ್ಷೆ'ಯಲ್ಲಿ ಕನಿಷ್ಠ 40 ಅಂಕ ಪಡೆದು ಉತ್ತೀರ್ಣರಾಗಬೇಕು. ಈ ನಿಯಮ ಅಲ್ಲಿನ ಕಾನೂನಿನಲ್ಲಿದೆ. ಅಭ್ಯರ್ಥಿಗಳು ಇದರಲ್ಲಿ ವಿಫಲರಾದರೆ ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ.
ಸರ್ವಾನುಮತದಿಂದ ಅಂಗೀಕಾರ
ತಮಿಳುನಾಡು ಸರ್ಕಾರಿ ಸೇವೆಗಳಿಗೆ ಸ್ಥಳೀಯ ತಮಿಳರನ್ನು ಮಾತ್ರವೇ ನೇಮಕಾತಿ ಮಾಡಿಕೊಳ್ಳಬೇಕು. ಈ ಬಗ್ಗೆ ಖಾತರಿಪಡಿಸಲು ವಿಧೇಯಕವನ್ನು ಮರು ಪರಿಶೀಲನೆ ನಡೆಸಬೇಕೆಂದು ಮನವಿ ಮಾಡಲಾಗಿತ್ತು. ತಮಿಳಿಗರಿಗೆ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಒತ್ತಾಯ ಕೇಳಿ ಬಂತು. ಹೀಗೆ ಅಲ್ಲಿನ ಸರ್ಕಾರಿ ಧ್ವನಿ ಮತದ ಮೂಲಕ ಸರ್ವಾನುಮತ ಪಡೆದು ಕಾನೂನು ಅಂಗೀಕರಿಸಿದೆ ಎಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಅದೇ ರೀತಿ ಕರ್ನಾಟಕದಲ್ಲೂ ಇಲ್ಲಿನ ಭಾಷೆ ಕನ್ನಡಕ್ಕಾಗಿ, ಇಲ್ಲಿನ ಯುಕವರಿಗೆ ನೆರವಾಗಲಿರುವ ಈ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022' ಜಾರಿಗೆ ತರಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.