ಗೌಡ್ರೆ, ನಿಮ್ ಕೈಯಲ್ಲಿ ಏನೂ ಮಾಡೋಕಾಗಲ್ವಾ?
ಪ್ರ : ಹಾಗಿದ್ರೆ ನಿಮ್ಮ ಕೈಯಲ್ಲಿ ಏನೂ ಮಾಡೋಕಾಗಲ್ಲ ಅಂತೀರಾ?
ನಾ. ಗೌಡ : ಏನೂ ಮಾಡೋಕಾಗಲ್ಲ ಅಂತಲ್ಲ. ಆದರೆ, ನಾವು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧವೇ ಹೋರಾಟ ಮಾಡಬೇಕು. ಕನ್ನಡಿಗರ ಮೇಲೆ ಕನ್ನಡಿಗರೇ ಹೋರಾಟ ಮಾಡಬೇಕು. ನೋಡಿ, ನಷ್ಟ ಯಾರಿಗೆ? ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೇ ನಷ್ಟ. ಕಡಿವಾಣ ಹಾಕದಿದ್ದರಿಂದ ತಮಿಳು ಚಿತ್ರಗಳು ನೂರು ದಿನ ಓಡುವಂತಾಗಿದೆ. ಬೇರೆ ಚಿತ್ರಗಳಿಗೆ ಕಡಿವಾಣ ಹಾಕಿ. ಆಗ ಮಾತ್ರ ಕನ್ನಡಿಗರು ಕನ್ನಡ ಚಿತ್ರ ಬಂದು ನೋಡುತ್ತಾರೆ. ಕೆಟ್ಟ ಚಿತ್ರಗಳನ್ನು ಬಲವಂತವಾಗಿ ನೋಡಬೇಕಂತಲ್ಲ, ಒಳ್ಳೆಯ ಚಿತ್ರವಿದ್ದರೆ ಖಂಡಿತ ನೋಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್ ಅಂಥ ವ್ಯಕ್ತಿಯೊಬ್ಬ ಇಲ್ಲ. ಉರಿಯುವ ಮನೆಯಲ್ಲಿ ಗಳ ಹಿರಿಯುವಂಥವರೇ ಅನೇಕರಿದ್ದಾರೆ.
ಪ್ರ : ಚಿತ್ರರಂಗದಲ್ಲಿ ಡಬ್ಬಿಂಗ್ ಬೇಕಾ, ಬೇಡವಾ? ಇದಕ್ಕೆ ನಿಮ್ಮ ನಿಲುವೇನು?
ನಾ. ಗೌಡ : ಅಂಥ ಯಾವುದೇ ತೀರ್ಮಾನ ನಾವು ತೆಗೆದುಕೊಂಡಿಲ್ಲ. ಕನ್ನಡದ ಭಾಷೆ ಬೆಳವಣಿಗೆಗೆ, ಕನ್ನಡದ ಲಾಭಕ್ಕೆ, ಕನ್ನಡ ವಿಶ್ವವ್ಯಾಪಿಯಾಗಲು ಯಾವುದು ಸೂಕ್ತವೋ ಅದರ ಪರವಾಗಿ ನಾವಿರುತ್ತೇವೆ.

ಪ್ರ : ನಿಮ್ಮ ಕನ್ನಡಪರ ಹೋರಾಟ ರಾಜಕೀಯ ಮೆಟ್ಟಿಲ ಬಳಿ ಬಂದು ನಿಂತಿದೆ. ನಿಮ್ಮ ರಾಜಕೀಯ ಕನಸುಗಳೇನು? ಮುಖ್ಯಮಂತ್ರಿಯಾಗುವುದಾ?
ನಾ. ಗೌಡ : ಪ್ರಾದೇಶಿಕವಾದ ಪಕ್ಷ ಕಟ್ಟುವ ಅಗತ್ಯವಿದೆ. ಅವುಗಳಿಗೆ ಆದ್ಯತೆ ಸಿಗುತ್ತದೆ. ದಲಿತಪರ, ರೈತಪರ, ಕನ್ನಡಪರ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು. ಆದರೆ, ನನಗೆ ಇನ್ನೂ ಅಂಥ ಸಾಧ್ಯತೆಗಳ ಬಗ್ಗೆ ನಂಬಿಕೆ ಹುಟ್ಟಿಲ್ಲ. ಅಂಥ ನಂಬಿಕೆ ಬಂದರೆ ಖಂಡಿತ ಪ್ರಾದೇಶಿಕ ಪಕ್ಷಗಳ ಜೊತೆ ಕೈಜೋಡಿಸಿ ಕೆಲಸ ಮಾಡುತ್ತೇನೆ.
ಪ್ರ : ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರಿಗೆ ಸಂದೇಶ?
ನಾ. ಗೌಡ : ಕನ್ನಡಿಗರು ವಿಶ್ವವ್ಯಾಪಿಯಾಗಿ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾಗುವಂತಾಗಬೇಕು. ಕನ್ನಡಿಗರು ಬೇರೆಯವರಿಗೆ ಕನ್ನಡ ಮಾತಾಡಿ ಅನ್ನುವ ಮೊದಲು ಕನ್ನಡಿಗರು ಕನ್ನಡವನ್ನು ಹೆಚ್ಚು ಪ್ರೀತಿಸುವಂಥದ್ದು, ಮಾತಾಡುವಂಥದ್ದು ಆಗಬೇಕು. ಕನ್ನಡಿಗರಿಗೆ ಹೃದಯವೈಶಾಲ್ಯತೆ ಇರಬೇಕು ನಿಜ. ಆದರೆ, ಅವರ ಭಾಷೆ ಕಲಿತು ಉದ್ಧಾರವಾಗುತ್ತೇನೆ ಎಂಬ ಮೂಢತೆಯಿಂದ ಕನ್ನಡಿಗರು ಹೊರಬರಬೇಕು. ಎಲ್ಲ ಕ್ಷೇತ್ರಗಳಲ್ಲಿ ಕನ್ನಡಿಗರು ಸಾರ್ವಭೌಮರಾಗಿರಬೇಕು ನನ್ನ ಗುರಿ. ಅದಕ್ಕಾಗಿ ಕನ್ನಡಿಗರು ಒಗ್ಗೂಡಬೇಕು, ಕನ್ನಡದನಿ ಒಂದಾಗಬೇಕು.
ಪ್ರ : ಕೊನೆಯದಾಗಿ, ಕನ್ನಡಪರ ಹೋರಾಟ ಮಾಡುತ್ತಿರುವ ಕನ್ನಡ ರಕ್ಷಣಾ ವೇದಿಕೆಯನ್ನೇ ಯಾಕೆ ಎಚ್ಚರಿಸುವಂತಾಗಬೇಕು?
ನಾ. ಗೌಡ : ಹೌದು, ಖಂಡಿತ ಎಚ್ಚರಿಸಬೇಕು. ನಮ್ಮನ್ನೂ ಒಂದೊಂದು ಸಾರಿ ಎಚ್ಚರಿಸಬೇಕಾಗುತ್ತದೆ. ಸಮಸ್ಯೆಗಳ ನಡುವಿನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಗೊಂದಲದಲ್ಲಿದ್ದಾಗ ನಮ್ಮನ್ನೂ ಮಾಧ್ಯಮದವರು ಎಚ್ಚರಿಸಬೇಕಾಗುತ್ತದೆ. ಯಾರೋ ಮಾಡಿದ ತಪ್ಪಿಗೆ ಎಲ್ಲರನ್ನೂ ಅನುಮಾನದಿಂದ ನೋಡುವಂತಾದಾಗ, ಏನೇ ಸಮಸ್ಯೆ ಬಂದರೂ ಏಕದೃಷ್ಟಿಯಿಂದ ಚಿಂತನೆ ನಡೆಸುವ ಬದಲು, ಇತರರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರುವುದು ಸೂಕ್ತ. ಆದರೆ, ನಾವು ಕಣ್ಣುಮುಚ್ಚಿ ಕುಳಿತಿದ್ದೇವೆ ಅಂತಲ್ಲ. ಧಾರ್ಮಿಕ ಸ್ವಾಮೀಜಿ ಏನೋ ಮಾಡಿದ ಅಂತ ಬೀದಿಗಿಳಿಯುವುದೂ ಸರಿಯಲ್ಲ.











Click it and Unblock the Notifications